ಬೆಂಗಳೂರು: ಭೋವಿ ನಿಗಮದ ಬಹುಕೋಟಿ ಹಗರಣ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳು ತೀವ್ರ ತನಿಖೆ ಒಳಪಡೆಸಿದ್ದು, ಇದೀಗ ಪ್ರಕರಣದ ತನಿಖೆ ನಡೆಸಿದ್ದ ಡಿವೈಎಸ್ಪಿ ಅಧಿಕಾರಿಯನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ ಅಕ್ರಮದ ಕುರಿತು ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಇದನ್ನು ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಅವರು ತನಿಖೆ ಕೈಗೊಂಡಿದ್ದರು, ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ ಪೂರೈಸಿದ ಆರೋಪದ ಮೇಲೆ 34 ವರ್ಷದ ವಕೀಲೆ ಜೀವಾ ಎನ್ನುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ವಿಚಾರಣೆಯ ವೇಳೆ ವಕೀಲೆ ಜೀವಾ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಕೀಲೆ ಜೀವಾ, ತನ್ನ ಆತ್ಮಹತ್ಯೆಗೆ ಡಿವೈಎಸ್ಪಿ ಕನಕಲಕ್ಷ್ಮೀ ಕಾರಣ ಎಂದು 13 ಪುಟಗಳ ಡೆತ್ನೋಟ್ ಬರೆದಿಟ್ಟಿದ್ದರು. ಇದೇ ಪ್ರಕರಣದ ಸಂಭಂದ ಇಂದು ಬೆಳಗ್ಗೆ ಕನಕಲಕ್ಷ್ಮೀ ಎಸ್ಐಟಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾಗ ಬಂಧಿಸಲಾಗಿದೆ.
ಈ ಹಿಂದೆ ಎರಡು ಬಾರಿ ಕನಕಲಕ್ಷ್ಮೀ ಅವರ ಹೇಳಿಕೆಯನ್ನು ಎಸ್ಐಟಿ ದಾಖಲು ಮಾಡಿತ್ತು. ಜೀವಾ ಅವರ ಕಿರಿಯ ಸಹೋದರಿ ಸಂಗೀತಾ ಅವರು ನೀಡಿದ ದೂರಿನಲ್ಲಿ ವಿಚಾರಣೆ ನೆಪದಲ್ಲಿ ಸಿಐಡಿ ಅಧಿಕಾರಿಗಳು ತನ್ನ ಅಕ್ಕ ಜೀವಾಗೆ ಅವಮಾನ ಮಾಡಿ ಹಣಕ್ಕೆ ಬೇಡಿಕೆ ಇರಿಸಿದ್ದರು ಎಂದು ಆರೋಪಿಸಿದ್ದರು. ಈ ದೂರಿನ ಮೇರೆಗೆ ಮೊದಲು ಬನಶಂಕರಿ ಠಾಣೆ ಪೊಲೀಸರು ಸಿಐಡಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಒಟ್ಟಾರೆ ಪ್ರಕರಣದ ಸಂಬಂಧ ಡಿವೈಎಸ್ಪಿ ಕನಕಲಕ್ಷ್ಮೀಯನ್ನು ಬಂಧಿಸಿ ನಗರದ ಲೊಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡೆಸಿದ್ದರು. ಸದ್ಯ 14 ದಿನ ನ್ಯಾಯಾಂಗ ಬಂಧನ ವಿಧಿಸಿರುವ ನ್ಯಾಯಾಲಯದ ಆದೇಶದಂತೆ ಪರಪ್ಪನ ಅಗ್ರಹಾರಕ್ಕೆ ಅವರನ್ನು ಕರೆದೊಯ್ಯುಲಾಗಿದೆ.