ಅರಣ್ಯ ಒತ್ತುವರಿ ಆರೋಪಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಮ್ಮುಖದಲ್ಲಿ, ಜಿಲ್ಲಾಧಿಕಾರಿ ಎಂ.ಆರ್ ರವಿ ನೇತೃತ್ವದಲ್ಲಿ ಸರ್ವೇ ಕಾರ್ಯ ಆರಂಭ.

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಒತ್ತುವರಿ ಆದಂತಂಹ ಪ್ರದೇಶವನ್ನ ಜಂಟಿ ಸರ್ವೇ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್ ರವಿ ನೇತೃತ್ವದಲ್ಲಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಮ್ಮುಖದಲ್ಲೇ ಜಂಟಿ ಸರ್ವೇ ಪ್ರಾರಂಭ ಆಗಿದೆ. ಸರ್ವೇ ಕಾರ್ಯ ಸಂಪೂರ್ಣ ತಾಂತ್ರಿಕತೆಯಿಂದ ಕೂಡಿದ್ದು, ಮೊದಲಿಗೆ ಗ್ರಾಮದ ಗಡಿ ನಂತರ ಅರಣ್ಯ ಭೂಮಿ ಸರ್ವೇ ನಡೆಸಲಾಗುತ್ತಿದೆ.
ಕೋಲಾರ ಜಿಲ್ಲೆಯ, ಶ್ರೀನಿವಾಸಪುರ ತಾಲೂಕಿನ, ಹೊಸಹುಡ್ಯ ಗ್ರಾಮದ, ಜಿನಕಲುಕುಂಟ ಅರಣ್ಯ ಪ್ರದೇಶದಲ್ಲಿ ಸರ್ವೇ ನಂ 1 ಮತ್ತು 2 ರಲ್ಲಿನ ಒಟ್ಟು 61.39 ಎಕರೆ ಅರಣ್ಯ ಭೂಮಿಯ ಸರ್ವೇ ಕೆಲಸ ನಡೆಯುತ್ತಿದೆ. ಸರ್ವೇ ಕೆಲಸ ನಡೆಯುತ್ತಿರುವ ಜಾಗದಲ್ಲಿ ರಮೇಶ್ ಕುಮಾರ್ ಅವರು ಉಪಸ್ಥಿತರಿದ್ದು, 2002 ರಲ್ಲಿ ನಾನೇ ಜಂಟಿ ಸರ್ವೇ ಮಾಡಿ ಜಾಗ ಗುರುತಿಸಿಕೊಡಿ ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದೆ. ನನಗೆ ಒಂದು ಇಂಚು ಸಹ ಅರಣ್ಯ ಭೂಮಿ ಬೇಡ. ಜಿಲ್ಲಾಧಿಕಾರಿಗಳೇ ಸರ್ವೇ ನಡೆಸಿ ಜಾಗ ಗುರುತಿಸಲಿ, ಸರ್ವೇ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ನಾಲ್ಕು ತಂಡಗಳಾಗಿ ಸರ್ವೇ ಕೆಲಸ ನಡೆಯುತ್ತಿದೆ. ರೋವರ್ ಇನ್ಸ್ಟ್ರುಮೆಂಟ್ಸ್ ಮೂಲಕ ಗಡಿಗಳನ್ನ ಗುರುತಿಸಲಾಗುತ್ತಿದೆ. ಅಷ್ಟೇ ಅಲ್ಲದೇ ರೀಡಿಂಗ್ ಪಡೆದುಕೊಂಡ ನಂತರ ಉಳಿದ ನಿರ್ಧಾರ ತೆಗೆದುಕೊಳ್ಳಲಾಗುವುದು. ಗಡಿ ಗುರುತಿಸಿದ ನಂತರ ಅರಣ್ಯ ಭೂಮಿ ಒತ್ತುವರಿ ಆಗಿದ್ಯಾ ಎಂಬ ಮಾಹಿತಿ ಸಿಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ ತಿಳಿಸಿದ್ದಾರೆ.