News

ಯುಗಾದಿ, ರಂಜಾನ್ ಹಬ್ಬಗಳ ಪ್ರಯುಕ್ತ ಬೆಂಗಳೂರು- ಚೆನ್ನೈ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು

Share It

ಬೆಂಗಳೂರು: ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣ ಮತ್ತು ಪುರಚ್ಚಿ ತಲೈವರ್ ಡಾ.ಎಂ.ಜಿ.ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣ (ಚೆನ್ನೈ) ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಈ ವಿಶೇಷ ರೈಲು ಸೇವೆ ಮಾರ್ಚ್ 28 ರಂದು, ಕೆಎಸ್ಆರ್ ಬೆಂಗಳೂರಿನಿಂದ ಬೆಳಿಗ್ಗೆ 8:05ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 2:40ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ. ಅದೇ ದಿನ ಇನ್ನೊಂದು ರೈಲು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 3.40ಕ್ಕೆ ಹೊರಟು, ಅದೇ ದಿನ ರಾತ್ರಿ 10.50ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಯಶವಂತಪುರ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಅಂಬೂರು, ಗುಡಿಯಾಟ್ಟಂ, ಕಟಪಾಡಿ, ಶೋಲಿಂಗೂರ್, ಅರಕ್ಕೋಣಂ, ತಿರುವಳ್ಳೂರು ಮತ್ತು ಪೆರಂಬೂರು ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ. ಈ ರೈಲಿನಲ್ಲಿ 1 ಎಸಿ 2-ಟೈರ್ ಬೋಗಿ, 2 ಎಸಿ 3-ಟೈರ್ ಬೋಗಿಗಳು, 11 ಸ್ಲೀಪರ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್ ಡಿ ಬೋಗಿಗಳು ಸೇರಿದಂತೆ 20 ಬೋಗಿಗಳು ಇರಲಿವೆ.

ಕಾಯ್ದಿರಿಸುವಿಕೆ, ಆಗಮನ ಮತ್ತು ನಿರ್ಗಮನ ಸಮಯ ಮತ್ತು ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್ ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.


Share It

You cannot copy content of this page