ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಕಡಿತ ಮಾಡಿದಾಗ ಆ ಕುರಿತು ನೋಟಿಸ್ ಬೋರ್ಡ್ ನಲ್ಲಿ ಹಾಕಿದರೆ ಸಾಲದು. ಈ ವಿಷಯವನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಹೈಕೋರ್ಟ್ ಬ್ಯಾಂಕುಗಳಿಗೆ ಸೂಚಿಸಿದೆ.
ಬಡ್ಡಿ ದರ ಕಡಿತದ ಪ್ರಯೋಜನ ನೀಡಿಲ್ಲವೆಂದು ಆಕ್ಷೇಪಿಸಿ ಗ್ರಾಹಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮಾನ್ಯ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಹಿನ್ನೆಲೆ: ಬೆಂಗಳೂರಿನ ಬಿ.ಎಸ್ ಶೇಖರ್ ಎಂಬುವರು 2007ರಲ್ಲಿ ಕೆನರಾ ಬ್ಯಾಂಕ್ ನಿಂದ ಶೇ 11.75ರ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದಿದ್ದರು. ಬ್ಯಾಂಕ್ 2010ರಲ್ಲಿ ಜುಲೈ 1ರಿಂದ ಅನ್ವಯವಾಗುವಂತೆ ಬಡ್ಡಿ ದರವನ್ನು ಶೇ 8.25ಕ್ಕೆ ಇಳಿಸಿತ್ತು. ಈ ಮಾಹಿತಿ ಅರ್ಜಿದಾರರಿಗೆ ತಿಳಿದಿರಲಿಲ್ಲ. ತಡವಾಗಿ ಮಾಹಿತಿ ಸಿಕ್ಕಿದ್ದರಿಂದ 2017ರ ಜನವರಿ 24ರಂದು ಬ್ಯಾಂಕ್ ಗೆ ಲಿಖಿತ ಮನವಿ ಸಲ್ಲಿಸಿ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಕೋರಿದ್ದರು.
ಶೇಖರ್ ಮನವಿ ಪರಿಗಣಿಸಲು ನಿರಾಕರಿಸಿದ ಬ್ಯಾಂಕ್ ಅವರು ಅರ್ಜಿ ಸಲ್ಲಿಸಿದ ದಿನದಿಂದ ಬಡ್ಡಿ ದರ ಕಡಿತದ ಪ್ರಯೋಜನ ನೀಡುವುದಾಗಿ ತಿಳಿಸಿತ್ತು. ಬ್ಯಾಂಕ್ ನ ಈ ಕ್ರಮ ಪ್ರಶ್ನಿಸಿ ಶೇಖರ್ ಓಂಬುಡ್ಸ್ ಮನ್ ಗೆ ದೂರು ನೀಡಿದ್ದರು. ದೂರು ಪರಿಶೀಲಿಸಿದ ಓಂಬುಡ್ಸ್ ಮನ್ ಅರ್ಜಿದಾರರ ಕೋರಿಕೆಯಲ್ಲಿ ಹುರುಳಿಲ್ಲ ಎಂದು ವಜಾ ಮಾಡಿದ್ದರು.
ಬ್ಯಾಂಕ್ ಹಾಗೂ ಓಂಬುಡ್ಸ್ ಮನ್ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, 2010ರಿಂದ ಅನ್ವಯವಾಗುವಂತೆ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಬ್ಯಾಂಕ್ ಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬ್ಯಾಂಕ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ತೀರ್ಪು: ಬ್ಯಾಂಕ್ ನ ಮೇಲ್ಮನವಿ ವಜಾಗೊಳಿಸಿರುವ ವಿಭಾಗೀಯ ಪೀಠ, ಪ್ರಕರಣದಲ್ಲಿ ಬ್ಯಾಂಕ್ ನ ನಿಲುವು ತೃಪ್ತಿಕರವಾಗಿಲ್ಲ. ಬಡ್ಡಿದರ ಕಡಿತ ಮಾಡಿದ ಕುರಿತು ಬ್ಯಾಂಕ್ ನ ನೋಟಿಸ್ ಬೋರ್ಡ್ ನಲ್ಲಿ ಹಾಕಿದರೆ ಅದು ವ್ಯಾಪಕ ಪ್ರಚಾರವಾಗುವುದಿಲ್ಲ. ಬಹುತೇಕ ಗ್ರಾಹಕರಿಗೆ ಆ ಕುರಿತು ಮಾಹಿತಿಯೇ ತಲುಪುವುದಿಲ್ಲ. ಹೀಗಾಗಿ, ಸುತ್ತೋಲೆ ಹೊರಡಿಸಿದಾಗ ಅದರ ಪ್ರತಿಯನ್ನು ಗ್ರಾಹಕರಿಗೆ ಖುದ್ದಾಗಿ ಕಳುಹಿಸಿದಾಗ ಮಾತ್ರ ಅದು ಮಾಹಿತಿ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಬ್ಯಾಂಕ್ 2010ರಲ್ಲಿ ಯಾವ ದಿನಾಂಕದಿಂದ ಬಡ್ಡಿ ದರ ಕಡಿತದ ಪ್ರಯೋಜನ ನೀಡಿ ಸುತ್ತೋಲೆ ಹೊರಡಿಸಿತ್ತೋ ಅಂದಿನಿಂದ ಅನ್ವಯವಾಗುವಂತೆ ಅರ್ಜಿದಾರರಿಗೆ ಬಡ್ಡಿದರ ಕಡಿತದ ಪ್ರಯೋಜನವನ್ನು ವರ್ಗಾಯಿಸಬೇಕು ಎಂದು ಆದೇಶಿಸಿದೆ.
(WA 12/2022)