ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. 9980178111
ಕ್ರಿಮಿನಲ್ ಪ್ರಕರಣದಲ್ಲಿ ಈ ಹಿಂದಿನ ವಕೀಲರು ಸಾಕ್ಷಿಯನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸದೇ ಇದ್ದರೆ ಹೊಸ ವಕೀಲರು ಪ್ರಕರಣವನ್ನು ಕೈಗೆತ್ತಿಕೊಂಡಾಗ ಸಾಕ್ಷಿಯನ್ನು ಪುನಃ ಮರು ಪರೀಕ್ಷೆ (ಕ್ರಾಸ್ ಎಕ್ಸಾಮಿನೇಷನ್) ಗೆ ಒಳಪಡಿಸಲು ಸಿಆರ್ಪಿಸಿ ಸೆಕ್ಷನ್ 311 ರ ಅಡಿ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಬಹುದು ಎಂದು ಮೇಘಾಲಯ ಹೈಕೋರ್ಟ್ ತೀರ್ಪು ನೀಡಿದೆ.
ಆರೋಪಿಯ ಕೋರಿಕೆ ಮೇರೆಗೆ ಸಾಕ್ಷಿ (PW2)ಯನ್ನು ಮರು ಅಡ್ಡ ಪರೀಕ್ಷೆಗೆ ಒಳಪಡಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಮಾನ್ಯ ಮಾಡಿತ್ತು. ಈ ಹಿಂದೆ ಆರೋಪಿ ಪರ ಕೆಲಸ ಮಾಡಿದ್ದ ವಕೀಲರು ಸಾಕ್ಷಿಯನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸಿಲ್ಲವಾದ್ದರಿಂದ, ಹೊಸದಾಗಿ ನೇಮಕಗೊಂಡಿರುವ ವಕೀಲರು ಪರೀಕ್ಷೆ ನಡೆಸಲು ಅನುಮತಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಮಾನ್ಯ ಮಾಡಿ, ಸಾಕ್ಷಿಯನ್ನು ಪುನಃ ಕರೆಸಲು ಆದೇಶಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರ/ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸಾಕ್ಷಿಯನ್ನು ಆರೋಪಿ ಪರ ವಕೀಲರು ಸರಿಯಾಗಿ ಪರೀಕ್ಷೆಗೆ ಒಳಪಡಿಸಿಲ್ಲ ಅಥವಾ ಈ ಹಿಂದಿನ ವಕೀಲರು ಸಮರ್ಥರಿರಲಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯನ್ನು ಪುನಃ ವಿಚಾರಣೆಗೆ ಕರೆಸುವುದು ಸೂಕ್ತವಲ್ಲ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಸರ್ಕಾರದ ವಾದ ತಿರಸ್ಕರಿಸಿರುವ ಹೈಕೋರ್ಟ್, ಪ್ರಕರಣವನ್ನು ನ್ಯಾಯಯುತವಾಗಿ ನಿರ್ಧಾರ ಮಾಡಲು ಸಾಕ್ಷಿಯನ್ನು ಕರೆಸುವುದು ಅಗತ್ಯವಿದ್ದಾಗ ಸಿಆರ್ಪಿಸಿ ಸೆಕ್ಷನ್ 311 ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಬಹುದಾಗಿದೆ. ಅದರಂತೆ ಆರೋಪಿ ಕೋರಿಕೆಯಂತೆ ಈ ಹಿಂದೆ ಅಡ್ಡ ಪರೀಕ್ಷೆ ಎದುರಿಸಿರುವ ಸಾಕ್ಷಿಯನ್ನು ಮತ್ತೊಮ್ಮೆ ಅಡ್ಡಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಸೂಕ್ತವಾಗಿದೆ ಎಂದು ಹೈಕೋರ್ಟ್ ಹೇಳಿದೆ.
(Crl. Petn. No. 104 of 2023)
