News

ಮತಾಂತರಕ್ಕೆ ಪ್ರೇರೇಪಣೆ ನೀಡಿದ ಆರೋಪ: ಕೇಸ್ ರದ್ದುಗೊಳಿಸಿದ ಹೈಕೋರ್ಟ್

Share It

ಬೆಂಗಳೂರು: ಮತಾಂತರಕ್ಕೆ ಪ್ರೇರೇಪಣೆ ನೀಡಿದ ಆರೋಪದಡಿ ಹುಸೇನ್ ಬಾಷ್ ನಬೀಸಾಬ್ ಮತ್ತು ಸಾಯಿಬಾಬ ರಾಜಾಸಾಬ್ ಎಂಬಿಬ್ಬರು ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರವಾದಿ ಮಹಮ್ಮದ್ ಹಾಗೂ ಕುರಾನ್ ಬಗ್ಗೆ ಹೇಳುತ್ತಾ ಮತಾಂತರಕ್ಕೆ ಪ್ರೇರೇಪಿಸಿದ ಆರೋಪದಡಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಳ್ಳಾರಿಯ ಸಿರುಗುಪ್ಪದ ತಕ್ಕಲಕೋಟ ನಿವಾಸಿಗಳಾದ ಹುಸೇನ್ ಬಾಷ್ ನಬೀಸಾಬ್ ಮತ್ತು ಸಾಯಿಬಾಬ ರಾಜಾಸಾಬ್ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ 2022 ಸೆಕ್ಷನ್ 3ರ ಪ್ರಕಾರ ಬಲವಂತ, ವಂಚನೆ, ಅನಗತ್ಯ ಪ್ರಭಾವ, ಆಮಿಷ ಮತ್ತು ಮದುವೆಯಾಗುವುದಾಗಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಈ ವಿಧಾನಗಳ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಿಸುವುದಕ್ಕೆ ಯತ್ನಿಸುವಂತಿಲ್ಲ ಎಂದು ತಿಳಿಸಲಾಗಿದೆ. ಜೊತೆಗೆ ಸೆಕ್ಷನ್ 4ರ ಪ್ರಕಾರ ಈ ರೀತಿಯಲ್ಲಿ ಮತಾಂತರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಪೋಷಕರು, ಒಡಹುಟ್ಟಿದವರು ಹಾಗೂ ಸಂಬಂಧಿಕರು ಮಾತ್ರ ದೂರು ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.

ಆದರೆ, ಈ ಪ್ರಕರಣದಲ್ಲಿ ಕಾಯ್ದೆಯಲ್ಲಿ ತಿಳಿಸಿರುವಂತೆ ಸಂಬಂಧಿಕರಲ್ಲದೇ ಮೂರನೇ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಜತೆಗೆ, ದೂರಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯನ್ನು ಮತ್ತೊಂದು ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಇಲ್ಲವಾಗಿವೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿ ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ. ಅರ್ಜಿದಾರರ ಪರವಾಗಿ ವಕೀಲರಾದ ಅನ್ವರ್ ಅಲಿ ನದಾಫ್ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: 2024ನೇ ಜುಲೈ 17ರಂದು ಕೇಸರಿ ಧ್ವಜಗಳನ್ನು ಹಿಡಿದು ಬಳ್ಳಾರಿ ಕಡೆಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿರುವವರನ್ನು ಆರೋಪಿತರು ಮಾತನಾಡಿಸಿದ್ದರು. ಈ ವೇಳೆ ಕುರಾನ್ ಪ್ರತಿಗಳನ್ನು ನೀಡಿ, ನಿಮಗೆ ಲಾಭ ನಷ್ಟ ಇರುವುದು ಏಕ ದೇವ ಆರಾಧಿಸಿದಲ್ಲಿ ಮಾತ್ರ ಸಾಧ್ಯ. ಬಸವಣ್ಣವರೂ ಇದನ್ನೇ ಹೇಳಿದ್ದಾರೆ. ಮಹಮ್ಮದ್ ಪೈಗಂಬರ್ ಸಹ ಅದನ್ನೇ ತಿಳಿಸಿದ್ದಾರೆ. ಖುರಾನ್ ಕೇವಲ ಮುಸ್ಲಿಮರಿಗೆ ಮಾತ್ರವಲ್ಲಿ ಇಡೀ ಮಾನವರಿಗೆ ಸಂದೇಶ ನೀಡಿದೆ. ಕುರಾನ್ 1,450 ವರ್ಷ ಹಳೆಯದಾದರೂ ಮೂಲ ಭಾಷೆಯಿಂದ ಒಂದು ಪದವನ್ನೂ ಬದಲಾವಣೆ ಮಾಡಿಲ್ಲ. ಕುರಾನ್ ಅಧ್ಯಯನ ಮಾಡಿದಾಗ ಜೀವನದ ಮಾರ್ಗದರ್ಶನ ಸಿಗಲಿದೆ. ಇಹಲೋಕ ಮತ್ತು ಪರಲೋಕದಲ್ಲಿ ನೆಮ್ಮದಿ ಮತ್ತು ಸ್ವರ್ಗ ಸಿಗಲಿದೆ ಎಂದು ತಿಳಿಸುವ ಮೂಲಕ ಮತಾತಂತರಕ್ಕೆ ಪ್ರೇರೇಪಿಸಿದ್ದರು ಎಂದು ಗಡಿಲಿಂಗಪ್ಪ ಎಂಬುವರು ತಿಕ್ಕಲಕೋಟ ಠಾಣೆಗೆ ದೂರು ದಾಖಲಿಸಿದ್ದರು. ಈ ಕೇಸ್ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


Share It

You cannot copy content of this page