ಬೆಂಗಳೂರು: ಪಾಲಿಕೆ ವ್ಯಾಪ್ತಿಯ ದಾಸರಹಳ್ಳಿ ವಲಯದ ಶೆಟ್ಟಿಹಳ್ಳಿ ಉಪ ವಿಭಾಗ ವಾರ್ಡ್ ನ ಆರ್.ಕೆ ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆ ಅಗೆದಿರುವವರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.
ಆರ್.ಕೆ ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಮಾರ್ಚ್ 31 ರಂದು ಅನಧಿಕೃತವಾಗಿ ರಸ್ತೆ ಅಗೆದಿರುವ ಕುರಿತು ವಲಯ ಆಯುಕ್ತ ಸತೀಶ್ ಅವರ ವಾಟ್ಸಪ್ ಗ್ರೂಪ್ ಮುಖಾಂತರ ಕಾನೂನು ಕ್ರಮ ಕೈಗೊಳ್ಳುವಂತೆ ಸಂದೇಶ ಬಂದಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ದಾಸರಹಳ್ಳಿ ವಲಯದ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು, ಆರ್.ಕೆ ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಬರುವ ಸ್ವತ್ತಿನ ಮಾಲೀಕರಾದ ಜ್ಯೋತಿ ಆರ್ ಅವರು ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ನಿಯಮಬಾಹೀರವಾಗಿ ರಸ್ತೆಯನ್ನು ಅಗೆದು ಸಾರ್ವಜನಿಕ ಸ್ವತ್ತನ್ನು ಹಾಳು ಮಾಡಿದ್ದಾರೆ ಎಂದು ದೃಢಪಟ್ಟಿತ್ತು.
ನಂತರ ಅನಧಿಕೃತವಾಗಿ ರಸ್ತೆ ಅಗೆದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಶೆಟ್ಟಿಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಸದ್ಯ ಪ್ರಕರಣಕ ಕುರಿತು ಎಫ್.ಐ.ಆರ್ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.