ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿತನಾಗಿದ್ದ ವ್ಯಕ್ತಿ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆತನಿಗೆ ನೀಡಿದ್ದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ.
ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಬಂಧಿತನಾಗಿದ್ದ ನೈಜೀರಿಯಾ ಮೂಲದ ಯಾಕೂಬ್ ಉಸ್ಮಾನ್ ಎಂಬಾತನಿಗೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು. ಈ ಷರತ್ತುಗಳನ್ನು ಆರೋಪಿ ಉಲ್ಲಂಘಿಸಿದ್ದ.
ನ್ಯಾಯಾಲಯದ ಸಮನ್ಸ್ ಮತ್ತು ವಾರೆಂಟ್ ಜಾರಿಯಲ್ಲಿದ್ದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಯಾಕೂಬ್ ಉಸ್ಮಾನ್ಗೆ ಮಂಜೂರಾಗಿದ್ದ ಜಾಮೀನು ರದ್ದು ಪಡಿಸುವಂತೆ ಕೋರಿ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಅಧಿಕಾರಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಒಮ್ಮೆ ಮಂಜೂರಾದ ಜಾಮೀನನ್ನು ಬಲವಾದ ಕಾರಣಗಳಿದ್ದರೆ ಮಾತ್ರ ರದ್ದು ಮಾಡಬಹುದು. ಈ ಪ್ರಕರಣ ಅತ್ಯಂತ ಅಪರೂಪದ್ದಾಗಿದೆ. ಆರೋಪಿಗೆ ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ, ಆರೋಪಿ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ್ದಾನೆ.
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಪ್ರಕರಣ ವಿಳಂಬವಾಗಲು ಕಾರಣವಾಗಿದ್ದಾನೆ. ಮತ್ತದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ಆರೋಪಿಯ ಜಾಮೀನು ರದ್ದು ಪಡಿಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೇ ಆರೋಪಿಗೆ ನೀಡಿದ್ದ ಜಾಮೀನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2017ರ ಮಾರ್ಚ್ 27ರಂದು ಆರೋಪಿ ಯಾಕೂಬ್ ಉಸ್ಮಾನ್ ಮಾದಕ ವಸ್ತುಗಳಾದ ಮೆಂಥಾಪೆಟಮೈನ್, ಹ್ಯಾಶಿಸ್ ಎಣ್ಣೆ, ಗಾಂಜಾ ಮತ್ತು ಎಲ್ಎಸ್ಡಿ ಪೇಪರ್ ಬ್ಲಾಟ್ ಸಹಿತ ಸಿಕ್ಕಿಬಿದ್ದಿದ್ದ.
ಈ ಪ್ರಕರಣದಲ್ಲಿ ಜಾಮೀನು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್, 2017ರ ಏಪ್ರಿಲ್ 15ರಂದು ಸಾಕ್ಷ್ಯ ನಾಶಪಡಿಸಬಾರದು, ತಲೆ ಮರೆಸಿಕೊಳ್ಳಬಾರು, ವಿಚಾರಣೆಗೆ ಹಾಜರಾಗಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು.
ವಿಚಾರಣಾ ನ್ಯಾಯಾಲಯದ ಷರತ್ತುಗಳನ್ನು ಗಾಳಿಗೆ ತೂರಿದ್ದ ಆರೋಪಿ ಕಳೆದ 5 ವರ್ಷಗಳ ಕಾಲ ವಿಚಾರಣೆಗೆ ಹಾಜರಾಗಿರಲಿಲ್ಲ. ಪೊಲೀಸರಿಗೆ ಪತ್ತೆ ಹಚ್ಚುವುದಕ್ಕೂ ಸಾಧ್ಯವಾಗಿರಲಿಲ್ಲ.