ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಆರೋಪಿ ಪ್ರಜ್ವಲ್ ರೇವಣ್ಣ ಸಂತ್ರಸ್ತೆಯರ ವಿವರ ಕೇಳಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಂತ್ರಸ್ತೆಯರ ಗುರುತು ಬಹಿರಂಗಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ.
ಪ್ರಜ್ವಲ್ ಕಾರು ಚಾಲಕನ ಸ್ಯಾಮ್ಸಂಗ್ ಫೋನ್ನಿಂದ ಪಡೆದಿರುವ ಫೋಟೊ ಮತ್ತು ಎಲ್ಲಾ ವಿಡಿಯೊಗಳನ್ನು ಒದಗಿಸಲು ಪ್ರಾಸಿಕ್ಯೂಷನ್ಗೆ ನಿರ್ದೇಶಿಸಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ ಸಂತ್ರಸ್ತೆಯರ ಗುರುತು ಬಹಿರಂಗಕ್ಕೆ ಅವಕಾಶವಿಲ್ಲ ಎಂದಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ವಿಚಾರಣಾ ನ್ಯಾಯಾಲಯದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ತನ್ನ ಕಾರು ಚಾಲಕನಿಂದ ಜಫ್ತಿ ಮಾಡಿರುವ ಸ್ಯಾಮ್ಸಂಗ್ ಮೊಬೈಲ್ನಿಂದ ಪಡೆದಿರುವ ಎಲ್ಲಾ ಫೋಟೊ ಮತ್ತು ವಿಡಿಯೊಗಳನ್ನು ಒದಗಿಸಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕರು, ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯವನ್ನು ಪ್ರಜ್ವಲ್ಗೆ ಪೆನ್ಡ್ರೈವ್ ಮೂಲಕ ಒದಗಿಸಲಾಗಿದೆ. ಕಾರು ಚಾಲಕನ ಮೊಬೈಲ್ ಫೋನ್ನಲ್ಲಿ ಪಡೆದಿರುವ ಎಲ್ಲಾ 2,000 ವಿಡಿಯೋ ಮತ್ತು 15,000 ಫೋಟೊಗಳನ್ನು ಅವರಿಗೆ ಒದಗಿಸಲಾಗದು. ಏಕೆಂದರೆ ಅಲ್ಲಿ ಹಲವು ಮಹಿಳೆಯರ ಖಾಸಗಿತನಕ್ಕೆ ಸಮಸ್ಯೆಯಾಗುತ್ತದೆ. ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ ಪ್ರಜ್ವಲ್ ಇಂತಹ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದರು.
ವಾದ ಆಲಿಸಿದ ನ್ಯಾಯಪೀಠ, ಸಂತ್ರಸ್ತರ ಗುರುತು ಬಹಿರಂಗವಾಗುವುದಕ್ಕೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ. ನೀವು ಕೇಳುತ್ತಿರುವ ದಾಖಲೆ ಸಾವಿರಾರು ಪುಟಗಳಿವೆ ಎಂದು ಪ್ರಾಸಿಕ್ಯೂಷನ್ ಹೇಳುತ್ತಿದೆ. ಅದರ ಅವಶ್ಯಕತೆ ನಿಮಗೆ ಏನಿದೆ? ಎಂದು ಪ್ರಶ್ನಿಸಿತು. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ಪಿಸಿ ಸೆಕ್ಷನ್ 207ರ ಅಡಿ ಏನೆಲ್ಲಾ ಒದಗಿಸಬಹುದು ಆ ಸಾಕ್ಷಿಗಳನ್ನು ನೀಡಬೇಕು. ಇತರೆ ಸಂತ್ರಸ್ತರ ಗುರುತು ಬಹಿರಂಗವಾಗುವುದಕ್ಕೆ ಮತ್ತು ಅವರ ಬದುಕಿಗೆ ಎರವಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದಿತು.
ಅಲ್ಲದೇ, ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ದ ವಿಚಾರಣಾ ನ್ಯಾಯಾಲಯವು ಆರೋಪ ನಿಗದಿಗೂ ಮುಂಚಿನ ವಾದ ಪ್ರತಿವಾದವನ್ನು ಆಲಿಸಬಹುದು. ಆದರೆ, ಹೈಕೋರ್ಟ್ ನ ಮುಂದಿನ ವಿಚಾರಣೆವರೆಗೂ ಆರೋಪ ನಿಗದಿ ಮಾಡಬಾರದು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಜನವರಿ 16 ಕ್ಕೆ ಮುಂದೂಡಿತು.