Law News

ತನಿಖೆ ನಡೆಸದೆ ಸೇವೆಯಿಂದ ಏಕಾಏಕಿ ವಜಾಗೊಳಿಸಲು ಸಾಧ್ಯವಿಲ್ಲ: ಹೈಕೋರ್ಟ್

Share It

ಪ್ರೊಬೆಷನರಿಯಲ್ಲಿರುವ ಸಿಬ್ಬಂದಿ ವಿರುದ್ಧ ದುರ್ನಡತೆ ಆರೋಪ ಬಂದರೆ ಅವರ ವಿರುದ್ಧ ತನಿಖೆ ನಡೆಸದೆ ಏಕಾಏಕಿ ವಜಾ ಮಾಡುವಂತಿಲ್ಲ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಆದೇಶಿಸಿದೆ.

ರಮೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ಆದೇಶದಲ್ಲಿ, ನಿಯಮದ ಪ್ರಕಾರ ಪ್ರೊಬೆಷನರಿ ಸಮಯದಲ್ಲಿ ಅರ್ಜಿದಾರರನ್ನು ವಜಾಗೊಳಿಸುವ ಅಧಿಕಾರ ಇಲಾಖೆಗೆ ಇದೆ. ಆದರೆ ಅಂತಹ ಸಿಬ್ಬಂದಿ ವಿರುದ್ಧ ದುರಾಚಾರ ಅಥವಾ ತಪ್ಪು ನಡವಳಿಕೆಯ ದೂರುಗಳು ಬಂದಾಗ ಕರ್ನಾಟಕ ಸಿವಿಲ್‌ ಸರ್ವೀಸ್‌ (ಪ್ರೊಬೇಷನ್‌) ನಿಯಮ 1977 ಅಧಿನಿಯಮ 5ರ ಪ್ರಕಾರ ತನಿಖೆ ಅತ್ಯಗತ್ಯ. ತನಿಖೆ ನಡೆಸದೆ ಏಕಾಏಕಿ ಸೇವೆಯಿಂದ ವಜಾ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: 2017 ರಲ್ಲಿ ರಮೇಶ್‌ ಮಲ್ಲಿ ಪೊಲೀಸ್‌ ಕಾನ್ಸಟೇಬಲ್‌ (ವೈರ್‌ ಲೆಸ್‌ ವಿಭಾಗ) ಆಗಿ ನೇಮಕಗೊಂಡಿದ್ದರು. ಅವರು ಪ್ರೊಬೇಷನರಿ ಆಗಿದ್ದ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಕೆಲವು ವ್ಯಕ್ತಿಗಳು ಸಂಚು ರೂಪಿಸಿದ್ದರು ಎಂಬ ಮಾಹಿತಿ ಸಿಸಿಬಿಗೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅರ್ಜಿದಾರ ರಮೇಶ್‌ ಮಲ್ಲಿ ಸೇರಿದಂತೆ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಅರ್ಜಿದಾರರು ಜಾಮೀನು ಪಡೆದು ಹೊರಬಂದಿದ್ದರು. ಅಷ್ಟರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ವಜಾ ಮಾಡಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿತ್ತು. ಹೀಗಾಗಿ, ರಮೇಶ್ ಹೈಕೋರ್ಟ್‌ ಮೊರೆ ಹೋಗಿದ್ದರು.

ರಮೇಶ್ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ವಜಾ ಆದೇಶವನ್ನು ಎತ್ತಿಹಿಡಿದಿದ್ದ ಬೆಳಗಾವಿಯ ಕರ್ನಾಟಕ ಆಡಳಿತ ಮಂಡಳಿ ಆದೇಶವನ್ನು ರದ್ದುಗೊಳಿಸಿದೆ. ನಿಯಮದ ಪ್ರಕಾರ ಪ್ರೊಬೆಷನರಿ ಸಮಯದಲ್ಲಿ ಅರ್ಜಿದಾರರನ್ನು ವಜಾಗೊಳಿಸುವ ಅಧಿಕಾರ ಇದೆ. ಆದರೆ ಅಂತಹ ಸಿಬ್ಬಂದಿ ವಿರುದ್ಧ ದುರಾಚಾರ ಅಥವಾ ತಪ್ಪು ನಡವಳಿಕೆಯ ದೂರುಗಳು ಬಂದಾಗ ಕರ್ನಾಟಕ ಸಿವಿಲ್‌ ಸರ್ವಿಸ್‌ (ಪ್ರೊಬೇಷನ್‌) ನಿಯಮ 1977 ಅಧಿನಿಯಮ 5ರ ಪ್ರಕಾರ ತನಿಖೆ ಅತ್ಯಗತ್ಯ. ತನಿಖೆ ನಡೆಸದಂತೆ ಏಕಾಏಕಿ ಸೇವೆಯಿಂದ ವಜಾ ಮಾಡಬಾರದು ಎಂದು ಆದೇಶ ನೀಡಿದೆ.

(WP 104944/2021)


Share It

You cannot copy content of this page