ಲೇಖನ: ಮಂಜೇಗೌಡ ಕೆ.ಜಿ. ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಬೆಂಗಳೂರು: ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಟ್ಟುಕೊಳ್ಳುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಪ್ರಕರಣವೊಂದರ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ.
ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಿರುವ ತಮ್ಮ ಪಾಸ್ಪೋರ್ಟ್ ನ್ನು ಬಿಡುಗಡೆ ಮಾಡಲು ನಿರ್ದೇಶನ ಕೋರಿ ಬೆಂಗಳೂರಿನ ಪ್ರವೀಣ್ ಸುರೇಂದಿರನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಸಿಆರ್ಪಿಸಿ ಸೆಕ್ಷನ್ 102ರ ಅಡಿ ಪೊಲೀಸರಿಗೆ ದಾಖಲೆಗಳನ್ನು ಜಪ್ತಿ ಮಾಡುವ ಅಧಿಕಾರವಿದೆ. ಅದೇ ರೀತಿ ಸೆಕ್ಷನ್ 104ರ ಪ್ರಕಾರ ನ್ಯಾಯಾಲಯಕ್ಕೆ ದಾಖಲೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿದೆ. ಆದರೆ, ಪಾಸ್ಪೋರ್ಟ್ ಕಾಯ್ದೆ-1967ರ ಸೆಕ್ಷನ್ 10ರಲ್ಲಿ ಪಾಸ್ಪೋರ್ಟ್ ಬದಲಾವಣೆ, ವಶಪಡಿಸಿಕೊಳ್ಳುವಿಕೆ ಹಾಗೂ ಹಿಂಪಡೆಯುವ ಅಧಿಕಾರ ಪಾಸ್ಪೋರ್ಟ್ ಸಕ್ಷಮ ಪ್ರಾಧಿಕಾರಕ್ಕೆ ಮಾತ್ರವೇ ಇದೆ. ಪಾಸ್ಪೋರ್ಟ್ ಕಾಯ್ದೆಯು ವಿಶೇಷ ಶಾಸನವಾಗಿದ್ದು ಅದರ ನಿಯಮಗಳ ಮೇಲೆ ಸಿಆರ್ಪಿಸಿಯ ನಿಯಮಗಳನ್ನು ಚಲಾಯಿಸಲಾಗದು ಎಂದು ಅಭಿಪ್ರಾಯಪಟ್ಟಿದೆ
ಅಲ್ಲದೇ, ಪಾಸ್ಪೋರ್ಟ್ ನ್ನು ಅರ್ಜಿದಾರರಿಗೆ ಹಿಂದಿರುಗಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿರುವ ಪೀಠ, ಅರ್ಜಿದಾರರು ತಮ್ಮ ವಿರುದ್ಧದ ಬಾಕಿ ಪ್ರಕರಣ ಇತ್ಯರ್ಥವಾಗುವವರೆಗೆ ದೇಶ ಬಿಟ್ಟುಹೋಗಬಾರದು ಎಂದೂ ಸ್ಪಷ್ಟಪಡಿಸಿದೆ.
(CRL.P 1892/2022)