ಬೆಂಗಳೂರು: ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೆಂಜ್, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಭಾನುವಾರ ಅಲ್ಲಲ್ಲಿ ಹಗುರ ಮಳೆಯಾಗಿದ್ದು, ಜೂನ್ 11 ರಿಂದ ಧಾರಾಕಾರ ಮಳೆ ಆರಂಭವಾಗಲಿದೆ. ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯಿರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂನ್ 13 ರಿಂದ ಮೂರು ದಿನ (ಜೂನ್ 15ರವರೆಗೆ) ರಾಜ್ಯದ ಕರಾವಳಿ, ಒಳನಾಡು, ಮಲೆನಾಡು ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆರ್ಭಟ ಕಂಡು ಬರಲಿದೆ. ಇದರಿಂದ ಕನಿಷ್ಠ 110 ಮಿ.ಮೀ ಹಾಗೂ ಗರಿಷ್ಠ 200 ಮಿ.ಮೀ ವರೆಗೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಕರಾವಳಿಯ ಉಡುಪಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಮಳೆ ಜೂನ್ 13ರಿಂದ ಮೂರು ದಿನ ಧಾರಾಕಾರವಾಗಿ ನಿರಂತರವಾಗಿ ಸುರಿಯಲಿದೆ. ಹೀಗಾಗಿ ಅಲ್ಲಿನ ಜಿಲ್ಲೆಗಳಿಗೆ ಮೊದಲ ಎರಡು ದಿನ ಯೆಲ್ಲೋ ಅಲರ್ಟ್ ನಂತರ ಒಂದು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ, ಹಾವೇರಿ, ಬಳ್ಳಾಾರಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 110 ಮಿ.ಮೀಗಿಂತಲೂ ಹೆಚ್ಚಿನ ಮಳೆ ಆಗಲಿದೆ. ಈ ಜಿಲ್ಲೆಗಳಿಗೆ ಒಂದು ದಿನ ಆರೆಂಜ್ ಅಲರ್ಟ್, ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ತಿಳಿಸಿದೆ.