ಬೆಂಗಳೂರು: ’ಕಂಪನಿ ಹಾಗೂ ಉದ್ಯೋಗಿಯ ನಡುವಿನ ಸಂಬಂಧ ಹದಗೆಟ್ಟಾಗ ನೌಕರನನ್ನು ಕೆಲಸದಿಂದ ತೆಗೆದುಹಾಕುವ ಸಂಸ್ಥೆಯ ನಿರ್ಧಾರ ಸೂಕ್ತವಾಗಿರುತ್ತದೆ‘ ಎಂಬ ಸುಪ್ರೀಂ ಕೋರ್ಟ್ ಮಾನದಂಡವನ್ನು ಅನುಸರಿಸಿರುವ ಹೈಕೋರ್ಟ್, ವಜಾಗೊಂಡಿರುವ ಟೆಕ್ಕಿಗೆ 10 ಲಕ್ಷ ಪರಿಹಾರ ನೀಡುವಂತೆ ಸಾಫ್ಟ್ವೇರ್ ಕಂಪನಿಗೆ ಆದೇಶಿಸಿದೆ.
ವಜಾಗೊಂಡ ಉದ್ಯೋಗಿಗೆ ಮತ್ತೆ ನೌಕರಿ ನೀಡುವಂತೆ ಕಾರ್ಮಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವಿಎಂವೇರ್ ಸಾಫ್ಟ್ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಕಂಪನಿ ಮತ್ತು ನೌಕರನ ನಡುವಿನ ಬಾಂಧವ್ಯ ಹಳಸಿದೆ. ಇಂತಹ ಸಂದರ್ಭಗಳಲ್ಲಿ ಅವರನ್ನು ಉದ್ಯೋಗದಿಂದ ಬಿಡುಗಡೆ ಮಾಡುವುದು ಸೂಕ್ತ. ಅದೇ ರೀತಿ ಈ ಪ್ರಕರಣವನ್ನು ಕಾರ್ಮಿಕ ನ್ಯಾಯಾಲಯ ತೀರ್ಮಾನಿಸಲು 5 ವರ್ಷ ತೆಗೆದುಕೊಂಡಿದೆ. ಪ್ರಕರಣವನ್ನು ಮತ್ತೇನಾದರೂ ಅಲ್ಲಿಗೇ ಕಳುಹಿಸಿ ತೀರ್ಮಾನಿಸಲು ಹೇಳಿದರೆ ಮತ್ತೈದು ವರ್ಷ ವಿಚಾರಣೆ ನಡೆಸಿದರೂ ಆಶ್ಚರ್ಯವಿಲ್ಲ. ಆದ್ದರಿಂದ, ಪ್ರಕರಣವನ್ನು ಇಲ್ಲೇ ಬಗೆಹರಿಸಲಾಗುತ್ತಿದೆ’ ಎಂದು ತಿಳಿಸಿದೆ.
ಹಾಗೆಯೇ, ಕೆಎಸ್ಆರ್ಟಿಸಿ ವರ್ಸಸ್ ಎಂ.ಜಿ ವಿಠ್ಠಲರಾವ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅನ್ವಯಿಸಿದ ನಿಯಮದಂತೆ ಉದ್ಯೋಗಿಯನ್ನು ಬಿಡುಗಡೆಗೊಳಿಸಬಹುದು ಎಂದಿರುವ ಪೀಠ, ಉದ್ಯೋಗ ಕಳೆದುಕೊಂಡ ಟೆಕ್ಕಿಗೆ 10 ಲಕ್ಷ ಪರಿಹಾರವನ್ನು ಒಂದು ತಿಂಗಳಲ್ಲಿ ನೀಡುವಂತೆ ಆದೇಶಿಸಿದೆ. ನಿಗದಿತ ಅವಧಿಯಲ್ಲಿ ಈ ಮೊತ್ತ ಪಾವತಿಸದಿದ್ದರೆ ವಾರ್ಷಿಕ 10ರಂತೆ ಬಡ್ಡಿ ಸೇರಿಸಿಕೊಡುವಂತೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ವಿ.ಎಂ ಸಾಫ್ಟ್ವೇರ್ ಕಂಪನಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮುಖ್ಯ ಕಚೇರಿ ಹೊಂದಿದ್ದು, ಬೆಂಗಳೂರಿನ ಜೆ.ಪಿ.ನಗರದಲ್ಲಿ ಶಾಖೆ ತೆರೆದಿದೆ. ಈ ಸಂಸ್ಥೆಯಲ್ಲಿ ಅಶೀಷ್ ಕುಮಾರ್ ನಾಥ್ ಎಂಬವರು ಸೀನಿಯರ್ ಸಾಫ್ಟ್ವೇರ್ ಎಂಜಿನಿಯರ್ ಆಗಿ 2015ರಲ್ಲಿ ನೌಕರಿಗೆ ಸೇರಿದ್ದರು. ವಾರ್ಷಿಕ 24 ಲಕ್ಷ ವೇತನ ನಿಗದಿ ಮಾಡಿದ್ದ ಸಂಸ್ಥೆ, 6 ತಿಂಗಳ ಪ್ರೊಬೆಷನರಿ ಅವಧಿ ಬಳಿಕ ಕಾಯಂಗೊಳಿಸಿತ್ತು. ಕೆಲ ದಿನಗಳ ಬಳಿಕ ಸೇವೆ ತೃಪ್ತಿದಾಯಕವಾಗಿಲ್ಲ ಎಂಬ ಕಾರಣ ನೀಡಿದ್ದ ಸಂಸ್ಥೆ ತರಬೇತಿ ಶಿಬಿರಕ್ಕೆ ತೆರಳುವಂತೆ ಸೂಚಿಸಿತ್ತು.
ಕೆಲಸದಿಂದ ತೆಗೆಯಲೆಂದೇ ಸಂಸ್ಥೆ ತನ್ನನ್ನು ತರಬೇತಿ ಶಿಬಿರಕ್ಕೆ ಕಳುಹಿಸಲು ಮುಂದಾಗಿದೆ ಎಂದು ಭಾವಿಸಿದ್ದ ಉದ್ಯೋಗಿ ತರಬೇತಿ ನಿರಾಕರಿಸಿದ್ದರು. ಉದ್ಯೋಗಿಯ ಈ ನಡೆಯನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿದ್ದ ಸಂಸ್ಥೆ ಉದ್ಯೋಗದಿಂದ ವಜಾಗೊಳಿಸಿತ್ತು. ಸಂಸ್ಥೆಯ ಕ್ರಮ ಪ್ರಶ್ನಿಸಿ ಅಶೀಷ್ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ನಡುವೆ ಆಶೀಷ್ ಸಂಸ್ಥೆಗೆ ಬೆದರಿಕೆ ಒಡ್ಡಿದ ಆರೋಪದಡಿ ಜೆಪಿ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ 3ನೇ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯ 2021ರ ಫೆಬ್ರವರಿ 26ರಂದು ಅಶೀಷ್ ಗೆ ಮತ್ತೆ ಕೆಲಸಕ್ಕೆ ಸೇರಿಸಿಕೊಂಡು ವೇತನ ಮತ್ತು ಎಲ್ಲ ಹಿಂಬಾಕಿ ನೀಡುವಂತೆ ಸಂಸ್ಥೆಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.
(WP 8149/2021)