ಬೆಂಗಳೂರು: ಕರ್ನಾಟಕದ ಕ್ರೀಡಾ ವಿಜ್ಞಾನ ಮತ್ತು ಪ್ರತಿಭೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಚಿಕ್ಕ ವಯಸ್ಸಿನಿಂದಲೇ ಕ್ರೀಡಾ ಪಟುಗಳನ್ನು ಗುರುತಿಸಿ ಮತ್ತು ಪೋಷಿಸುವುದರಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರಾಂತಿಯನ್ನು ಉಂಟು ಮಾಡುತ್ತಿದೆ.
ಇಲಾಖೆಯು ನವೀನ ಉಪಕ್ರಮಗಳ ಮೂಲಕ ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯವಿರುವ ವಿಶ್ವ ದರ್ಜೆಯ ಕ್ರೀಡಾ ಪಟುಗಳನ್ನು ಸಜ್ಜಾಗಿದ್ದು, ಇದಕ್ಕೆ ಸರ್ಕಾರದ ಬೆಂಬಲವು ಸಹ ಅಗಾಧವಾಗಿ ದೊರೆಯುತ್ತಿದೆ. ವೈಜ್ಞಾನಿಕ ವಿಧಾನಗಳನ್ನು ಸಂಯೋಜಿಸಿ, ತಳಮಟ್ಟದ ಪ್ರತಿಭೆಗಳನ್ನು ಬೆಳೆಸುವುದರ ಜೊತೆಗೆ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸುಸ್ಥಿರ, ಸ್ಪರ್ಧಾತ್ಮಕ ಕ್ರೀಡಾ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ.
ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ಹಲವಾರು ಯೋಜನೆಗಳು:
ಬೆಂಗಳೂರು ನಗರ ಪ್ರದೇಶದಲ್ಲಿನ ಪ್ರತಿಭೆಗಳ ಗುರಿತಿಸುವ ಸಲುವಾಗಿ ಕ್ರೀಡಾ ವಿಜ್ಞಾನ- ಸೆಂಟರ್ ಫಾರ್ ಸ್ಪೋರ್ಟ್ಸ್, ಬೆಂಗಳೂರು ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಪ್ರಾಜೆಕ್ಟ್ ಒನ್– ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ಕ್ರೀಡಾ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ಕ್ರೀಡೆ ಮತ್ತು ಶಿಕ್ಷಣ ಇಲಾಖೆಗಳ ನಡುವಿನ ಸಮನ್ವಯದೊಂದಿಗೆ, ಪ್ರಾಥಮಿಕ ಶಿಕ್ಷಣ ಇಲಾಖೆಗಳಲ್ಲಿ ಸುಮಾರು 7500 ದೈಹಿಕ ಶಿಕ್ಷಣ ಶಿಕ್ಷಕರಿಗೆ ಕೌಶಲ್ಯವನ್ನು ಹೆಚ್ಚಿಸಲಾಗುತ್ತಿದೆ. ಸಿದ್ದಿ ಬುಡಕಟ್ಟು ಕ್ರೀಡಾ ಪ್ರತಿಭೆಗಳನ್ನು ಸಹ ಗುರುತಿಸಲಾಗುತ್ತಿದೆ. ಈ ಯೋಜನೆಯಡಿ ಆಯ್ಕೆಯಾದ ಕ್ರೀಡಾ ಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಸೂಕ್ತವಾದ ತರಬೇತಿ ನೀಡಲಾಗಿದ್ದು, ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಯುವ ಸ್ಪಂದನ ಯೋಜನೆ:
ಯುವ ಸ್ಪಂದನ– ಯೋಜನೆಯು, ಯುವಜನರ ಮಾನಸಿಕ ಆರೋಗ್ಯ ಉತ್ತೇಜನ ಕಾರ್ಯಕ್ರಮದ ಮೊದಲ ಉಪಕ್ರಮವಾಗಿದೆ. ಈ ಯೋಜನೆಯಡಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ತರಬೇತಿ ಪಡೆದ ಯುವಕರಿಂದ ಮಾರ್ಗದರ್ಶನ ಮತ್ತು ಸಮಾಲೋಚನೆಗಳ ಸೇವೆಯನ್ನು ಒದಗಿಸಲಾಗುತ್ತದೆ. ಸಾಮಾನ್ಯ ಜಾಗೃತಿ ಮೂಡಿಸಲು, ಆರೋಗ್ಯ, ಜೀವನ ಶೈಲಿ, ಸಂಬಂಧ, ಶಿಕ್ಷಣ, ಸುರಕ್ಷತೆ, ವ್ಯಕ್ತಿತ್ವ ವಿಕಸನ ಮುಂತಾದ ಯುವ ವಿಷಯಗಳ ಬಗ್ಗೆ ಮಾರ್ಗದರ್ಶನ ಮತ್ತು ಸಮಾಲೋಚನೆಗಳನ್ನು ನೀಡಲಾಗುತ್ತಿದೆ. ಈ ಮೊದಲು ರಾಜ್ಯದಲ್ಲಿ ಇಂತಹ ಯಾವುದೇ ಕಾರ್ಯಕ್ರಮಗಳು ಇರಲಿಲ್ಲ. ಈ ಯೋಜನೆಯ ಅನುಷ್ಠಾನದ ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದ ಸಾವಿರಾರು ಯುವಕರಿಗೆ ಮಾರ್ಗದರ್ಶನ ಮತ್ತು ಸಮಾಲೋಚನೆ ನೀಡಲಾಗಿದೆ. ಸದ್ಯಕ್ಕೆ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದಾದ ಸುಮಾರು 30 ಸಾವಿರಕ್ಕೂ ಹೆಚ್ಚು ಯುವಕರಿಗೆ ಮಾರ್ಗದರ್ಶನ ನೀಡಲಾಗಿದೆ. 8 ಮಿಲಿಯನ್ ಯುವಕರಿಗೆ ಸಾಮಾನ್ಯ ಜಾಗೃತಿ ನೀಡಲಾಗಿದೆ. 40 ಸಾವಿರಕ್ಕೂ ಹೆಚ್ಚು ಯುವಕರಿಗೆ ಮಾರ್ಗದರ್ಶನ ಸೇವೆಗಳನ್ನು ಒದಗಿಸಲಾಗಿದೆ. ಈ ಸೇವೆಗಳನ್ನು ಒದಗಿಸುವ ಸಲುವಾಗಿ 10 ಸಾವಿರಕ್ಕೂ ಹೆಚ್ಚು ವೈಯಕ್ತಿಕ ಮತ್ತು ಸಂಸ್ಥೆಗಳನ್ನು ಮ್ಯಾಪ್ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪ್ರತಿಯೊಂದು ಚಟುವಟಿಕೆಯನ್ನು ಗಣಕೀಕೃತ ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು ಬಳಸಿಕೊಂಡು ನೈಜ ಸಮಯದಲ್ಲಿ ದಾಖಲಿಸುತ್ತಿದೆ.
ಮುಂದಿನ ದಿನಗಳಲ್ಲಿ ಕರ್ನಾಟಕದ ಪ್ರತಿ ತಾಲ್ಲೂಕಿನಲ್ಲೂ ಯುವ ಸ್ಪಂದನ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ನಿಮ್ಹಾನ್ಸ್ ಕಾರ್ಯಕ್ರಮಗಳನ್ನು ಪರಿಶೀಲಿಸುವ ಸ್ಥಾಯಿ ಸಂಸದೀಯ ಸಮಿತಿಯು ಯುವ ಸ್ಪಂದನ ಕಾರ್ಯಕ್ರಮಗಳನ್ನು ಭಾರತದ ಪ್ರತಿಯೊಂದು ರಾಜ್ಯದಲ್ಲೂ ವಿಸ್ತರಿಸಲು ಶಿಫಾರಸ್ಸು ಮಾಡಿದೆ.
ಕ್ರೀಡಾ ವಿಜ್ಞಾನ ಸಂಯೋಜನೆ:
ಕ್ರೀಡಾಪಟುಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕ್ರೀಡಾ ವಿಜ್ಞಾನವನ್ನು ಸಂಯೋಜಿಸಿದ ರಾಷ್ಟ್ರದ ಆರಂಭಿಕ ರಾಜ್ಯಗಳಲ್ಲಿ ಕರ್ನಾಟಕ ಸಹ ಒಂದಾಗಿದೆ. ಈ ಮೂಲಕ ಕರ್ನಾಟಕ ಕ್ರೀಡಾ ಅಭಿವೃದ್ಧಿಗೆ ಪ್ರಗತಿಪರ ವಿಧಾನವನ್ನು ನಿರಂತರವಾಗಿ ಪ್ರದರ್ಶಿಸಲಾಗುತ್ತಿದೆ. ಕ್ರೀಡಾ ಗಾಯ ನಿರ್ವಹಣೆ, ಕಾರ್ಯಕ್ಷಮತೆ ವರ್ಧನೆ, ಪೋಷಣೆ ಮತ್ತು ಕ್ರೀಡಾ ಮನೋವಿಜ್ಞಾನದಂತಹ ವೈಜ್ಞಾನಿಕ ವಿಧಾನದ ವಿವಿಧ ಅಂಶಗಳನ್ನು ಅಳವಡಿಸಿಕೊಳ್ಳಲು ಇದನ್ನು ವಿಸ್ತರಿಸಲಾಗಿದೆ. ಈ ಪ್ರಯತ್ನಗಳ ಜೊತೆಗೆ ರಾಜ್ಯವು ತಳಮಟ್ಟದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುತ್ತಿದೆ ಮತ್ತು ಕ್ರೀಡಾ ಅಭಿವೃದ್ಧಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಗಮನಾರ್ಹವಾಗಿ ಗಮನ ಹರಿಸಿದೆ.
ಕ್ರೀಡಾ ವಿಜ್ಞಾನದಲ್ಲಿ ಕರ್ನಾಟಕದ ಪ್ರಯಾಣ:
ಕ್ರೀಡಾ ವಿಜ್ಞಾನದಲ್ಲಿ ಕರ್ನಾಟಕದ ಪ್ರಯಾಣವು 2016ರಿಂದಲೇ ಆರಂಭವಾಗಿದೆ. ಕ್ರೀಡಾಪಟುಗಳ ಗಾಯ ತಡೆಗಟ್ಟುವಿಕೆಯನ್ನು ಹೆಚ್ಚಿಸಲು ವೈಜ್ಞಾನಿಕ ತತ್ವಗಳನ್ನು ಅನುಸರಿಸುವಲ್ಲ ರಾಜ್ಯ ಮುಂದಿದೆ. ರಾಜ್ಯದಾದ್ಯಂತ ಹಲವಾರು ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಕ್ರೀಡಾ ಕಾರ್ಯಕ್ಷಮತೆ ಮತ್ತು ಕ್ರೀಡಾಪಟುಗಳ ಆರೈಕೆಗೆ ಸಮಗ್ರ ವಿಧಾನವನ್ನು ಬೆಳೆಸಲು ಡೇಟಾ ಚಾಲಿತ ವಿಧಾನಗಳನ್ನು ಬಳಸುವತ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಈ ಕೇಂದ್ರಗಳ ಮೂಲಕ ಶಕ್ತಿ ಮತ್ತು ವ್ಯವಸ್ಥಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಗಾಯಾಳುಗಳ ಪುನರ್ವಸತಿ, ಪೌಷ್ಠಿಕಾಂಶ ಮೌಲ್ಯಮಾಪನಗಳು ಮತ್ತು ಕ್ರೀಡಾ ಮನೋವಿಜ್ಞಾನ ಮಧ್ಯಸ್ಥಿಕೆಗಳ ಮೂಲಕ ಕ್ರೀಡಾ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಕರ್ನಾಟಕದ ಕ್ರೀಡಾ ವಿಜ್ಞಾನ ಕೇಂದ್ರಗಳು ಗಾಯಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ಉದ್ದೇಶಿತ ಪುನರ್ವಸತಿಯನ್ನು ಒದಗಿಸಲು ಐಸೊಕೈನೆಟಿಕ್ ಪರೀಕ್ಷೆ, ವೋರ್ಸ್ ಪ್ಲೇಟ್ ಗಳು ಮತ್ತು ಬಯೋ ಮೆಕ್ಯಾನಿಕಲ್ ವಿಶ್ಲೇಷಣೆಯಂತಹ ಸುಧಾರಿತ ಸಾಧನಗಳನ್ನು ಬಳಸುತ್ತಿವೆ. ಇದು ಗಾಯಾಳುಗಳಾದ ಕ್ರೀಡಾಪಟುಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ಗಾಯ ತಡೆಗಟ್ಟುವ ಕ್ರಮಗಳನ್ನು ಅವರ ತರಬೇತಿ ಕಾರ್ಯಕ್ರಮಗಳಲ್ಲಿ ಸಂಯೋಜಿಸಲಾಗಿದೆ.
ದೈಹಿಕ ಶಿಕ್ಷಕರ ಸಾಮರ್ಥ್ಯವರ್ಧನೆ:
ದೈಹಿಕ ಶಿಕ್ಷಕರ ಸಾಮರ್ಥ್ಯವನ್ನು ಗುರುತಿಸಲು ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ತರಬೇತಿ ನೀಡುವುದರೊಂದಿಗೆ ಅವರಲ್ಲಿನ ಪ್ರತಿಭೆಯನ್ನು ಸಹ ಗುರುತಿಸಲು ಕ್ರಮ ವಹಿಸಲಾಗುತ್ತಿದೆ. ಪ್ರತಿಭಾವಂತ ಶಿಕ್ಷಕರಿಂದ ಮಾತ್ರ ತರಬೇತಿ ಅವಧಿಯಲ್ಲಿ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.