News

ಸಮೂಹ ಸಾರಿಗೆ, ನೀರಿನ ದರ ಹೆಚ್ಚಳದ ನಂತರ ರಾಜ್ಯಾದ ಜನತೆಗೆ ಹೊಡೆಯಲಿದೆ ವಿದ್ಯುತ್ ದರ ಹೆಚ್ಚಳದ ಕರೆಂಟ್ ಶಾಕ್

Share It

ಬೆಂಗಳೂರು: ನೀರಿನ ದರ, ಸಾರಿಗೆ ಬಸ್‌ಗಳ ಮತ್ತು ಮೆಟ್ರೋ ಟಿಕೆಟ್ ದರ ಹೆಚ್ಚಳದಿಂದ ಬಳಲಿರುವ ರಾಜ್ಯದ ಜನತೆಗೆ ವಿದ್ಯುತ್ ದರ ಹೆಚ್ಚಳದ ಮೂಲಕ ಮತ್ತೂಂದು ಬರೆ ಬೀಳಲಿದೆ.

ಈ ನಿಟ್ಟಿನಲ್ಲಿ ಕೆಇಆರ್‌ಸಿಗೆ ಬೆಸ್ಕಾಂ ಪ್ರಸ್ತಾವನೆಯನ್ನು ನೀಡಿದ್ದು, ಮುಂದಿನ ಮೂರು ವರ್ಷಗಳಿಗೆ ವಿದ್ಯುತ್ ದರ ಏರಿಕೆ ಮಾಡಲು ಮನವಿ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನರಿಗೆ ನೀರಿನ ಜತೆಗೆ ವಿದ್ಯುತ್ ಬಿಲ್ ಹೆಚ್ಚಳದಿಂದ ಜೇಬಿಗೆ ಕತ್ತರಿ ಬೀಳುವುದು ಖಾತ್ರಿಯಾದಂತಾಗಿದೆ.

ಕೆಇಆರ್‌ಸಿಗೆ ವಿದ್ಯುತ್ ಪೂರೈಕೆ ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಚೆಸ್ಕಾಂ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರವನ್ನು ಪರಿಷ್ಕರಣೆಗೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು, ಇದರಲ್ಲಿ ವಿದ್ಯುತ್ ಖರೀದಿಗೆ ತಗಲುವ ವೆಚ್ಚ ಹಾಗೂ ಪೂರೈಕೆ, ಕಲ್ಲಿದ್ದಲು ಸಂಗ್ರಹಣೆಗೆ ತಗಲುವ ವೆಚ್ಚ ಸೇರಿದಂತೆ ಇತರೆ ಖರ್ಚುಗಳು ಹೆಚ್ಚಾಗಿ ಆರ್ಥಿಕ ಒತ್ತಡವನ್ನು ಉಲ್ಬಣಗೊಳಿಸಿವೆ ಎಂದು ಮನವಿ ಮಾಡಿವೆ. ಈ ಹಿನ್ನಲೆಯಲ್ಲಿ ಪ್ರತಿ ಯುನಿಟ್‌ಗೆ 1.50 ರೂಪಾಯಿ ದರ ಏರಿಕೆ ಮಾಡುವಂತೆ ಬೆಸ್ಕಾಂ ಮನವಿ ಮಾಡಿದ್ದು, ಇತರೆ ಸರಬರಾಜು ಕಂಪನಿಗಳು ಪ್ರತಿ ಯುನಿಟ್‌ಗೆ 1.2 ರೂ ಹೆಚ್ಚಳ ಮಾಡುವಂತೆ ಕೋರಿವೆ. ಪ್ರಸ್ತಾವನೆಯಲ್ಲಿ ಪ್ರತಿ ಯುನಿಟ್‌ಗೆ ಮೊದಲ ವರ್ಷ ಅಂದರೆ, 2025-26ಕ್ಕೆೆ 67 ಪೈಸೆ, 2ನೇ ವರ್ಷ 2024 -27ಕ್ಕೆೆ ಯುನಿಟ್ 74 ಪೈಸೆ ಹಾಗೂ ಮೂರನೇ ವರ್ಷವಾದ 2027-28ಕ್ಕೆೆ 91 ಪೈಸೆ ಹೆಚ್ಚಳ ಮಾಡಲು ಮನವಿ ಸಲ್ಲಿಸಿವೆ.

ಒಂದು ವೇಳೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ಸೂಚಿಸಿದರೆ ಮಾರ್ಚ್ ತಿಂಗಳಿನಿಂದಲೇ ದರ ಏರಿಕೆಯಾಗಲಿದೆ. ಬಹು ವಾರ್ಷಿಕ ದರ ವಿಧಾನ ಅಳವಡಿಸಿಕೊಂಡ ನಂತರ ಮೊದಲ ಬಾರಿಗೆ ಪರಿಷ್ಕರಣೆ ಇದಾಗಿರಲಿದೆ. ಪ್ರಕ್ರಿಯೆಯ ಭಾಗವಾಗಿ ಈಗಾಗಲೇ ಸಾರ್ವಜನಿಕ ಸಮಾಲೋಚನೆಗಳನ್ನು ನಡೆಸಲಾಗಿದ್ದು, ಆಯೋಗವು ತನ್ನ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.

ಯಾವಾಗ ಆದೇಶ ಸಾಧ್ಯತೆ?

ದರ ಏರಿಕೆ ಸಂಬಂಧ ನಿಯಂತ್ರಣ ಆಯೋಗ ಉದ್ಯಮಿಗಳು, ವ್ಯಾಪಾರಸ್ಥರು, ಸಾರ್ವಜನಿಕರು, ತಜ್ಞರ ಸಭೆ ನಡೆಸಿ ಅಹವಾಲು ಸ್ವೀಕಾರ ಮಾಡಲಿದ್ದು, ಪರ ವಿರೋಧಗಳನ್ನು ಆಲಿಸಲಿದೆ. ಆ ಬಳಿಕ ಮಾರ್ಚ್ ನಲ್ಲಿ ದರ ಏರಿಕೆಯ ಬಗ್ಗೆೆ ಅಂತಿಮ ಆದೇಶ ಬರಲಿದೆ. ಮಾರ್ಚ್ 1ರಿಂದ ನೂತನ ದರ ಜಾರಿಯಾಗುವ ಸಾಧ್ಯತೆಗಳಿದೆ.


Share It

You cannot copy content of this page