ಬೆಂಗಳೂರು : ಇಂದಿರಾನಗರ 1ನೇ ಹಂತದಲ್ಲಿರುವ ಬಿಬಿಎಂಪಿ ಆಟದ ಮೈದಾನದಲ್ಲಿ ಬಾಸ್ಕೆಟ್ಬಾಲ್ ಕ್ರೀಡಾಂಗಣ ನಿರ್ಮಿಸಬಾರದು. ಈಗಿರುವ ಸ್ಥಿತಿಯಲ್ಲೇ ಅಭಿವೃದ್ಧಿ ಪಡಿಸಿ, ಎಲ್ಲರೂ ಮುಕ್ತವಾಗಿ ಬಳಸುವಂತೆ ಇರಬೇಕು ಎಂದು ಐ ಚೆಂಜ್ ಇಂದಿರಾನಗರ ಸಂಘಟನೆ ಸದಸ್ಯೆ ಸ್ವರ್ಣ ವೆಂಕಟರಾಮನ್ ಒತ್ತಾಯಿಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಟದ ಮೈದಾನವನ್ನು ಪ್ರಸ್ತುತ ಎಲ್ಲರೂ ಮುಕ್ತವಾಗಿ ಬಳಸುತ್ತಿದ್ದಾರೆ. ಆದರೆ ಈ ಜಾಗದಲ್ಲಿ 6.5 ಕೋಟಿ ರೂ.ಗಳ ವೆಚ್ಚದಲ್ಲಿ ಬಾಸ್ಕೆಟ್ಬಾಲ್ ಒಳಾಂಗಣ ಕ್ರೀಡಾಂಗಣ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಹೀಗೆ ಮಾಡುವುದರಿಂದ ಅನೇಕರಿಗೆ ಪ್ರವೇಶ ಮುಕ್ತವಾಗಲಿದೆ ಎಂದು ತಿಳಿಸಿದರು.

ಈ ಸಾರ್ವಜನಿಕ ಮೈದಾನವನ್ನು ಹತ್ತಿರದ ಎರಡ್ಮೂರು ಶಾಲಾ ಮಕ್ಕಳು ಬಳಸುತ್ತಿದ್ದಾರೆ ಮತ್ತು ಸ್ಥಳೀಯ ನಿವಾಸಿಗಳು ಬೆಳಗ್ಗೆ ಸಂಜೆ ವ್ಯಾಯಾಮ ಮಾಡಲು ಬಳಸುತ್ತಿದ್ದಾರೆ. ಮಕ್ಕಳು ಇಲ್ಲಿ ಎಲ್ಲಾ ತರಹದ ಆಟಗಳನ್ನು ಆಡುತ್ತಾರೆ. ಹಾಗಾಗಿ ಇಲ್ಲಿ ಒಳಂಗಾಣ ಕ್ರೀಡಾಂಗಣ ಮಾಡಿದರೆ ಅವರಿಗೆ ಪ್ರವೇಶ ಇಲ್ಲದಂತಾಗುತ್ತದೆ. ಆಗ ಕೇವಲ ಬಾಸ್ಕೆಟ್ಬಾಲ್ ಕ್ರೀಡಾಪಟುಗಳಿಗೆ ಇದು ಸಿಮೀತವಾಗಲಿದೆ ಎಂದು ವಿವರಿಸಿದರು.
2017ರಲ್ಲಿ ಅದೇ ಒಳಂಗಣ ಕ್ರೀಡಾಂಗಣ ಯೋಜನೆಗೆ ಹೈಕೋರ್ಟ್ ನಿಂದ ತಡೆಯಾಜ್ಞೆ ಹೊರಡಿಸಿತ್ತು. ಇದೀಗ ಬಿಬಿಎಂಪಿ ಯಾವುದೇ ಸಾರ್ವಜನಿಕ ಸಮಾಲೋಚನೆ ಹಾಗೂ ಚರ್ಚೆ ಮಾಡದೇ ಮತ್ತೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ದೂರಿದರು.
ಡಿಫೆನ್ಸ್ ಕಾಲೋನಿ ನಿವಾಸಿ, ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಆಟದ ಮೈದಾನವನ್ನು ಪಾರ್ಕಿಂಗ್ ಮಾಡಲು ಒತ್ತುವರಿ ಮಾಡುತ್ತಿದ್ದಾರೆ ಇದನ್ನು ತಡೆಯಬೇಕು ಮತ್ತು ಆಟದ ಮೈದಾನ ಎಲ್ಲರಿಗೂ ಬಳಕೆ ಆಗುವಂತೆ ಇದೇ 6.5 ಕೋಟಿ ಅನುದಾನದಲ್ಲಿ ಎಲ್ಲರೂ ಬಳಸುವಂತೆ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಐ ಚೆಂಜ್ ಇಂದಿರಾನಗರದ ಸಹ ಸಂಸ್ಥಾಪಕಿ ಸ್ನೇಹಾ ನಂದಿಹಾಲ್, ಡಿ.ವಿ. ಅಶೋಕ್, ಡಿ. ವಿಕ್ರಮ್ ನಾರಾಯಣ ಮತ್ತಿತರರಿದ್ದರು.