News

ಮಲ್ಲೇಶ್ವರ ಕಡಲೆಕಾಯಿ ಪರಿಷೆಗೆ ಅಪಾರ ಸಂಖ್ಯೆ ಜನರ ಭೇಟಿ, ಸಂಭ್ರಮದ ವಾತಾವರಣ

Share It

ಬೆಂಗಳೂರು: ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಾಲಯದ ಸನ್ನಿಧಿಯಲ್ಲಿ ಮಲ್ಲೇಶ್ವರ ಗೆಳೆಯರ ಬಳಗ ಹಮ್ಮಿಕೊಂಡಿರುವ 9ನೇ ವರ್ಷದ ಕಡಲೆಕಾಯಿ ಪರಿಷೆಗೆ ಶನಿವಾರ ಮತ್ತು ಭಾನುವಾರ ಅಪಾರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದು, ಕಡಲೆ ಕಾಯಿ ಕೊಂಡು ಸಂಭ್ರಮಿಸುತ್ತಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಚಾಲನೆ:

ಕಾರ್ತಿಕ ಮಾಸದ ಅಂಗವಾಗಿ ಕಾಡು ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಆಯೋಜಿಸಿರುವ 9ನೇ ವರ್ಷದ ಕಡಲೆಕಾಯಿ ಪರಿಷೆಗೆ ಶನಿವಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದರು. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಪರಿಷೆಗೆ ಜನರು ತಂಡೋಪತಂಡವಾಗಿ ಆಗಮಿಸಿದ್ದು, ಕಡಲೆಕಾಯಿ ಸವಿಯುತ್ತಿದ್ದಾರೆ.

ಅಕ್ಕ ಪಕ್ಕದ ರಾಜ್ಯದ ರೈತರ ಆಗಮನ:

ತಮಿಳುನಾಡು, ಅಂಧ್ರಪ್ರದೇಶದಿಂದ ಕೂಡ ಆಗಮಿಸಿರುವ ರೈತರು ಹಸಿ, ಒಣ, ಉರಿದ ಹಾಗೂ ಬೇಯಿಸಿದ ಕಡಲೆಕಾಯಿಯನ್ನು ತಂದು ಮಾರಾಟ ಮಾಡುತ್ತಿದ್ದು, ಕಣ್ಣು ಹಾಯಿಸಿದ ಕಡೆಗಳೆಲ್ಲಾ ಕಡಲೆಕಾಯಿಯ ರಾಶಿಗಳೆಲ್ಲಾ ಕಾಣುತ್ತಿವೆ. ಈ ಬಾರಿ 400ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ.

ಬಟ್ಟೆ ಹಾಗೂ ಪೇಪರ್ ಬ್ಯಾಗ್‌ಗಳ ಉಚಿತವಾಗಿ ವಿತರಣೆ:

ಪ್ಲಾಸ್ಟಿಕ್ ಮುಕ್ತ ಮಲ್ಲೇಶ್ವರ ಅಭಿಯಾನದ ಅಂಗವಾಗಿ 1 ಲಕ್ಷ ಬಟ್ಟೆ ಹಾಗೂ ಪೇಪರ್ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಗ್ರಾಮೀಣ ಸೊಗಡಿನ ಹಳ್ಳಿ ಜಾತ್ರೆಗೆ ಮಲ್ಲೇಶ್ವರಂನಲ್ಲಿ ನಡೆಯುತ್ತಿದ್ದು, ನಗರ ನಿವಾಸಿಗಳಿಗೆ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನ ವಿವಿಧ ಕಡೆಗಳಿಂದ ಜನರು ಆಗಮಿಸಿ ಕಡಲೆಕಾಯಿ, ಕಡ್ಲೆಪುರಿ ಸವಿದು ಸಂಭ್ರಮಿಸುತ್ತಿದ್ದಾರೆ.


 


Share It

You cannot copy content of this page