ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಪ್ರಕರಣಗಳಿಗೆ (ವಿಶೇಷಚೇತನರು, ಗಂಭೀರ ಅನಾರೋಗ್ಯ ಹಾಗೂ ಪತಿ-ಪತ್ನಿ ಪ್ರಕರಣಗಳು) ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ನೆಡೆದ ಕೌನ್ಸೆಲಿಂಗ್ ಪ್ರಕ್ರಿಯೆ ಸಂಪನ್ನಗೊಂಡಿದೆ.
ಒಟ್ಟು 561 ಮಂದಿಗೆ ಸ್ಥಳದಲ್ಲೇ ವರ್ಗಾವಣೆ ಆದೇಶ ನೀಡಲಾಗಿದೆ. ಮಾನದಂಡಗಳಂತೆ ಅಂಗವಿಕಲ ಸೌಲಭ್ಯಕ್ಕೆ ಅರ್ಹರಾದ 61 ಮಂದಿ ಕೌನ್ಸೆಲಿಂಗ್ ವರ್ಗಾವಣೆ ಲಾಭ ಪಡೆದಿದ್ದು, ಗಂಭೀರ ಕಾಯಿಲೆ ಎದುರಿಸುತ್ತಿರುವ 29 ಮಂದಿ ವರ್ಗಾವಣೆಗೊಂಡಿದ್ದಾರೆ. ಹಾಗೆಯೆ 56 ಒಂಟಿ ಮಹಿಳೆಯರು ಸ್ಥಾನ ಬದಲಾವಣೆ ಮಾಡಿಕೊಂಡಿದ್ದಾರೆ.
ಪತಿ-ಪತ್ನಿ ಪ್ರಕರಣಗಳಲ್ಲಿ 213 ಮಂದಿಗೆ ವರ್ಗಾವಣೆ ಸೌಲಭ್ಯ ನೀಡಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮೂರು ಮಂದಿ ವರ್ಗಾವಣೆಗೆ ಅರ್ಹರಾಗಿದ್ದಾರೆ. ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದ 199 ಮಂದಿ ಪಿಡಿಒಗಳನ್ನು ಅವರ ಆಯ್ಕೆಗೆ ಅನುಗುಣವಾಗಿ ಕಡ್ಡಾಯ ವರ್ಗಾವಣೆಗೆ ಒಳಪಡಿಸಲಾಗಿದೆ. ನಾಳೆಯಿಂದ 10 ದಿನಗಳ ಕಾಲ ಸಾಮಾನ್ಯ ಕೌನ್ಸೆಲಿಂಗ್ ವರ್ಗಾವಣೆಗಳು ಆರಂಭಗೊಳ್ಳಲಿವೆ.