ಬೆಂಗಳೂರು: ಅತಿ ಹೆಚ್ಚು ಕಾಲ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥವಾಗಿ ಕೆಎಸ್ಎಲ್ಟಿಎ ಕ್ರೀಡಾಂಗಣವನ್ನು ಎಸ್.ಎಂ ಕೃಷ್ಣ ಟೆನಿಸ್ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಯಿತು.

ಶುಕ್ರವಾರ ಕಬ್ಬನ್ ಪಾರ್ಕ್ ಅಲ್ಲಿರುವ ಕರ್ನಾಟಕ ಲಾನ್ ಟೆನ್ನಿಸ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೆಎಸ್ಎಲ್ಟಿಎ ಅಧ್ಯಕ್ಷರೂ ಆಗಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ದಿವಂಗತ ಎಸ್.ಎಂ ಕೃಷ್ಣ ಅವರ ಪತ್ನಿ ಪ್ರೇಮಾ, ಪುತ್ರಿಯರಾದ ಮಾಳವಿಕಾ ಮತ್ತು ಶಾಂಭವಿ ಸಮ್ಮುಖದಲ್ಲಿ ಹೊಸ ಹೆಸರನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್ಎಲ್ಟಿಎ ಅಧ್ಯಕ್ಷ ಆರ್. ಅಶೋಕ್, ಎಸ್.ಎಂ ಕೃಷ್ಣ ಟೆನ್ನಿಸ್ ಕ್ರೀಡೆಯನ್ನು ತುಂಬಾ ಪ್ರೀತಿಸುತ್ತಿದ್ದರು. ನಾನು ಅವರ ಮನೆಗೆ ಹೋದಾಗಲೆಲ್ಲಾ ಅವರು ಮಾತು ವಿಂಬಲ್ಡನ್ ಬಗ್ಗೆ ಆಗಿರುತ್ತಿತ್ತು. ಈ ಕ್ರೀಡಾಂಗಣ ಅವರ ಕಠಿಣ ಪರಿಶ್ರಮದ ಫಲವಾಗಿದೆ. ಅವರ ಕನಸಿನ ಕೂಸಾದಟ ಟೆನ್ನಿಸ್ ಸಂಕಿರಣ ನಿರ್ಮಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏಳು ಎಕರೆ ಭೂಮಿ ಕೂಡಾ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಪ್ರತಿ ವರ್ಷ ಎಸ್ಎಂ. ಕೃಷ್ಣ ಸ್ಮಾರಕ ಪಂದ್ಯಾವಳಿಯನ್ನು ಆಯೋಜಿಸುವುದರ ಜೊತೆಗೆ, ರಾಜ್ಯದ ಮುಂಬರುವ ಟೆನಿಸ್ ಆಟಗಾರರಿಗೆ ಎಸ್ಎಂ. ಕೃಷ್ಣ ಸ್ಮಾರಕ ವಿದ್ಯಾರ್ಥಿವೇತನವನ್ನು ನೀಡಲಾಗಲಿದೆ ಎಂದು ಹೇಳಿದರು.

ಭಾವುಕರಾಗಿ ಮಾತನಾಡಿದ ದಿವಂಗತ ಎಸ್.ಎಂ ಕೃಷ್ಣ ಅವರ ಪತ್ನಿ ಪ್ರೇಮಾ, ಟೆನ್ನಿಸ್ ಕ್ರೀಡೆಯ ಮೇಲಿನ ಅವರ ಪ್ರೀತಿ ಅಪಾರವಾಗಿತ್ತು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಸಹಾಯ ಮಾಡುತ್ತದೆ ಎಂದು ನಂಬಿ ತಮ್ಮಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದ ವ್ಯಕ್ತಿ ಅವರಾಗಿದ್ದರು. ಅವರನ್ನು ನೆನೆದು ಗೌರವಿಸಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದರು.

ಈ ವೇಳೆ ಕೆಎಸ್ಎಲ್ಟಿಎ ಹಿರಿಯ ಉಪಾಧ್ಯಕ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಅಂತಾರಾಷ್ಟ್ರೀಯ ಟೆನಿಸ್ ಪಟು ಮತ್ತು ಕೆಎಸ್ಎಲ್ಟಿಎ ಉಪಾಧ್ಯಕ್ಷ ರೋಹನ್ ಬೋಪಣ್ಣ, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದ ರಾಜ್, ಕರ್ನಾಟಕ ಸರ್ಕಾರದ ಕ್ರೀಡಾ ಕಾರ್ಯದರ್ಶಿ ರಂದೀಪ್ ಡಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕರ್ನಾಟಕದ 10 ಯುವ ಮತ್ತು ಉದಯೋನ್ಮುಖ ಟೆನಿಸ್ ಆಟಗಾರರಿಗೆ 12 ಲಕ್ಷ ರೂ.ಗಳ ವಿದ್ಯಾರ್ಥಿವೇತನವನ್ನು ಸಹ ನೀಡಲಾಯಿತು.
ಎಸ್. ಎಂ ಕೃಷ್ಣ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿ:
ದಿವಂಗತ ಎಸ್.ಎಂ ಕೃಷ್ಣ ಅವರ ಸ್ಮರಣಾರ್ಥವಾಗಿ ಪುರುಷರ ಐಟಿಎಫ್ ಟೂರ್ನಿ ಮಾರ್ಚ್ 31ರಿಂದ ಏಪ್ರಿಲ್ 6ರ ವರೆಗೆ ನಡೆಯಲಿದೆ. ವಿಜೇತರು 30 ಸಾವಿರ ಯುಎಸ್ ಡಾಲರ್ ಬಹುಮಾನ ಪಡೆಯಲಿದ್ದಾರೆ. ಟೂರ್ನಿಯ ಅರ್ಹತಾ ಸುತ್ತುಗಳು ಮಾರ್ಚ್ 29 ಮತ್ತು 30ರಂದು ನಡೆಯಲಿದ್ದು, ಮಾರ್ಚ್ 31ರಿಂದ ಮುಖ್ಯ ಸುತ್ತಿನ ಪಂದ್ಯಗಳು ಪ್ರಾರಂಭವಾಗಲಿವೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರಲಿದೆ.