”ಬಿಎಸ್ಸಿ ಅಗ್ರಿಕಲ್ಚರ್ ಓದಿ ಪ್ರಗತಿಪರ ರೈತನಾಗುವ ಆಸೆ ಇತ್ತು. ಆದರೆ, ಅಪ್ಪನ ಸ್ವಾತಂತ್ರ್ಯ ಹೋರಾಟದ ಕಿಚ್ಚು ನನ್ನನ್ನು ವಕೀಲಿ ವೃತ್ತಿಗೆ ಬರುವಂತೆ ಮಾಡಿತು. ನಂತರ ನ್ಯಾಯಮೂರ್ತಿಯಾಗಿ ಇಲ್ಲಿವರೆಗೆ ಸಾಗಿದ್ದೇನೆ” ಹೀಗೆ ಹೇಳಿದ್ದು ನ್ಯಾಯಮೂರ್ತಿ ಅರವಿಂದ್ ಕುಮಾರ್.
ನನಗೆ ಪ್ರಗತಿಪರ ರೈತನಾಗುವ ಆಸೆ ಇತ್ತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಪ್ಪನ ಆಸೆಯಂತೆ ವಕೀಲಿಕೆಗೆ ಬಂದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅಪ್ಪನನ್ನು ಜೈಲುಗಳಿಗೆ ಕಳುಹಿಸುತ್ತಿದ್ದರು. ಅಪ್ಪನೊಟ್ಟಿಗೆ ಜೈಲಿಗೆ ಹೋಗುತ್ತಿದ್ದವರಲ್ಲಿ ವಕೀಲರು ಹೆಚ್ಚಿಗೆ ಇರುತ್ತಿದ್ದರು. ಇದರಿಂದಾಗಿ ಅಪ್ಪನಿಗೆ ಕಾನೂನು ಕ್ಷೇತ್ರದ ಬಗ್ಗೆ ಹೆಚ್ಚಿನ ಅಭಿಮಾನವಿತ್ತು. ದೇಶದಲ್ಲಿ ಬದಲಾವಣೆ ತರಲು ಕಾನೂನಿನಿಂದ ಮಾತ್ರ ಸಾಧ್ಯವೆಂದು ನಂಬಿದ್ದರು. ಹೀಗಾಗಿಯೇ ನನಗೆ ಕಾನೂನು ಪದವಿ ಓದಿ ವಕೀಲನಾಗುವಂತೆ ಒತ್ತಾಯಿಸುತ್ತಿದ್ದರು.
ಇದೇ ವಿಚಾರಕ್ಕೆ ನಮ್ಮ ಮನೆಯಲ್ಲಿ ಅಪ್ಪನಿಗೂ ನನಗೂ ಅಸಮಾಧಾನವಿತ್ತು. ಕೊನೆಗೊಂದು ದಿನ ಅವರು ವಕೀಲಿಕೆಗೆ ಏಕೆ ಬರಬೇಕೆಂಬ ಕುರಿತು ವಿವರವಾಗಿ ತಿಳಿಸಿದರು. ಅದರಂತೆ ವಕೀಲಿಕೆಗೆ ಬಂದೆ ಎಂದರು. ಇದೇ ವೇಳೆ ತಮ್ಮ ವಕೀಲಿ ವೃತ್ತಿ ಬದುಕಿನ ಸವಿ ನೆನಪುಗಳನ್ನು ಹಂಚಿಕೊಂಡರು. ಸಹೋದ್ಯೋಗಿ ವಕೀಲರು ಅಡ್ಜರ್ನ್ಮೆಂಟ್ ಗಳನ್ನು ತೆಗೆದುಕೊಳ್ಳುತ್ತಿದ್ದ ರೀತಿ, ವಾದ ಮಂಡಿಸಲು ಹೋದ ಸಂದರ್ಭಗಳಲ್ಲಿ ಎದುರಾಗುತ್ತಿದ್ದ ಸವಾಲುಗಳ ಕುರಿತು ಹಾಸ್ಯಭರಿತವಾಗಿ ವಿವರಿಸಿದರು.
ನ್ಯಾ. ಅರವಿಂದ್ ಕುಮಾರ್ ಪೂರ್ತಿ ಭಾಷಣದ ವಿಡಿಯೋ ತುಣುಕು ಇಲ್ಲಿದೆ.
ರಾಜ್ಯ ಹೈಕೋರ್ಟ್ ನಿಂದ ಗುಜರಾತ್ ಹೈಕೋರ್ಟ್ ಗೆ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ ನ್ಯಾ. ಅರವಿಂದ್ ಕುಮಾರ್ ಅವರಿಗೆ ವಿಧಾನ ಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾ. ಅರವಿಂದ್ ಕುಮಾರ್ ತಮ್ಮ ಬದುಕಿನ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ರು.