Column

ಕನ್ನಡ ತಂತ್ರಾಂಶಗಳ ರೂವಾರಿ ಗಣಕ ಪರಿಷತ್ತು

Share It

ಲೇಖನ: ರೇಣುಕಾ ದೇಸಾಯಿ,ನಿವೃತ್ತ ಅಧಿಕಾರಿ ಭಾರತೀಯ ಸ್ಟೇಟ್ ಬ್ಯಾಂಕ್, 9535147455

ಜಾಗತಿಕ ಮಾರುಕಟ್ಟೆಯಲ್ಲಿ ಕನ್ನಡಕ್ಕೆ ತನ್ನದೇ ತಂತ್ರಾoಶವನ್ನು ಸಿದ್ದಗೊಳಿಸಿ ಅದನ್ನು ದೇಶದ ಇತರ ಭಾಷೆಯೊಂದಿಗೆ ಸರಿಸಮನಾಗಿ ನಿಲ್ಲುವಂತೆ ಮಾಡಿದ ಶ್ರೇಯ ಕನ್ನಡ ಗಣಕ ಪರಿಷತ್ ಗೆ ಸಲ್ಲಬೇಕಿದ್ದು, ಅದಕ್ಕೆ ಕಾರಣೀಭೂತರಾಗಿ ನಿಂತವರು ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ್ತ ಆಧಿಕಾರಿ ಜಿ ಎನ್ ನರಸಿಂಹಮೂರ್ತಿ ಎಂದರೆ ತಪ್ಪಾಗಲಾರದು.

ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಸ್ವಯಂ ನಿವೃತ್ತಿ ಪಡೆದು, ತಂತ್ರಜ್ಞಾನದ ಯುಗದಲ್ಲಿ, ಭಾರತೀಯ ಹಲವು ಭಾಷೆಗೆ ತಂತ್ರಾಂಶವಿರುವಾಗ ನಾವು ಸುಮ್ಮನೆ ಕುಳಿತರೆ, ಸರಿಸುಮಾರು 2000 ವರ್ಷದಷ್ಟು ಹಳೆಯದಾದ ಕನ್ನಡ ಭಾಷೆಗೆ ಅಪಾಯ, ಭಾಷೆಯ ಉಳಿವಿಗಾಗಿ ಅದನ್ನು ಗಣಕೀಕರಣಗೊಳಿಸಲು ಸನ್ನದ್ಧರಾಗಿ ತಮ್ಮ ಜೀವನ ಮುಡಿಪಾಗಿಟ್ಟವರು.

1996 ರ ಹಾಸನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕನ್ನಡ ಮತ್ತು ಗಣಕಗಳು” ವಿಷಯದಲ್ಲಿ ಪ್ರಬಂಧವನ್ನು ಮಂಡಿಸಲು ನರಸಿಂಹಮೂರ್ತಿಯವರನ್ನು ಆಹ್ವಾಸಿದ್ದರು, ಅಲ್ಲಿ ಅವರಿಗೆ ಸಮಾನ ವಿಚಾರಧಾರೆ ಇರುವ ಅನೇಕರು ಸಿಗುವಂತಾಯಿತು. ಈ ಕಾರ್ಯಕ್ರಮವೇ ಗಣಕ ಪರಿಷತ್ ಉದಯಕ್ಕೆ ಬೀಜವಾಗಿ ಪರಿಣಮಿಸಿ, ಇಂದು ಹೆಮ್ಮರವಾಗಿ ಬೆಳೆದು ಕನ್ನಡ ಗಣಕೀಕರಣದಲ್ಲಿ ಬೇಕಾದ ಅನೇಕ ಅಪ್ಲಿಕೇಶನ್ ತಯಾರಿಸಿದೆ. ಇದಕ್ಕೆಲ್ಲ ಜಿ. ಎನ್. ಎನ್ ಅವರ ಕೊಡುಗೆ ಅಪಾರ.

ಮೊದಲ ಕರೆಗೆ ಅನೇಕ ಸಾಹಿತಿಗಳು, ಟೆಕ್ಕಿಗಳು, ವಿದ್ಯಾರ್ಥಿಗಳು, ವಿಜ್ಞಾನಿಗಳು, ಹೀಗೆ ಸರಿಸುಮಾರು 100 ಜನರು ತಲಾ 100 ರೂಪಾಯಿನಂತೆ ದೇಣಿಗೆನೀಡಿ 10 ಸಾವಿರ ರೂಪಾಯಿ ಸಂಗ್ರಹವಾದಾಗ ಗಣಕ ಪರಿಷತ್ ತನ್ನ ಮೊದಲ ಹೆಜ್ಜೆಯನ್ನಿಟ್ಟಿತು. ನಂತರದ ವರ್ಷಗಳಲ್ಲಿ ಹೆಚ್ಚಿನ ದೇಣಿಗೆಯನ್ನು ಪಡೆಯದೆ ಎಷ್ಟು ಬೇಕೋ ಅಷ್ಟು ಹಣ ಕ್ರೂಢೀಕರಿಸಿ ಪರಿಷತ್ ಅನ್ನು ಮುನ್ನಡೆಸಲಾಗಿದೆ. ಹೆಚ್ಚಿನ ಧನ ಸಂಗ್ರಹವಾದರೆ ಅದರತ್ತ ಗಮನ ಹೋಗುತ್ತದೆ, ಮಾಡುವ ಕೆಲಸ ನಿಂತುಹೋಗುತ್ತದೆ ಮತ್ತು ಸರ್ಕಾರದಿಂದ ಯಾವುದೇ ಹಣವನ್ನು ಪಡೆಯಬಾರದು ಎನ್ನುವ ಧ್ಯೇಯವನ್ನು ಪರಿಷತ್ ಇಂದಿಗೂ ಕಾಪಾಡಿಕೊಂಡು ಬರುತ್ತಿದ್ದು, ಇದಕ್ಕೆ ಸ್ಪೂರ್ತಿಯಾಗಿ ಅನೇಕ ಕನ್ನಡದ ಹಿತಾಸಕ್ತಿ ಉಳ್ಳವರು ಹಾಗೂ ನರಸಿಂಹಮೂರ್ತಿಯವರು ನಿಂತಿದ್ದಾರೆ. “ಇಂದಿಗೂ ನಮ್ಮ ಹತ್ತಿರ ಹೆಚ್ಚು ಹಣವಿಲ್ಲ, ಯಾವುದೋ ಕೆಲಸಬಂದಾಗ ಹೇಗೋ ಹಣ ಸೇರುತ್ತದೆ, ಕೆಲಸ ನಡೆದು ಹೋಗುತ್ತದೆ” ಎನ್ನುವ ಪಾರದರ್ಶಕತೆಯ ಮುಗುಳ್ನಗೆಯನ್ನು ಬೀರುವ ಮೂಲಕ ನಿಷ್ಕಲ್ಮಶ ಕನ್ನಡ ಸೇವಕರಾಗಿ ನರಸಿಂಹಮೂರ್ತಿ ಕಂಡುಬರುತ್ತಾರೆ.

ಸುಮಾರು 25 ವರ್ಷಗಳ ಹಿಂದೆ ಕನ್ನಡದ ಚಿಂತಕ, ಡಾ. ಚಿದಾನಂದಮೂರ್ತಿಯವರು, ರಾಜ್ಯದ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಗಣಕ ಪರಿಷತ್ತಿನ ಚಟುವಟಿಕೆಗಳ ಮಹತ್ವವನ್ನು ಪರಿಚಯ ಮಾಡಿಕೊಟ್ಟು, ಪರಿಷತ್ತನ್ನು ಸರಕಾರದ ಸಮೀಪಕ್ಕೆ ತಂದರು. ಅಲ್ಲಿಯವರೆಗೆ 3 ರಿಂದ 4 ಜನ ಬೇರೆ ಬೇರೆ ಹೆಸರಿನಲ್ಲಿ ಕನ್ನಡಕ್ಕೆ ತಂತ್ರಾಂಶ ರೂಪಿಸಿದ್ದರು, ಎಂಬತ್ತರ ದಶಕದಲ್ಲಿ ಅಮೆರಿಕದಲ್ಲಿ ನೆಲೆಸಿದ್ದ ಡಾ. ಕಸ್ತೂರಿ ಎನ್ನುವವರು ಮೊದಲ ಬಾರಿ ಕನ್ನಡಕ್ಕೆ ತಂತ್ರಾಂಶ ರೂಪಿಸಿದ್ದರು, ಆದರೆ ಅದು ಬಳಕೆಗೆ ಅಷ್ಟಾಗಿ ಬರಲಿಲ್ಲ. ನಂತರದ ದಿನಗಳಲ್ಲಿ ದಿನನಿತ್ಯದ ಬಳಕೆಗೆ ಬೇಕಾದ ಆವಿಷ್ಕಾರಗಳೊಂದಿಗೆ ಹೊಸ ತಂತ್ರಾಂಶ ಗಣಕ ಪರಿಷತ್ ತಯಾರಿಸಿ, ಸರ್ಕಾರಿ ಕಛೇರಿಗಳಿಗೆ, ಬ್ಯಾಂಕ್ ಗಳಿಗೆ, ವಿಮಾ ಕಛೇರಿಗಳಿಗೆ, ರಸ್ತೆ ಸಾರಿಗೆ ಸಂಸ್ಥೆಗಳಿಗೆ ಅವರಿಗೆ ಅನುಕೂಲ ಇರುವ ನಮೂನೆಗಳನ್ನು ತಯಾರಿಸಿ ಕೊಟ್ಟು, ಎಲ್ಲರನ್ನು ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆಗೆ ತೊಡಗಿಸಿದೆ. ಕನ್ನಡ, ಕಂಪ್ಯೂಟರ್ ಗೆ ಯೋಗ್ಯ ಭಾಷೆ ಎಂದು ಸಾಬಿತುಪಡೆಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ನಿದರ್ಶನವಾಗಿ ಗಣಕ ಪರಿಷತ್ ತಯಾರಿಸಿದ ‘ನುಡಿ’ ತಂತ್ರಾಂಶ ಇಂದಿಗೂ ಮನೆಮಾತಾಗಿದೆ.

ಗಣಕಪರಿಷತ್ ಬರೀ ಕನ್ನಡ ಅಕ್ಷರ ಟೈಪ್ ಮಾಡುವುದಕ್ಕಷ್ಟೇ ಗಮನ ನೀಡದೆ, ಬೇರೆ ಭಾಷೆ, ಅಂದರೆ ಆಂಗ್ಲ ಭಾಷೆಗೆ ಇದ್ದಷ್ಟೆ ತಂತ್ರಾಂಶದ ಪ್ರಕಾರಗಳು ಕನ್ನಡದಲ್ಲೂ ಅಭಿವೃದ್ಧಿ ಪಡೆಸಿದೆ, ಹೆಚ್ಚಿನ ಅನುಕೂಲತೆ ಯೊಂದಿಗೆ ರೂಪಾಂತರಿಸಿದ ಹೊಸ ಹೊಸ ವರ್ಷನ್ ತಂದಿದೆ.

ಹೊಸ ರೂಪದ ನುಡಿ ತಂತ್ರಾಂಶ, ಪುಟವಿನ್ಯಾಸ, ಬುಕ್ ಲೇಔಟ್, ಸ್ಪೆಲ್ ಚೆಕ್, ನಿಘಂಟು ರಚನೆ, ವಾಗಕ್ಷರ, ಮಾತನಾಡಿದರೆ ತಾನೇ ಟೈಪ್ ಆಗುವದು, ಯುನಿಕೋಡ್ ನಿಂದ ನುಡಿ ಲೇಖನ, ಆಡಿಯೋ ದಿಂದ ಟೆಕ್ಸ್ಟ್, ಹೀಗೆ ಅನೇಕ ತಂತ್ರಾಂಶಗಳು ಓಪನ್ ಸೋರ್ಸ್ ನಲ್ಲಿ ಉಚಿತವಾಗಿ ಪರಿಷತ್ ಜಾಲತಾಣದಲ್ಲಿ ಲಭ್ಯವಿದೆ. ತಾಳೆಗರಿಯಲ್ಲಿರುವ ಹಳೆಗನ್ನಡವನ್ನು ಓಸಿಆರ್ ರೂಪದಲ್ಲಿ ಸದ್ಯದಲ್ಲಿಯೇ ನೋಡಬಹುದಾಗಿದೆ ಹಾಗೂ ಎಲ್ಲವೂ ಉಚಿತವಾಗಿ ಲಭ್ಯವಿರಲಿದೆ. ಇವೆಲ್ಲದರ ಮಾಹಿತಿ, ಲಿಂಕ್ ಮತ್ತು ಡೌನ್ಲೋಡ್ ಗಳು ಪರಿಷತ್ತಿನ ಜಾಲತಾಣ https://www.kagapa.in/plans.php ಅಲ್ಲಿ ಉಚಿತವಾಗಿ ಲಭ್ಯವಿದೆ.

ಸಾಹಿತ್ಯ ಪರಿಷತ್ ನೊಂದಿಗೆ ಕನ್ನಡಕ್ಕಾಗಿ ನಿಘಂಟು ಕೆಲಸ, ಬಿ. ಎಂ. ಶ್ರೀ ಅವರ ಸಕಲ ಕೃತಿಗಳನ್ನು ಒಳಗೊಂಡ ಜಾಲತಾಣ, ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ನೂರಾರು ಕವಿಗಳ ಮಾಹಿತಿಯುಳ್ಳ ಜಾಲತಾಣ ನಿರ್ಮಿಸಿ ಕೊಟ್ಟದ್ದು ನರಸಿಂಹಮೂರ್ತಿ ಅವರ ನೇತೃತ್ವದ ಗಣಕ ಪರಿಷತ್ ಆಗಿದೆ. ಮೈಸೂರು ವಿಶ್ವವಿದ್ಯಾಲಯ ಸಿದ್ದಪಡಿಸಿದ್ದ 14 ಸಂಪುಟಗಳ ಕನ್ನಡ ವಿಶ್ವಕೋಶವನ್ನು ಗಣಕೀಕರಣ ಗೊಳಿಸಿ ಅದನ್ನು ಐವತ್ತು ಸಾವಿರ ಪುಟಗಳ ಪಠ್ಯದ ಡಿವಿಡಿಯಾಗಿಸಿ, ವಿಡಿಯೋಗಳು ಚಿತ್ರಗಳನ್ನು ಅಳವಡಿಸಿದ ಶ್ರೇಯ ಪರಿಷತ್ತಿನದ್ದಾಗಿದೆ. ಇನ್ನು ಕನ್ನಡದ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ಸಾರ್ವಜನಿಕರಿಗೆ ನೆರವಾಗಲು ಕನ್ನಡದಲ್ಲಿ ಗಣಕಯಂತ್ರಗಳ ಕುರಿತಂತೆ ಪುಸ್ತಕಗಳ ರಚನೆ ಮತ್ತು ಪ್ರಕಟಣೆಯನ್ನು ಪರಿಷತ್ ಮಾಡುತ್ತಾ ಬಂದಿದೆ. ಹೀಗೆ ಊಹಿಸಲು ಅಸಾಧ್ಯವಾದ ಅನೇಕ ಕೆಲಸಗಳನ್ನು ಕನ್ನಡಕ್ಕಾಗಿ ಎಲೆ ಮರೆಯ ಕಾಯಿಯಂತೆ, ಸದ್ದಿಲ್ಲದೆ ಕೆಲಸ ಮಾಡಿದ ನರಸಿಂಹಮೂರ್ತಿ ಅವರಿಗೆ ನಮ್ಮ ನಮನಗಳು. ನಮ್ಮ ನೆಲ, ಜಲ, ಭಾಷೆಗೆ ಅವರು ಮಾಡಿರುವ ಈ ಸೇವೆ ಪುರಸ್ಕೃತಗೊಳ್ಳುವಂತಹದು.


Share It

You cannot copy content of this page