ಸಂತ್ರಸ್ತ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶವಿಲ್ಲದೇ ವಾಗ್ವಾದದ ವೇಳೆ ಹಠಾತ್ ಆಗಿ ಜಾತಿ ಹೆಸರನ್ನು ಬಳಸಿದರೆ ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅನ್ವಯಿಸಲು ಬರುವುದಿಲ್ಲ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪು ನೀಡಿದೆ.
ತಮ್ಮ ವಿರುದ್ಧದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡಿರುವುದನ್ನು ಆಕ್ಷೇಪಿಸಿ ಅಜಯ್ ಪಟ್ನಾಯಕ್ ಮತ್ತಿತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್.ಕೆ ಪಟ್ನಾಯಕ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಆರೋಪಿತ ವ್ಯಕ್ತಿ ವಾಗ್ವಾದದ ವೇಳೆ ಸಂತ್ರಸ್ತನನ್ನು ಅವಮಾನಿಸುವ ಯಾವುದೇ ಉದ್ದೇಶ ಇಲ್ಲದೇ ಹಠಾತ್ ಆಗಿ ಜಾತಿಯ ಹೆಸರಿನ ಬಳಕೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅನ್ವಯಿಸಲು ಬರುವುದಿಲ್ಲ. ಸಂತ್ರಸ್ತ ವ್ಯಕ್ತಿ ಎಸ್ಸಿ-ಎಸ್ಟಿ ಜಾತಿಗೆ ಸೇರಿದವರು ಎಂಬುದನ್ನು ತಿಳಿದು ಅವಮಾನಿಸುವ ಉದ್ದೇಶದಿಂದಲೇ ಜಾತಿಯ ಹೆಸರು ಬಳಕೆ ಮಾಡಿದರೆ ಮಾತ್ರ ಎಸ್ಸಿ/ಎಸ್ಟಿ ಕಾಯ್ದೆ ಅನ್ವಯಿಸಲು ಸಾಧ್ಯ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಹಿತೇಶ್ ವರ್ಮಾ ವರ್ಸಸ್ ಸ್ಟೇಟ್ ಆಫ್ ಉತ್ತರಾಖಂಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಸಂತ್ರಸ್ತನನ್ನು ಜಾತಿ ಕಾರಣಕ್ಕಾಗಿ ಅವಮಾನಿಸುವ ಉದ್ದೇಶ ಹೊಂದಿಲ್ಲದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನು ಅನ್ವಯಿಸಲು ಬಾರದು ಎಂದು ಸ್ಪಷ್ಟವಾಗಿ ಹೇಳಿದೆ ಎಂಬ ಅಂಶವನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ: 2017ರ ಮೇ 19 ರಂದು ಪ್ರಕರಣದ ಅರ್ಜಿದಾರರು ಹಾಗೂ ಇತರೆ ಕೆಲ ವ್ಯಕ್ತಿಗಳ ನಡುವೆ ರಸ್ತೆಯಲ್ಲಿ ಜಗಳ ನಡೆಯುತ್ತಿತ್ತು. ಈ ವೇಳೆ ದೂರುದಾರ ವ್ಯಕ್ತಿ ಮಧ್ಯಪ್ರವೇಶಿಸಿ ವಾಗ್ವಾದ ನಡೆಸುತ್ತಿದ್ದವರಿಗೆ ಸಮಾಧಾನ ಹೇಳಲು ಬಂದಿದ್ದರು. ಅರ್ಜಿದಾರರು ಮಾತಿನ ನಿಯಂತ್ರಣ ತಪ್ಪಿ ಜಾತಿ ಹೆಸರನ್ನು ಬಳಸಿ ಗದರಿಸಿದ್ದರು. ಹೀಗೆ ಜಗಳ ಬಿಡಿಸಲು ಮಧ್ಯಸ್ಥಿಕೆ ವಹಿಸಿ ಹೋಗಿದ್ದ ಸಂದರ್ಭದಲ್ಲಿ ತನ್ನನ್ನು ಜಾತಿ ಹೆಸರಿಡಿದು ನಿಂದಿಸಿದ್ದಾರೆಂದು ಆರೋಪಿಸಿ ಕೇಸ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ವಿಚಾರಣಾ ನ್ಯಾಯಾಲಯ ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
CRLMC No.2636 of 2021