ಬೆಂಗಳೂರು: ನ್ಯಾಯಾಂಗ ಅಪರಾಧವನ್ನು ದ್ವೇಷಿಸುತ್ತದೆಯೇ ಹೊರತು ಅಪರಾಧಿಯನ್ನಲ್ಲ ಎನ್ನುವುದನ್ನು ವಿಚಾರಣಾ ನ್ಯಾಯಾಲಯಗಳು ನೆನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆಸ್ತಿ ವಿಚಾರವಾಗಿ 2018 ರ ಏಪ್ರಿಲ್ ತಿಂಗಳಿನಲ್ಲಿ ಆರೋಪಿತರ ಗುಂಪು ಮತ್ತು ದೂರುದಾರರು ಒಬ್ಬರ ಮೇಲೆ ಒಬ್ಬರು ಹಲ್ಲೆಯನ್ನು ನೆಡೆಸಿದ್ದರು. ಮುಖ್ಯವಾಗಿ ದೂರುದಾರೆಯ ಬೆನ್ನು ಮತ್ತು ಕೈ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿತ್ತು. ಹಲ್ಲೆಗೊಳಗಾದ ಮಹಿಳೆ ಚನ್ನರಾಯಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿಗೆ ಸ್ಥಳೀಯ ಪೊಲೀಸರು ಭೇಟಿ ನೀಡಿ ತನಿಖೆ ನೆಡೆಸಿ ಆರೋಪಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯ 9 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆಯನ್ನು ಪ್ರಕಟಿಸಿತ್ತು. ಇದನ್ನು ಆರೋಪಿತರು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕಾರಣದ ಕುರಿತು ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಎಲ್ಲ ಅಪರಾಧಿಗಳಿಗೂ ಭವಿಷ್ಯವಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿ ಇದೊಂದು ಕ್ಷಣಾರ್ಧದಲ್ಲಿ ನೆಡೆದಿರುವ ಘಟನೆಯಾಗಿರುವುದರಿಂದ ಕಾರಾಗೃಹವಾಸದ ಅಗತ್ಯವಿಲ್ಲ ಎಂದು ಅದೇಶವನ್ನು ಮಾರ್ಪಡಿಸಿ ದಂಡವನ್ನು ಮಾತ್ರ ವಿಧಿಸಿದೆ.
ಆರೋಪಿಗಳು ಮತ್ತು ದೂರುದಾರರ ನಡುವೆ ಸಿವಿಲ್ ವ್ಯಾಜ್ಯವಿದೆ. ಎರಡು ಗುಂಪುಗಳ ನಡುವೆ ಜಗಳಗಳು ಸಾಮಾನ್ಯವಾಗಿ ನಡೆದಿವೆ. ಮೊದಲು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಹೀಗಾಗಿ ಕ್ರಿಮಿನಲ್ ಪೂರ್ವಾಪರದ ಅನುಪಸ್ಥಿತಿ ಎದ್ದು ಕಾಣುತ್ತಿದ್ದೆ. ಹೀಗಾಗಿ 1958 ರ ಅಪರಾಧಿಗಳ ಪರಿವೀಕ್ಷಣಾ ಕಾಯ್ದೆಯಡಿಯಲ್ಲಿ ಈ ಪ್ರಕರಣ ಬರುತ್ತದೆ. ವಿಚಾರಣಾ ನ್ಯಾಯಾಲಯ ಕೂಡ ಕಾಯ್ದೆಯನ್ನು ಏಕೆ ನಿರಾಕರಿಸಬೇಕು ಎನ್ನುವುದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ ಹೀಗಾಗಿ ಆರೋಪಿತರನ್ನು ಶಿಕ್ಷೆಯಿಂದ ವಿಮುಕ್ತಗೊಳಿಸಿ ಕೇವಲ ದಂಡವನ್ನು ಮಾತ್ರ ವಿಧಿಸಲಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.