ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111
ಬೆಂಗಳೂರು: ಸುಳ್ಳು ಆರೋಪ ಪ್ರಕರಣಗಳನ್ನು ಆರಂಭದಲ್ಲೇ ಚಿವುಟಿ ಹಾಕಬೇಕು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್ ಆಧಾರ ರಹಿತ ಆರೋಪಗಳನ್ನು ಮಾಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿದೆ.
ತಮ್ಮ ಸೊಸೆ ದಾಖಲಿಸಿರುವ ಕ್ರಿಮಿನಲ್ ಕೇಸ್ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ 67 ವರ್ಷದ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: 2018ರ ಡಿಸೆಂಬರ್ ನಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ವಿವಾಹವಾಗಿದ್ದ ದಂಪತಿ ನಡುವಿನ ವಿರಸ ವರ್ಷ ತುಂಬುವ ಮೊದಲೇ ತಾರಕಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ನವ ವಿವಾಹಿತೆ ತನ್ನ ಪತಿ, ಅತ್ತೆ, ಮಾವ ಹಾಗೂ ಇಬ್ಬರು ನಾದಿನಿಯರ ವಿರುದ್ಧ 2019ರ ಅಕ್ಟೋಬರ್ 21ರಂದು ಬಳ್ಳಾರಿಯ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 498(ಎ), 323, 504, 506 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಬಳ್ಳಾರಿಯ 3ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ವಿಚಾರಣೆ ಪ್ರಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಪತಿಯ ಪೋಷಕರು ಹಾಗೂ ಸೋದರಿಯರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ-ಪ್ರತಿವಾದ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ದಂಪತಿ ತಮ್ಮ ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಿರುಕುಳ ಆರೋಪ ಎದುರಿಸುತ್ತಿರುವ ಅತ್ತೆ-ಮಾವ ಎಂದಿಗೂ ಇವರೊಟ್ಟಿಗೆ ವಾಸ ಮಾಡಿಲ್ಲ. ಅವರು ತಮ್ಮ ಎರಡನೇ ಪುತ್ರಿಯೊಂದಿಗೆ ದೂರದ ಅನಂತಪುರದಲ್ಲಿ ವಾಸಿಸುತ್ತಿದ್ದರು. ದಂಪತಿ ನಡುವಿನ ಕಲಹವೂ ಅವರಿಗೆ ಸಂಪೂರ್ಣವಾಗಿ ತಿಳಿದಿಲ್ಲ. ಅನಗತ್ಯವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದ್ದರು.
ಪತ್ನಿ ಪರ ವಾದಿಸಿದ್ದ ವಕೀಲರು, ಕಿರುಕುಳ ನೀಡಲು ಪತಿಯ ಕುಟುಂಬಸ್ಥರೇ ಕಾರಣ. ಅವರ ಪ್ರಚೋದನೆಯಿಂದಲೇ ಪತಿ ತನ್ನ ಪತ್ನಿಗೆ ಕಿರುಕುಳ ನೀಡಿದ್ದು, ಅವರೂ ಕೂಡ ಸಮಾನ ತಪ್ಪಿತಸ್ಥರು ಎಂದಿದ್ದರು. ಸರ್ಕಾರದ ಪರ ವಕೀಲರು ಕೂಡ ಪ್ರಕರಣದಲ್ಲಿ ಈಗಾಗಲೇ ದೋಷಾರೋಪಣೆ ಸಲ್ಲಿಕೆಯಾಗಿರುವುದರಿಂದ ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿಯೇ ತಾವು ನಿರ್ದೋಷಿಗಳು ಎಂಬುದನ್ನು ಸಾಬೀತು ಮಾಡಬೇಕು ಎಂದು ವಾದಿಸಿದ್ದರು.
ಹೈಕೋರ್ಟ್ ತೀರ್ಪು: ವಾದ-ಪ್ರತಿವಾದ ಆಲಿಸಿದ ಪೀಠ ತನ್ನ ತೀರ್ಪಿನಲ್ಲಿ, ಪೊಲೀಸರಿಗೆ ಮಹಿಳೆ ನೀಡಿರುವ ದೂರಿನಲ್ಲಿ ಪತಿಯ ವಿರುದ್ಧ ಮಾತ್ರವೇ ಆರೋಪಗಳಿವೆ. ಇನ್ನು ದೂರುದಾರ ಮಹಿಳೆ ಜೊತೆಯಲ್ಲಿ ಪತಿಯ ತಂದೆ-ತಾಯಿ ವಾಸಿಸುತ್ತಿಲ್ಲ. ಅವರು ತಮ್ಮ ಎರಡನೇ ಮಗಳ ಜತೆ ಆಂಧ್ರದ ಅನಂತಪುರದಲ್ಲಿದ್ದಾರೆ. ಮತ್ತೋರ್ವ ವಿವಾಹಿತ ಪುತ್ರಿ ಬೆಂಗಳೂರಿನಲ್ಲಿ ಪತಿಯೊಂದಿಗೆ ವಾಸವಿದ್ದಾರೆ. ದೂರಿನಲ್ಲಾಗಲೀ, ದೋಷಾರೋಪ ಪಟ್ಟಿಯಲ್ಲಾಗಲೀ ಕುಟುಂಬ ಸದಸ್ಯರ ವಿರುದ್ಧ ಆರೋಪಗಳಿಲ್ಲ. ಹಾಗಿದ್ದೂ ಪೊಲೀಸರು ಎಲ್ಲರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಕುಟುಂಬ ಸದಸ್ಯರನ್ನು ಅನಗತ್ಯವಾಗಿ ಎಳೆದು ತರದಂತೆ ಸುಪ್ರೀಂ ಕೋರ್ಟ್, ‘ಪ್ರೀತಿ ಗುಪ್ತಾ ವರ್ಸಸ್ ಸ್ಟೇಟ್ ಆಫ್ ಜಾರ್ಖಂಡ್’, ‘ಗೀತ ಮೆಹ್ರೋತ್ರಾ ವರ್ಸಸ್ ಸ್ಟೇಟ್ ಆಫ್ ಉತ್ತರ ಪ್ರದೇಶ’ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಮುಖ್ಯವಾಗಿ ಆಧಾರವಿಲ್ಲದ ಆರೋಪಗಳನ್ನು ಪರಿಗಣಿಸಿ ಅರ್ಜಿದಾರರ ವಿರುದ್ಧದ ವಿಚಾರಣೆ ಮುಂದುವರೆಸಲು ಸಮ್ಮತಿಸಿದರೆ ನ್ಯಾಯದಾನ ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ. ಇಂತಹ ಪ್ರಕರಣಗಳನ್ನು ಮೊಗ್ಗಿನಲ್ಲಿಯೇ ಚಿವುಟಿ ಹಾಕಬೇಕು ಎಂದು ಅಭಿಪ್ರಾಯಪಟ್ಟು, ಪತಿಯ ಪೋಷಕರು ಮತ್ತು ಸೋದರಿಯರ ವಿರುದ್ದ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
(CRL.P 100704/2021)