ಬೆಂಗಳೂರು: ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ತರಬೇತಿ ಕೇಂದ್ರಕ್ಕೆ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಪ್ರತಿಭೆಗಳನ್ನು ಆಯ್ಕೆ ಮಾಡುವ ಸಲುವಾಗಿ ಜಯ ಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರಗಳಲ್ಲಿ ಮೇ 5 ಮತ್ತು 6 ರಂದು ಆಯ್ಕೆ ಪ್ರಕ್ರಿಯೆಯನ್ನು ನೆಡೆಸಲಾಗುತ್ತಿದ್ದು, ಆಸಕ್ತ ಅರ್ಹ ಕ್ರೀಡಾಪಟುಗಳು ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ.
ಆಯ್ಕೆಗಾಗಿ ಭಾಗವಹಿಸುವ ಕ್ರೀಡಾ ಪಟುಗಳು ದಿನಾಂಕ ಜು.1ಕ್ಕೆ 15 ವರ್ಷ ಮೇಲ್ಪಟ್ಟವರಾಗಿರಬೇಕಿದ್ದು, 21 ವರ್ಷ ಒಳಪಟ್ಟವರಾಗಿರಬೇಕಿದೆ. ಪ್ರಸಕ್ತ 2024-25ನೇ ಸಾಲಿನಲ್ಲಿ 10ನೇ ತರಗತಿಯನ್ನು ಅಭ್ಯಾಸ ಮಾಡುತ್ತಿರಬೇಕು, ಶೈಕ್ಷಣಿಕ ವರ್ಷ 2025-26ನೇ ಸಾಲಿನ ಪ್ರಥಮ ಪದವಿಪೂರ್ವ ಕೊರ್ಸ್ (ಪ್ರಥಮ ಪಿಯುಸಿ) ಗೆ ಪ್ರವೇಶ ಪಡೆಯುವ ಅರ್ಹತೆ ಉಳ್ಳವರಾಗಿರಬೇಕಿದೆ. ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ 2 ವರ್ಷಗಳ ವಯೋಮಿತಿಯನ್ನು ಸಡಿಲಗೊಳಿಸಲಾಗಿದೆ.
ಆಸಕ್ತ ಕ್ರೀಡಾಪಟುಗಳು ಪಾಸ್ ಪೋರ್ಟ್ ಅಳತೆಯ ಇತ್ತಿಚಿನ ಭಾವಚಿತ್ರದೊಂದಿಗೆ ಸ್ವವಿವರದ ಅರ್ಜಿಯನ್ನು ಆಯ್ಕೆ ಸಂದರ್ಭದಲ್ಲಿ ಸಲ್ಲಿಸಬೇಕಿದೆ. ಕರ್ನಾಟಕದಲ್ಲಿ ಜನಿಸಿದ ಹಾಗೂ ವಾಸಿಸುತ್ತಿರುವವರಿಗೆ ಆದ್ಯತೆ ನೀಡಲಾಗಲಿದೆ. ಆಧಾರ್ ಕಾರ್ಡ್ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಆಯ್ಕೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಕೊಡಬೇಕಿದೆ. ಜನ್ಮದಿನಾಂಕದ ದಾಖಲಾತಿಗಾಗಿ ಜನನ ಪ್ರಮಾಣ ಪತ್ರ ಅಥವಾ ಶೈಕ್ಷಣಿಕ ಶಾಲಾಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ಹಾಗೂ 10 ನೇ ತರಗತಿ ತೇರ್ಗಡೆಗೊಂಡಿರುವ ಅಂಕಪಟ್ಟಿಯ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ತರಬೇಕಿದೆ. ಆರೋಗ್ಯ ದೃಢೀಕರಣ ಹಾಗೂ ದೈಹಿಕ ಸಾಮಥ್ರ್ಯದ ಪ್ರಮಾಣ ಪತ್ರವನ್ನು ಸರ್ಕಾರಿ ವೈದ್ಯರಿಂದ ದೃಢೀಕರಿಸಿದ ನಕಲು ಹಾಗೂ ಮೂಲ ಪ್ರತಿ ಕಡ್ಡಾಯವಾಗಿದೆ.
ಕ್ರೀಡಾಪಟುಗಳು ಕನಿಷ್ಠ ಪಕ್ಷ ರಾಜ್ಯಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ (ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ, ರಾಜ್ಯ ಶಾಲಾ ಕ್ರೀಡಾಕೂಟ, ವಿಶ್ವವಿದ್ಯಾನಿಲಯ ಸಂಘಟಿಸುವ ಕ್ರೀಡಾಕೂಟ ಪದಕ ಪಡೆದಿರಬೇಕಿದೆ. ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟದಲ್ಲಿ (ಅಥ್ಲೆಟಿಕ್ಸ್ ಫೆಡರೆಷನ್, ಶಾಲಾ ರಾಷ್ಟ್ರೀಯ ಫೆಡರಷನ್ ಹಾಗೂ ಅಖಿಲ ಭಾರತ ವಿಶ್ವವಿದ್ಯಾನಿಲಯ ಸಂಘಟಿಸುವ ಕ್ರೀಡಾಕೂಟ) ಭಾಗವಹಿಸಿ ಪದಕ ಪಡೆದವರಿಗೆ ಪ್ರಾಶಸ್ತ್ಯ ನೀಡಲಾಗಲಿದೆ.
ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಪಡೆಯಲು ಕಳೆದ ಹಾಗೂ ಪ್ರಸ್ತುತ ಸಾಲಿನ ಕ್ರೀಡಾ ಕೂಟದ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕಿದೆ. ಕರ್ನಾಟಕದಲ್ಲಿ ಜನಿಸಿದ ಹಾಗೂ ವಾಸಿಸುತ್ತಿರುವ ಬಾಲಕ ಬಾಲಕಿಯರು ಹಾಗೂ ಕ್ರೀಡಾ ಕೋಟಾದಡಿಯಲ್ಲಿ ನೇಮಕಗೊಂಡಿರುವ ಕ್ರೀಡಾಪಟುಗಳು ಪ್ರಕ್ರಿಯೆಗೆ ಅರ್ಹರಾಗಿದ್ದು. ಕ್ರೀಡಾಶಾಲೆ / ನಿಲಯ ಯೋಜನೆಯಲ್ಲಿ ಆಯ್ಕೆಗೊಂಡಿರುವವರು ಸಹ ಪಾಲ್ಗೊಳ್ಳಬಹುದಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡ ಕ್ರೀಡಾಪಟುಗಳಿಗೆ ಇಲಾಖಾ ವತಿಯಿಂದ ಪರಿಶೀಲನಾ ತರಬೇತಿ ಶಿಬಿರವನ್ನು ಏರ್ಪಡಿಸಿ ಅರ್ಹತೆ ಗಳಿಸಿದ ಕ್ರೀಡಾಪಟುಗಳಿಗೆ ಪ್ರವೇಶವನ್ನು ನೀಡಲಾಗಲಿದೆ. ಉದ್ದೀಪನ ಮದ್ದು ಸೇವನೆಯಿಂದಾಗಿ ಅಮಾನತ್ತಿನ ಶಿಕ್ಷೆಗೆ ಒಳಪಟ್ಟಿರುವ ಕ್ರೀಡಾಪಟುಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ.