ಜನ ತಮ್ಮ ಮನವಿ ಅಥವಾ ಅಹವಾಲುಗಳನ್ನು ಸಲ್ಲಿಸಿದಾಗ ಅವುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಿ. ಕುರ್ಚಿ ಅಡಿ ಹಾಕಿಕೊಂಡು ಕೂರಬೇಡಿ ಎಂದು ಹೈಕೋರ್ಟ್ ಸರ್ಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದೆ.
ಬೆಳೆ ಹಾನಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರೂ ಈ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಹಾಸನ ಜಿಲ್ಲೆಯ ರಾಣಿ ಮಲ್ಲೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಸಕಲೇಶಪುರದ ದೋಣಿಗಲ್ ಗ್ರಾಮದಲ್ಲಿರುವ ತಮ್ಮ ಜಮೀನ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಲಾಗಿದೆ. ಈ ವೇಳೆ ಕಾಮಗಾರಿ ಸರಿಯಾಗಿ ನಿರ್ವಹಿಸದ ಪರಿಣಾಮ ನೀರು ಕಾಫಿ ತೋಟಕ್ಕೆ ನುಗ್ಗಿ ಬೆಳೆ ಹಾನಿಯಾಗಿದೆ. ಫಸಲು ಹಾಳಾಗಿರುವುದಕ್ಕೆ ಪರಿಹಾರ ನೀಡುವಂತೆ ಕೋರಿ ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪರಿಗಣಿಸಿಲ್ಲ. ಆದ್ದರಿಂದ ಸೂಕ್ತ ಪರಿಹಾರ ನೀಡಲು ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪು: ಅರ್ಜಿದಾರರ ಮನವಿ ಪರಿಶೀಲಿಸಿದ ಪೀಠ, ಸರ್ಕಾರದ ಇಲಾಖೆಗಳಿಗೆ ಮನವಿ ಸಲ್ಲಿಸಿದಾಗ ಅದನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಇಲಾಖೆಗಳು ಇತ್ಯರ್ಥಪಡಿಸಬೇಕು. ಜನರು ಸಲ್ಲಿಸಿದ ಮನವಿಗಳನ್ನು ಹಾಗೆಯೇ ಇಟ್ಟುಕೊಂಡು ಕೂರಬಾರದು. ಒಂದು ವೇಳೆ ನಿರ್ಲಕ್ಷಿಸಿ ಕೂತರೆ ಜನ ನ್ಯಾಯಾಲಯದ ಕದ ತಟ್ಟುವುದು ಅನಿವಾರ್ಯವಾಗುತ್ತದೆ. ಅದಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡದೆ ಮನವಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಅದರಂತೆ, ಅರ್ಜಿದಾರರಾದ ರಾಣಿ ಮಲ್ಲೇಶ್ ಅವರು 2019ರಲ್ಲಿ ಸಲ್ಲಿಸಿರುವ ಮನವಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 8 ವಾರಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಆದೇಶಿಸಿದೆ.
ಅಲ್ಲದೇ, ನ್ಯಾಯಾಲಯದ ಆದೇಶದ ದೃಢೀಕೃತ ಪ್ರತಿಗಾಗಿ ಅಧಿಕಾರಿಗಳು ಕಾಯುತ್ತಾ ಕಾಲಹರಣ ಮಾಡಬಾರದು. ಹೈಕೋರ್ಟ್ ವೆಬ್ ಸೈಟ್ ನಲ್ಲಿ ಆದೇಶದ ಪ್ರತಿಗಳು ಅಪ್ಲೋಡ್ ಆದ ಬಳಿಕ ಅಥವಾ ಅರ್ಜಿದಾರರು ಅಂತಹ ಪ್ರತಿಯನ್ನು ನೀಡಿದ ತಕ್ಷಣ ಕಾರ್ಯಪ್ರವೃತ್ತರಾಗಬೇಕು.
ಒಂದು ವೇಳೆ ನ್ಯಾಯಾಲಯದ ಆದೇಶದ ಕುರಿತು ಸಂದೇಹಗಳಿದ್ದಲ್ಲಿ ಆ ಬಗ್ಗೆ ನ್ಯಾಯಾಲಯದ ವೆಬ್ ಸೈಟ್ ಗೆ ತೆರಳಿ ಪರಿಶೀಲಿಸಬಹುದು ಅಥವಾ ಸಂಬಂಧಿತ ಸರ್ಕಾರಿ ವಕೀಲರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಆದರೆ ಅಕಾರಣವಾಗಿ ಸಮಯ ವ್ಯರ್ಥಮಾಡಬಾರದು. ಜನರ ಮನವಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ಅಧಿಕಾರಿಗಳಿಗೆ ತಾಕೀತು ಮಾಡಿದೆ.