News

KSOU ಪದವಿ ಕಾರಣಕ್ಕೆ ಸರ್ಕಾರಿ ನೌಕರಿಗೆ ಕತ್ತರಿ: ಸೂಕ್ತ ಉದ್ಯೋಗ ಕೊಡಲು ಹೈಕೋರ್ಟ್ ಆದೇಶ

Share It

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು)ದಿಂದ ದೂರ ಶಿಕ್ಷಣದ ಮೂಲಕ ಪಡೆದ ಬಿ.ಟೆಕ್‌ ಪದವಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಅನುಮೋದನೆ ನೀಡದ ಹಿನ್ನೆಲೆಯಲ್ಲಿ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಅಸಿಸ್ಟೆಂಟ್ ಎಂಜಿನಿಯರ್‌ ನೌಕರಿ ಕಳೆದುಕೊಂಡಿದ್ದ ವ್ಯಕ್ತಿಗೆ ಮತ್ತೆ ಉದ್ಯೋಗ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ, ಅರ್ಜಿದಾರರ ಸಿವಿಲ್‌ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪರಿಗಣಿಸಿ ಮುಂದಿನ 2 ತಿಂಗಳಲ್ಲಿ ಕಿರಿಯ ಎಂಜಿನಿಯರ್‌ ಹುದ್ದೆಯ ಮರು ನೇಮಕಾತಿಗೆ ಪರಿಗಣಿಸಬೇಕು.

ಮರು ನೇಮಕಾತಿಯು ಮೂಲ ನೇಮಕಾತಿಯಿಂದ ಪೂರ್ವಾನ್ವಯವಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಮತ್ತು ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆದೇಶಿಸಿದೆ.

ಆದರೆ. ಕೆಎಸ್ಒಯು ನೀಡಿದ್ದ ಬಿಟೆಕ್‌ ಪದವಿಗೆ ಎಐಸಿಟಿಇ ಮಾನ್ಯತೆ ನೀಡದ ಹಿನ್ನೆಲೆಯಲ್ಲಿ ಮಂಡಳಿ ಏಕಾಏಕಿ ಕೆಲಸದಿಂದ ತೆಗೆದು ಹಾಕಿತ್ತು. ಉದ್ಯೋಗಕ್ಕೆ ಕುತ್ತು ಬಂದ ಹಿನ್ನೆಲೆಯಲ್ಲಿ ದೇವರಾಜು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರಿನ ಕಲ್ಯಾಣ ನಗರ ನಿವಾಸಿ ಕೆ.ಆರ್‌ ದೇವರಾಜು, 2016ರ ಜುಲೈ ತಿಂಗಳಲ್ಲಿ ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್‌ (ಸಿವಿಲ್‌) ಹುದ್ದೆಗೆ ನೇಮಕಗೊಂಡಿದ್ದರು. ಕೆಎಸ್ಒಯು ನಿಂದ ಬಿ.ಟೆಕ್‌ ಪದವಿ ಪಡೆದು ಅದರ ಆಧಾರದ ಮೇಲೆ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿ 5 ವರ್ಷ ಸೇವೆ ಸಲ್ಲಿಸಿದ್ದರು.

ಆದರೆ, 2019ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಪಡೆದಿದ್ದ ಬಿ.ಟೆಕ್‌ ಪದವಿಗೆ ಎಐಸಿಟಿಇ ಅನುಮೋದನೆ ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು 2019ರ ಸೆಪ್ಟೆಂಬರ್ 6ರಂದು ದೇವರಾಜ್‌ಗೆ ನೋಟಿಸ್‌ ಜಾರಿ ಮಾಡಿದ್ದರು.

ನೋಟಿಸಿಗೆ ಉತ್ತರಿಸಿದ್ದ ದೇವರಾಜ್‌, ತಾವು 2012-2014ನೇ ಸಾಲಿನಲ್ಲಿ ಮುಕ್ತ ವಿವಿಯಿಂದ ಬಿ.ಟೆಕ್‌ ಪದವಿ ಪ್ರಮಾಣಪತ್ರ ಪಡೆದಿದ್ದೇನೆ. ನೇಮಕಾತಿಯಲ್ಲಿ ತಮ್ಮ ಯಾವುದೇ ಲೋಪವಿಲ್ಲ ಎಂದಿದ್ದರು. ಆದರೆ, ವಿವರಣೆ ಒಪ್ಪದ ಮಂಡಳಿ 2021ರ ಜುಲೈ 13ರಂದು ನೇಮಕಾತಿ ಆದೇಶ ರದ್ದುಪಡಿಸಿ, ಸೇವೆಯಿಂದ ವಜಾ ಮಾಡಿತ್ತು. ಉದ್ಯೋಗ ಕಳೆದುಕೊಂಡ ದೇವರಾಜ್ ಮಂಡಳಿಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ವಾದ ಪ್ರತಿವಾದ: ವಿಚಾರಣೆ ವೇಳೆ ಅರ್ಜಿದಾರ ದೇವರಾಜು ಪರ ವಕೀಲರು ವಾದ ಮಂಡಿಸಿ, ಯುಜಿಸಿ 2015ರ ಜೂನ್ 16ರಂದು ಹೊರಡಿಸಿರುವ ಪ್ರಕಟಣೆಯಂತೆ ಕೆಎಸ್ಒಯು 2012-13ನೇ ಸಾಲಿನವರೆಗೆ ನೀಡಿರುವ ಪದವಿ ಪ್ರಮಾಣ ಪತ್ರಗಳು ಮಾನ್ಯತೆ ಹೊಂದಿಲ್ಲದಿರಬಹುದು.

ಆದರೆ, ವಿವಿ ನೀಡಿರುವ ಪದವಿ ಪ್ರಮಾಣ ಪತ್ರಗಳಿಗೆ ಸರ್ಕಾರ ಮಾನ್ಯತೆ ನೀಡಿದೆ. ಹಾಗೆಯೇ, ದೇವರಾಜ್‌ ಸಹಾಯಕ ಎಂಜಿನಿಯರ್‌ ಆಗಿ 5 ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ಅವರು ಪಡೆದಿರುವ ಸಿವಿಲ್‌ ಎಂಜಿನಿಯರಿಂಗ್ ಡಿಪ್ಲೊಮಾಗೆ ಮಾನ್ಯತೆ ಇದ್ದು. ಅದನ್ನು ಪರಿಗಣಿಸಿ ದೇವರಾಜ್‌ ಗೆ ಕಿರಿಯ ಎಂಜಿನಿಯರ್‌ ಹುದ್ದೆ ನೀಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು.

ಅರ್ಜಿದಾರರ ವಾದವನ್ನು ಆಕ್ಷೇಪಿಸಿದ್ದ ಯುಜಿಸಿ, ಎಐಸಿಟಿಇ ಮತ್ತು ಮಂಡಳಿ ಪರ ವಕೀಲರು, ದೂರ ಶಿಕ್ಷಣದ ಮೂಲಕ ತಾಂತ್ರಿಕ ವಿಷಯಗಳಲ್ಲಿ ಪಡೆದಿರುವ ಪದವಿಗಳಿಗೆ ಮಾನ್ಯತೆ ಇಲ್ಲ. ಹಾಗೆಯೇ, ಸಿವಿಲ್‌ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪರಿಗಣಿಸಿ ಸಹಾಯಕ ಎಂಜಿನಿಯರ್‌ ಹುದ್ದೆ ಪಡೆಯಲು ಅರ್ಹರಿಲ್ಲ ಎಂದು ವಾದಿಸಿದ್ದರು.


Share It

You cannot copy content of this page