ಬೆಂಗಳೂರು: ಇತ್ತೀಚಿನ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಪಕ್ಷಗಳ ಸರ್ಕಾರಗಳು ಅಂದಾದುಂದಿ ತೆರಿಗೆ ಹಾಗೂ ಬೆಲೆ ಏರಿಸಿ ಜನಸಾಮಾನ್ಯನು ಬದುಕಲು ಪರದಾಡುವಂತಹ ಪರಿಸ್ಥಿತಿಗೆ ತಳ್ಳಿರುವುದು ಸ್ಥಿತಿಯ ವಿರುದ್ಧ ರಾಜ್ಯದ ಮನೆಮನೆಗಳಲ್ಲಿ ಬೃಹತ್ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ನೂತನವಾಗಿ ನೇಮಕಗೊಂಡಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ ಗುಂಡಪ್ಪ ತಿಳಿಸಿದರು.
ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದಿಂದ ಮುದ್ರಾಂಕ ಶುಲ್ಕ ಆಸ್ತಿ, ದರ ಹೆಚ್ಚಳ, ವಾಹನಗಳ ರಿಜಿಸ್ಟ್ರೇಷನ್ ಶುಲ್ಕ, ನಂದಿನಿ ಹಾಲಿನ ಬೆಲೆ, ದೇಶಿಯ ಮಧ್ಯದ ದರ ಹೆಚ್ಚಳ ,ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳ ಮೇಲೆ ಇದ್ದ ತೆರಿಗೆ ವಿನಾಯಿತಿ ರದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಶುಲ್ಕ ದುಬಾರಿ, ಕುಡಿಯುವ ನೀರಿನ ಬೆಲೆ ಹೆಚ್ಚಳ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿ ಆಸ್ತಿಗಳ ಬಿ ಖಾತೆ ಹೆಸರಿನಲ್ಲಿ ತೆರಿಗೆ ದರೋಡೆ, ಕೆಪಿಟಿಸಿಎಲ್ ಎಸ್ಕಾಂ ನೌಕರರ ಪಿಂಚಣಿಗೆ ನೇರವಾಗಿ ರಾಜ್ಯದ ನಾಗರಿಕರಗಳ ಮೇಲೆ ಹೊರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ದುಪ್ಪಟ್ಟು ಆಸ್ತಿ ತೆರಿಗೆ, ಕೆಪಿಟಿಸಿಎಲ್ ನೂತನ ಮೀಟರ್ ಗಳ ಬೆಲೆ ಲಕ್ಷಾಂತರ ಏರಿಕೆ ,ರೈತರ ಪಂಪ್ ಸೆಟ್ ಗಳ ಮೇಲೆ ದುಬಾರಿ ವೆಚ್ಚ, ವಿದ್ಯುತ್ ದರ ಏರಿಕೆ ಹಾಗೂ ಮೆಟ್ರೋ ಬೆಲೆ 100 ಪರ್ಸೆಂಟ್ ಏರಿಕೆಯನ್ನು ಮಾಡಲಾಗಿದೆ ಎಂದು ದೂರಿದರು.
ಇದೇ ರೀತಿ ಬಿಜೆಪಿಯ ಕೇಂದ್ರ ಸರ್ಕಾರ ಸಹ ಟೋಲ್, ಔಷಧ, ಕಾರು, ವಿದೇಶಿ ಶಿಕ್ಷಣ, ವೀಸಾ ಶುಲ್ಕ ಸಿ.ಎನ್.ಜಿ ಮೇಲಿನ ತೆರಿಗೆ ಹೆಚ್ಚಳದಿಂದಾಗಿ ಜನಸಾಮಾನ್ಯನು ಬದುಕಲು ತತ್ತರಿಸುವಂತಹ ಪರಿಸ್ಥಿತಿಗೆ ತಳ್ಳಿದೆ. ಇವುಗಳ ವಿರುದ್ಧ ರಾಜ್ಯದಾದ್ಯಂತ ಮನೆಮನೆಗಳಲ್ಲಿ ಪಕ್ಷದ ವತಿಯಿಂದ ಕಾರ್ಯಕರ್ತರುಗಳು ಬೃಹತ್ ಜಾಗೃತಿ ಅಭಿಯಾನವನ್ನು ಇದೇ ತಿಂಗಳ 5ನೇ ತಾರೀಖಿನಿಂದ ಬೆಂಗಳೂರಿನಿಂದ ಆರಂಭಿಸಲಿದ್ದಾರೆ ಎಂದು ಸೀತಾರಾಮ ಗುಂಡಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಪ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಬೆಂಗಳೂರು ನಗರ ಅಧ್ಯಕ್ಷ ಸತೀಶ್ ಕುಮಾರ್, ಹರಿಹರನ್, ಶಶಿಧರ್ ಆರಾಧ್ಯ ,ಅನಿಲ್ ನಾಚಪ್ಪ, ಅಯೂಬ್ ಖಾನ್, ಇರ್ಷಾದ್ ಖಾನ್ ಭಾಗವಹಿಸಿದ್ದರು.