ಲೇಖನ: ಮಂಜೇಗೌಡ ಕೆ.ಜಿ. ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಬೆಂಗಳೂರು: ಸರ್ಕಾರಿ ನೌಕರ ಮೃತಪಟ್ಟಲ್ಲಿ ಆತನ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಬೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕೆಂದು ಕೋರಿ ತುಮಕೂರು ಜಿಲ್ಲೆ ಗೆದ್ದಹಳ್ಳಿ ನಿವಾಸಿ ಪಲ್ಲವಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಮೇಲ್ಮನವಿ ವಜಾಗೊಳಿಸಿದ ನ್ಯಾಯ ಪೀಠ, ಮೃತ ನೌಕರ (ಸಹೋದರ) ಸಾವನ್ನಪ್ಪಿದ ವೇಳೆ ಅವರ ಆದಾಯದ ಮೇಲೆ ತಾನು ಅವಲಂಬಿಸಿದ್ದೆ ಎಂಬುದನ್ನು ದೃಢಪಡಿಸುವ ಸಾಕ್ಷಿಯನ್ನು ಮೇಲ್ಮನವಿದಾರರು ಸಲ್ಲಿಸಿಲ್ಲ. ಹಾಗೆಯೇ, ಅನುಕಂಪದ ಉದ್ಯೋಗ ಕ್ಲೇಮು ಸಮರ್ಥಿಸಿಕೊಳ್ಳಲು ಮೃತ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದೆ ಎಂಬುದನ್ನು ದೃಢಪಡಿಸಲು ದಾಖಲೆಗಳಿಲ್ಲ. ಆದ್ದರಿಂದ ಏಕ ಸದಸ್ಯಪೀಠದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಅನುಕಂಪದ ಆಧಾರದ ಮೇಲೆ ನೇಮಕಾತಿಯು ಸಂವಿಧಾನದ 14 ಮತ್ತು 16 ನೇ ವಿಧಿಗಳಲ್ಲಿ ಜಾರಿಗೆ ತಂದಿರುವ ಸಾರ್ವಜನಿಕ ಉದ್ಯೋಗದಲ್ಲಿ ಸಮಾನತೆಯ ಸಾಮಾನ್ಯ ನಿಯಮಕ್ಕೆ ಒಂದು ಅಪವಾದವಾಗಿದೆ. ಹಾಗಾಗಿ, ಅನುಕಂಪದ ಉದ್ಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ನ್ಯಾಯಾಲಯಗಳು ವ್ಯಾಖ್ಯಾನದ ಪ್ರಕ್ರಿಯೆಯ ಮೂಲಕ ಶಾಸನಬದ್ಧ ವ್ಯಾಖ್ಯಾನಗಳನ್ನು ವಿಸ್ತರಿಸಲು ಸಾಧ್ಯವಿಲ್ಲ. ಈ ಕುರಿತ ಕಾನೂನಿನಲ್ಲಿ ಕುಟುಂಬದ ಸದಸ್ಯ ವ್ಯಕ್ತಿ ಎಂಬುದಕ್ಕೆ ಕಾನೂನು ರೂಪಕರು ಕೆಲವು ಪದಗಳನ್ನು ನಿರ್ದಿಷ್ಟಪಡಿಸಿದ್ದಾರೆ. ಕುಟುಂಬದ ವ್ಯಾಖ್ಯಾನಕ್ಕೆ ನ್ಯಾಯಾಲಯ ಒಂದು ಪದವನ್ನು ಸೇರಿಸಲು ಮತ್ತು ರದ್ದುಪಡಿಸಲು ಸಾಧ್ಯವಿಲ್ಲ. ಹಾಗಾಗಿ, ಮೇಲ್ಮನವಿದಾರರ ಮನವಿ ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಕರ್ನಾಟಕ ನಾಗರಿಕ ಸೇವೆಗಳ ಅನುಕಂಪದ ಆಧಾರದ ನೇಮಕಾತಿ ನಿಯಮಗಳು 1996ರ 2(1)(ಬಿ) ಪ್ರಕಾರ ಒಂದು ವೇಳೆ ಸರ್ಕಾರಿ ನೌಕರನಾಗಿರುವ ಪುರುಷ ಅನಾರೋಗ್ಯದಿಂದ ಸೇವಾವಧಿಯಲ್ಲಿ ಮೃತಪಟ್ಟಲ್ಲಿ ಅವರನ್ನು ಅವಲಂಬಿಸಿರುವ ವಿಧವಾ ಪತ್ನಿ, ಮಗ ಅಥವಾ ಮಗಳು (ಅವಿವಾಹಿತೆ, ವಿವಾಹಿತೆ, ವಿಚ್ಛೇದಿತೆ ಹಾಗೂ ವಿಧವೆ) ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಬಹುದು ಎಂದು ಕಾನೂನು ಸ್ಪಷ್ಟಪಡಿಸುತ್ತದೆ. ಈ ವ್ಯಾಖ್ಯಾನದಲ್ಲಿ ಸಹೋದರಿಯನ್ನು ಸೇರಿಸಿಲ್ಲ, ಎಂದು ಅಭಿಪ್ರಾಯಪಟ್ಟು ಅರ್ಜಿದಾರ ಮೇಲ್ಮನವಿಯನ್ನು ತಿರಸ್ಕರಿಸಿದೆ.