News

ತಿಪ್ಪಗೊಂಡನಹಳ್ಳಿ ಜಲಾಶಯ ಹೋರಾಟದಲ್ಲಿ ಭಾಗವಹಿಸಿ: ಎಎಪಿ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ

Share It

ಬೆಂಗಳೂರು: ನಗರಕ್ಕೆ ಬಹಳಷ್ಟು ವರ್ಷಗಳಿಂದ ಕುಡಿಯುವ ನೀರನ್ನು ತಲುಪಿಸುತ್ತಿದ್ದ ಅರ್ಕಾವತಿ ನದಿಯ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಉಳಿಸಿಕೊಳ್ಳುವ ಹೋರಾಟದಲ್ಲ ಎಲ್ಲರೂ  ಭಾಗವಹಿಸಬೇಕಾದ ಅನಿವಾರ್ಯತೆ ಹಾಗೂ ಸಂದಿಗ್ಧತೆ ಇದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ  ಸೀತಾರಾಮ್ ಗುಂಡಪ್ಪ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹೋರಾಟದ ಭಾಗದ ಅಂಗವಾಗಿ ಇದೇ ತಿಂಗಳ ಜೂನ್ 28ರಂದು ಬಳ್ಳಾರಿ ರಸ್ತೆಯ ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣದಲ್ಲಿ ಅನೇಕ ಹೋರಾಟಗಾರರು ಹಾಗೂ ತಜ್ಞರು ಗಳಿಂದ ವಿಚಾರ ಸಂಕಿರಣವನ್ನು ಆಯೋಜಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.

ಹೋರಾಟ ಸಮಿತಿಯ ಸಂಚಾಲಕ ಶಶಿಧರ್ ಆರಾಧ್ಯ ಮಾತನಾಡಿ ಎಲ್ಲ ಸರ್ಕಾರಗಳು ಬೆಂಗಳೂರು ನಗರವನ್ನು ರಿಯಲ್ ಎಸ್ಟೇಟ್ ಅಡ್ಡೆ ಮಾಡಿಕೊಂಡು, ಕೊಳ್ಳೆ ಹೊಡೆಯುತ್ತಿದ್ದೇವೆ ಹೊರತು ಭವಿಷ್ಯದಲ್ಲಿ ನಾಗರಿಕರಿಗೆ ಜಲಮೂಲಗಳನ್ನು ಉಳಿಸಿಕೊಳ್ಳುವ ಯಾವುದೇ ಭದ್ಧತೆ ಇವರಲ್ಲಿ ಎದ್ದು ಕಾಣುತ್ತಿಲ್ಲ. ಈಗಾಗಲೇ  ಜಲಾಶಯದ 10 ಕಿ.ಮೀ ವ್ಯಾಪ್ತಿಯಲ್ಲಿ ನಗರೀಕರಣ ಮತ್ತು ಕೈಗಾರಿಕೀಕರಣವನ್ನು ನಿಯಂತ್ರಿಸಲು ಸಂರಕ್ಷಣಾ ವಲಯವೆಂದು ಗುರುತಿಸಿದೆ. ಆದರೂ ಸಹ ಜಲಾಶಯವು ಅನೇಕ ವರ್ಷಗಳಿಂದ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ, ಕೈಗಾರಿಕೆಗಳ ತ್ಯಾಜ್ಯ ವಿಸರ್ಜನೆ, ಬೆಂಗಳೂರಿನ  ಒಳಚರಂಡಿ ಹರಿವು, ಅನುಚಿತ ಘನ ತ್ಯಾಜ್ಯ ವಿಲೇವಾರಿ, ನೀಲಗಿರಿ ಏಕ ಸಂಸ್ಕೃತಿ, ತೆರೆದ ಪಿಟ್ ಕ್ವಾರಿ ಳಂತಹ ಅನೇಕ ನೈಸರ್ಗಿಕ ವಿರೋಧಿ ಕೃತ್ಯಗಳ ಪರಿಣಾಮಗಳಿಂದಾಗಿ ಈ ಜಲಾಶಯವು ಅಪಾಯದ ಅಂಚಿನಲ್ಲಿದೆ. ಕೂಡಲೇ ಸರ್ಕಾರವು ಜಲಾಶಯವನ್ನು ಉಳಿಸುವ ನಿಟ್ಟಿನಲ್ಲಿ  ನಾವೆಲ್ಲರೂ ಸಂಘಟನಾತ್ಮಕ ಹೋರಾಟವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

ಬಫರ್ ವಲಯವನ್ನು 500 ಮೀಟರ್ ಗಳಿಂದ ಕೇವಲ 30 ಮೀಟರ್ ಗೆ ಇಳಿಸಲಾಗುತ್ತದೆ ಎಂಬ ಸರ್ಕಾರದ ನಿರ್ಣಯವನ್ನು ನಾವೆಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕಾಗಿದೆ. ಇದು ನಿಜಕ್ಕೂ ಕಳವಳಕಾರಿಯಾದಂತಹ ಸಂಗತಿ. ಇದರಿಂದ ಜಲಾಶಯವು ಇನ್ನಷ್ಟು ಕಲುಷಿತವಾಗಿ ಮತ್ತು ಅಕ್ಕಪಕ್ಕದ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ನೈಸರ್ಗಿಕ ನದಿ ಹರಿವಿನ ನಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಮಳೆ ನೀರಿನ ಒಳಹರಿವು ಕಡಿಮೆಯಾಗುವುದು ಹಾಗೂ ಸ್ಥಳೀಯ ಜೀವವೈವಿಧ್ಯತೆಗೆ ಧಕ್ಕೆಯಾಗುತ್ತದೆ ಎಂದು ಶಶಿಧರ್ ಆರಾಧ್ಯ ವಿವರಿಸಿದರು.

ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ ಆಮ್ ಆದ್ಮಿ ಪಕ್ಷವು ಸ್ಥಳೀಯ ರೈತರುಗಳು, ಪರಿಸರ ಹೋರಾಟಗಾರರು, ಕೆರೆ ತಜ್ಞರುಗಳು ಹಾಗೂ ನಾಗರಿಕ ಸಂಘಗಳ ಜೊತೆಗೂಡಿ ನಡೆಯುತ್ತಿರುವ ಈ ಹೋರಾಟದಲ್ಲಿ ತಜ್ಞರುಗಳಾದ ಎಂ. ಎನ್. ತಿಪ್ಪೇಸ್ವಾಮಿ , ಕ್ಯಾತ್ಯಾಯಿನಿ ಚಾಮರಾಜು , ವಿಶ್ವನಾಥ್, ಸಿಂಹಾದ್ರಿ, ರಾಮಪ್ರಸಾದ್ ಸೇರಿದಂತೆ ಅನೇಕ ಹೋರಾಟಗಾರರು, ತಜ್ಞರುಗಳು ಭಾಗವಹಿಸಲಿದ್ದಾರೆ. ಮುಂಬರುವ ಹೋರಾಟಗಳ ರೂಪುರೇಷೆಯ ವಿವರಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಬೆಂಗಳೂರನ್ನು ಪ್ರೀತಿಸುವ ಪ್ರತಿಯೊಬ್ಬ ನಾಗರಿಕರು ಆದ್ದರಿಂದ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಅನಿಲ್ ನಾಚಪ್ಪ, ಪುಟ್ಟಣ್ಣ ಗೌಡ ,ಮೋಹನ್ ರಾಜ್, ಅಂಜನಾ ಗೌಡ, ಜೋಶ್ವ ಸಿಂಟು, ಕಾರ್ತಿಕ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


Share It

You cannot copy content of this page