ಬೆಂಗಳೂರು: ಆರೋಪಿಗೆ ಪೊಲೀಸರು ಕೈಕೋಳ ತೊಡಿಸಿ ಬಂಧಿಸಿ ಕರೆತಂದಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ತಪ್ಪಿಗೆ 2 ಲಕ್ಷ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಪರಿಹಾರ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಯಿಂದ ವಸೂಲಿ ಮಾಡಿಕೊಳ್ಳಬಹುದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಕೈಕೋಳ ತೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ, ಪೊಲೀಸರು ಮತ್ತು ನ್ಯಾಯಾಧೀಶರಿಗೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.
ಹೈಕೋರ್ಟ್ ತೀರ್ಪಿನ ವಿವರ: ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973 (ಸಿಆರ್ಪಿಸಿ) ಸೆಕ್ಷನ್ 46 ಆರೋಪಿತರನ್ನು ಬಂಧಿಸುವ ಕುರಿತು ಹೇಳುತ್ತದೆ. ಸೆಕ್ಷನ್ 49 ಬಂಧಿತ ವ್ಯಕ್ತಿ ತಪ್ಪಿಸಿಕೊಳ್ಳುವುದನ್ನು ಪ್ರತಿಬಂಧಿಸುವುದಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬಾರದು ಎಂದು ತಿಳಿಸುತ್ತದೆ. ಐಪಿಸಿ ಸೆಕ್ಷನ್ 220ರ ಪ್ರಕಾರ ಯಾವುದೇ ಅಧಿಕಾರಿಗೆ ಬಂಧಿಸುವ ಮತ್ತು ವಿಚಾರಣೆಗೆ ಒಳಪಡಿಸುವ ಅಧಿಕಾರವಿದ್ದರೂ, ಭ್ರಷ್ಟತೆಯಿಂದ ಅಥವಾ ದ್ವೇಷದಿಂದ ಕಾನೂನಿಗೆ ವಿರುದ್ಧವಾಗಿ ವ್ಯಕ್ತಿಯನ್ನು ಬಂಧಿಸುವುದು 7 ವರ್ಷಗಳವರೆಗಿನ ಶಿಕ್ಷಾರ್ಹ ಅಪರಾಧ ಎನ್ನಿಸಿಕೊಳ್ಳುತ್ತದೆ.
ಕರ್ನಾಟಕ ಪೊಲೀಸ್ ಮ್ಯಾನುಯಲ್ ನ ಸೆಕ್ಷನ್ 831, 832, 834, 835 ನಿಯಮಗಳು ಆರೋಪಿ ಹಿಂಸಾತ್ಮಕ ಅಥವಾ ಅಪಾಯಕಾರಿ ವ್ಯಕ್ತಿಯಲ್ಲದಿದ್ದರೆ ಮತ್ತು ತಪ್ಪಿಸಿಕೊಂಡು ಪರಾರಿಯಾಗುತ್ತಾನೆ ಎನ್ನಿಸದಿದ್ದರೆ ಕೈಕೋಳ ತೊಡಿಸಬಾರದು ಎಂದು ಹೇಳುತ್ತವೆ. ಹಾಗೆಯೇ, ನ್ಯಾಯಾಲಯದಲ್ಲಿ ಯಾವುದೇ ಕಾರಣಕ್ಕೂ ಕೈಕೋಳದೊಂದಿಗೆ ಹಾಜರುಪಡಿಸಬಾರದು. ಹಾಗಿದ್ದಲ್ಲಿ, ಸೂಕ್ತ ಕಾರಣಗಳೊಂದಿಗೆ ಮನವಿ ಸಲ್ಲಿಸಿ ನ್ಯಾಯಾಲಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ಪೊಲೀಸ್ ಮ್ಯಾನುಯಲ್ ನಲ್ಲೇ ಸ್ಪಷ್ಟಪಡಿಸಲಾಗಿದೆ. ಅಲ್ಲದೇ, ಕೈಕೋಳ ತೊಡಿಸುವ ಅನಿವಾರ್ಯತೆ ಇದ್ದಲ್ಲಿ ಆ ಕುರಿತು ಸ್ಟೇಷನ್ ಡೈರಿಯಲ್ಲಿ ಕೂಡ ಕಡ್ಡಾಯವಾಗಿ ನಮೂದಿಸಬೇಕಿದೆ. ಆದರೆ ಪ್ರಕರಣದಲ್ಲಿ ಪೊಲೀಸರು ಕೈಕೋಳ ತೊಡಿಸಿದ್ದಕ್ಕೆ ಸ್ಟೇಷನ್ ಡೈರಿಯಲ್ಲಿ ಏನನ್ನೂ ನಮೂದಿಸಿಲ್ಲ. ಹಾಗೆಯೇ ಅರ್ಜಿದಾರರನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಪ್ರಕರಣದಲ್ಲಿ ಯಾವುದೇ ಪ್ರಮಾಣಪತ್ರ ಸಲ್ಲಿಸಿಲ್ಲ.
ಸುಪ್ರೀಂಕೋರ್ಟ್ ಪ್ರೇಮ್ ಶಂಕರ್ ಶುಕ್ಲಾ ವರ್ಸಸ್ ಡೆಲ್ಲಿ ಅಡ್ಮಿನಿಸ್ಟ್ರೇಷನ್ ಪ್ರಕರಣದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ತಮ್ಮ ಅನುಕೂಲಕ್ಕಾಗಿ ಕೈಕೋಳ ತೊಡಿಸುವಂತಿಲ್ಲ. ಕೋಳ ತೊಡಿಸುವುದಾದರೆ ಆ ಕುರಿತು ನ್ಯಾಯಾಲಯದ ಅನುಮತಿ ಕಡ್ಡಾಯ ಎಂದು ಸ್ಪಷ್ಟವಾಗಿ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಲಯದ ಆದೇಶದಂತೆ ಬಂಧಿಸುವ ಅಗತ್ಯವಿತ್ತು. ಆದರೆ, ಆತನಿಗೆ ಕೈಕೋಳ ತೊಡಿಸುವ ಯಾವುದೇ ಅಗತ್ಯ ಮತ್ತು ಅನಿವಾರ್ಯತೆ ಇರಲಿಲ್ಲ. ಹಾಗಿದ್ದೂ ಪೊಲೀಸರು ಆತನ ಕೈಗೆ ಕೋಳ ತೊಡಿಸುವ ಮೂಲಕ ಕಾನೂನು ಮತ್ತು ಅರ್ಜಿದಾರರ ಹಕ್ಕನ್ನು ಚ್ಯುತಿಗೊಳಿಸಿದ್ದಾರೆ. ಹೀಗಾಗಿ ಅರ್ಜಿದಾರನಿಗೆ ಸರ್ಕಾರ ಪರಿಹಾರ ನೀಡಬೇಕು ಮತ್ತು ಆ ಹಣವನ್ನು ಸರ್ಕಾರ ತಪ್ಪಿತಸ್ಥ ಅಧಿಕಾರಿಯಿಂದ ವಸೂಲಿ ಮಾಡಿಕೊಳ್ಳಬಹುದಾಗಿದೆ ಎಂದು ತೀರ್ಪಿನಲ್ಲಿ ಆದೇಶಿಸಿದೆ.
ಹೈಕೋರ್ಟ್ ನಿರ್ದೇಶನಗಳು:
ಆರೋಪಿತರಿಗೆ, ವಿಚಾರಣಾಧೀನ ಅಥವಾ ಶಿಕ್ಷೆಗೆ ಗುರಿಯಾಗಿರುವ ಕೈದಿಗಳಿಗೆ ಪೊಲೀಸರು ಸೂಕ್ತ ಕಾರಣವಿಲ್ಲದೆ ಕೈಕೋಳ ತೊಡಿಸುವಂತಿಲ್ಲ. ತೊಡಿಸುವುದಿದ್ದರೆ ಯಾವ ಕಾರಣಕ್ಕಾಗಿ ಎಂಬ ಕುರಿತು ಕೇಸ್ ಡೈರಿಯಲ್ಲಿ ನಮೂದಿಸುವುದು ಕಡ್ಡಾಯ.
ಯಾವುದೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಕೈಕೋಳ ತೊಡಿಸಿದ್ದರೇ ಎಂಬ ಕುರಿತು ವಿಚಾರಿಸಬೇಕು. ತೊಡಿಸಿದ್ದ ಕುರಿತು ತಿಳಿಸಿದರೆ ಆ ಕುರಿತು ಕೋರ್ಟ್ ತೊಡಿಸಿದ್ದೇಕೆ, ತೊಡಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕು.
ವಿಚಾರಣಾಧೀನ ಕೈದಿಗೆ ಕೋಳ ತೊಡಿಸಿದ್ದರೆ ಆತನನ್ನು ಹಾಜರುಪಡಿಸಿದಾಗ ಕೋರ್ಟ್ ಆ ಕುರಿತು ವಿಚಾರಿಸಬೇಕು. ತೊಡಿಸಿದ್ದರು ಎಂದು ತಿಳಿಸಿದರೆ ಆ ಕುರಿತು ಕೋರ್ಟ್ ವಿಚಾರಿಸಿ ನಿರ್ಧರಿಸಬೇಕು.
ಕೈಕೋಳ ತೊಡಿಸುವುದನ್ನು ಆದಷ್ಟು ಕಡಿಮೆ ಮಾಡಲು ವಿಚಾರಣಾಧೀನ ಕೈದಿಗಳನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಬದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಕೋರ್ಟ್ ಗಳು ಕ್ರಮ ಕೈಗೊಳ್ಳಬಹುದು.
ವಿಚಾರಣಾಧೀನ ಕೈದಿಗಳನ್ನು ಕೋರ್ಟ್ ಗೆ ಹಾಜರುಪಡಿಸುವಾಗ ಕೈಕೋಳ ಅಗತ್ಯವಿದ್ದರೆ ಆ ಕುರಿತು ಸಂಬಂಧಿತ ನ್ಯಾಯಾಲಯದಿಂದ ಪೊಲೀಸರು ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ಕೈಕೋಳ ತೊಡಿಸುವುದು ಅಕ್ರಮ ಮತ್ತು ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಪ್ರಸ್ತುತ ಪ್ರಕರಣದಲ್ಲಿ ಆರೋಪಿ ಬಂಧಿಸಲು ಅಗತ್ಯ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಹೀಗಾಗಿ ತಪ್ಪಿಸಿಕೊಂಡು ಹೋಗಬಾರದೆಂದು ಅಧಿಕಾರಿ ಕೋಳ ತೊಡಿಸಿದ್ದರೆಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ. ಹೀಗಾಗಿ, ಸರ್ಕಾರ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಬೇಕು.
ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ. ಹಾಗಿದ್ದಲ್ಲಿ ಸರ್ಕಾರ ತ್ವರಿತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಪರ ವಕೀಲರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಾಲಮಿತಿಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಯೋಜನೆ ರೂಪಿಸಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಬೇಕು.
ಪೊಲೀಸ್ ಮಹಾನಿರ್ದೇಶಕರು ತಮ್ಮ ಅಧಿಕಾರಿಗಳು ಆರೋಪಿತರನ್ನು ಬಂಧಿಸುವಾಗ ಅವರನ್ನು ಹೇಗೆ ಬಂಧಿಸಿದರು ಎಂಬುದನ್ನು ದಾಖಲಿಸಲು ಧ್ವನಿ ಮತ್ತು ದೃಶ್ಯಗಳೆರಡೂ ರೆಕಾರ್ಡ್ ಆಗುವಂತಹ ಬಾಡಿ ಕ್ಯಾಮೆರಾಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಇಂತಹ ರೆಕಾರ್ಡ್ ಗಳನ್ನು ಕನಿಷ್ಟ ಒಂದು ವರ್ಷ ಸಂಗ್ರಹಿಸಿಡಬೇಕು. ಈ ಕುರಿತಂತೆ ತಮ್ಮ ಅಧಿಕಾರಿಗಳಿಗೆ ತರಬೇತಿ ನೀಡಲು ಪೊಲೀಸ್ ಮಹಾ ನಿರ್ದೇಶಕರು ಅಗತ್ಯ ಎಸ್ಒಪಿ ರೂಪಿಸಬೇಕು.
ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ವರದಿ ಸಲ್ಲಿಸಲು ಇದೇ ಪ್ರಕರಣವನ್ನು 2022ರ ನವೆಂಬರ್ 7ಕ್ಕೆ ವಿಚಾರಣೆಗೆ ನಿಗದಿ ಮಾಡಬೇಕು.
(WP 115362/2019)