Law

ಉದ್ಯೋಗಿಯನ್ನು ಕೆಲಸದಿಂದ ತೆಗೆದಾಕ್ಷಣ ಕ್ರಿಮಿನಲ್ ಕೇಸ್ ದಾಖಲಿಸಲಾಗದು: ಹೈಕೋರ್ಟ್

Share It

ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಸೂಕ್ತ ಕಾರಣ ಸಹಿತ ಮುಂಚಿತವಾಗಿ ತಿಳಿಸಿ ಉದ್ಯೋಗದಿಂದ ಬಿಡುಗಡೆ ಮಾಡಿದರೆ ವಿಶ್ವಾಸದ್ರೋಹ ಮತ್ತು ವಂಚನೆ ಆರೋಪದಡಿ ಕ್ರಿಮಿನಲ್ ಕೇಸ್ ದಾಖಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಖಾಸಗಿ ಸಂಸ್ಥೆಯೊಂದು 2018ರಲ್ಲಿ ತನ್ನ ಕೆಲ ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆ ಮಾಡಿತ್ತು. ಸಂಸ್ಥೆ ಕೆಲಸದಿಂದ ತೆಗೆದು ಹಾಕಿದ ಕ್ರಮ ಪ್ರಶ್ನಿಸಿ ಕೆಲಸ ಕಳೆದುಕೊಂಡ ಉದ್ಯೋಗಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.

ಪ್ರಕರಣವನ್ನು ನಗರದ 4ನೇ ಎಸಿಎಂಎಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆ ತನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ, ಸಂಸ್ಥೆ ಉದ್ಯೋಗಿಗಳನ್ನು ಸೇವೆಯಿಂದ ಕೈಬಿಡುವ ಮೊದಲು ಸಕಾರಣಗಳ ಸಹಿತ ನೋಟಿಸ್ ನೀಡಿ ತಿಳಿಸಿದೆ.

ಅಲ್ಲದೇ, ನೋಟಿಸಿನಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದಲ್ಲಿ ಮತ್ತೆ ಎಲ್ಲರನ್ನೂ ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿಯೂ ತಿಳಿಸಿದೆ. ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಸಂಸ್ಥೆ ಸೂಕ್ತ ಕಾರಣ ನೀಡಿ ಕೆಲಸದಿಂದ ತೆಗೆದಿದೆ. ಇಂತಹ ಸಂದರ್ಭಗಳಲ್ಲಿ ಉದ್ಯೋಗದಾತ ಸಂಸ್ಥೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ಸಂಸ್ಥೆ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2018ರಲ್ಲಿ ಟಿಟಿಸಿ ನ್ಯೂಸ್ ಚಾನೆಲ್ ತನ್ನಲ್ಲಿದ್ದ ಕೆಲ ಉದ್ಯೋಗಿಗಳನ್ನು ಸೇವೆಯಿಂದ ತೆಗೆದುಹಾಕಿತ್ತು. ಆರ್ಥಿಕ ಸಮಸ್ಯೆಗಳ ಕಾರಣ ನೀಡಿ ಕೆಲಸದಿಂದ ಬಿಡುಗಡೆ ಮಾಡಿತ್ತು. ಸಂಸ್ಥೆಯ ಈ ಕ್ರಮಕ್ಕೆ ಉದ್ಯೋಗಿ ಅಸಮಾಧಾನಗೊಂಡು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 406, 420, 506, 149 ಅಡಿ ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು.
(WP 9520/2022)


Share It

You cannot copy content of this page