ಬೆಂಗಳೂರು: ಕರ್ನಾಟಕದ ಇತಿಹಾಸಕ್ಕೆ ಹೊಸತೊಂದು ತಾಮ್ರ ಪಟದ ಶಾಸನ ಇದೀಗ ಸೇರ್ಪಡೆಯಾಗಿದೆ. ಈ ಶಾಸನ ವಿಜಯನಗರ ರಾಜವಂಶಕ್ಕೆ ಸೇರಿದ್ದಾಗಿದ್ದು, ಹೀಗೆ ಬೆಳಕಿಗೆ ಬಂದ ತಾಮ್ರದ ಈ ಶಾಸನವನ್ನು ಬೆಂಗಳೂರಿನ ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಿಸಲಾಗುತ್ತಿದೆ.

ತಾಮ್ರದ ಈ ಶಾಸನ ಕರ್ನಾಟಕ ಮೂಲದ್ದಾಗಿದ್ದು, ವಿಜಯನಗರದ ಸಂಗಮ ದೊರೆ ಮೊದಲನೆ ದೇವರಾಯನ ಆಡಳಿತ ಕಾಲದ್ದಾಗಿದೆ. ಈ ತಾಮ್ರದ ಶಾಸನದ ಮೇಲೆ ಶಕ 1328 ವ್ಯಾಯಾ, ಕಾರ್ತಿಕ, ಬಾ. 10, ಶುಕ್ರವಾರ ಎಂದು ಕೆತ್ತಲಾದ ಸಂಸ್ಕೃತ ಭಾಷೆಯಲ್ಲಿನ ನಾಗರಿ ಲಿಪಿಯಲ್ಲಿ ಕನ್ನಡದ ಬರವಣಿಗೆಗಳು ಸಹ ಇವೆ. ಇದು ಚಂದ್ರ, ಯದು, ಸಂಗಮ ಮತ್ತು ಅವನ ಐದು ಮಕ್ಕಳಾದ ಹರಿಹರ, ಕಂಪ, ಬುಕ್ಕ, ಮಾರಪ, ಮುದ್ದಪ್ಪರಿಂದ ಆರಂಭಗೊಂಡ ಸಂಗಮ ರಾಜವಂಶದ ವಂಶಾವಳಿಯನ್ನು ಪ್ರತಿನಿಧಿಸುತ್ತಿದೆ. ಗಮನಾರ್ಹವೆಂದರೆ ಮುಳಬಾಗಿಲು ರಾಜ್ಯ, ಹೊಡೆನಾಡ-ಸ್ಥಳ ಎಂಬುದಾಗಿ ಕನ್ನಡ ಭಾಷೆಯಲ್ಲಿ ಇರುವುದು ತಾಮ್ರದ ಪಟ್ಟಿಗಳಲ್ಲಿ ಕಂಡುಬಂದಿದೆ.

ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನವಾದ ವರಾಹವನ್ನು ಸಾಮಾನ್ಯ ಚಿತ್ರದ ಸ್ಥಳದಲ್ಲಿ ಮುದ್ರೆಯ ಚಿತ್ರದಂತೆ ಇಲ್ಲಿ ಚಿತ್ರಿಸಿರುವುದು ಬಹಳ ಆಸಕ್ತಿದಾಯಕವಾಗಿದೆ. ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಇಲ್ಲಿಯವರೆಗೆ ದೃಢೀಕರಿಸದ ರಾಜ ಒಂದನೆಯ ದೇವರಾಯರ ಪಟ್ಟಾಭಿಷೇಕದ ದಿನಾಂಕವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಹಾಗೂ ಪಟ್ಟಾಭಿಷೇಕ ನಡೆಯುತ್ತಿರುವಾಗ ಅನುದಾನವನ್ನು ನೀಡಲಾಯಿತು ಎಂದು ಇದರಿಂದ ತಿಳಿದುಬಂದಿದೆ. ಹೀಗೆ ಐದು ತಾಮ್ರಗಳ ಪಟ್ಟಿಯುಳ್ಳ ಶಾಸನ ಬೆಳಕಿಗೆ ಬಂದಿರುವುದು ಕೇವಲ ಐತಿಹಾಸಿಕ ಆವಿಷ್ಕಾರ ಮಾತ್ರವಲ್ಲದೆ ವಿಜಯನಗರ ಸಾಮ್ರಾಜ್ಯವನ್ನು ನೋಡುವ ಐತಿಹಾಸಿಕ ದೃಷ್ಟಿಕೋನವನ್ನು ಸಹ ಬದಲಾಯಿಸುತ್ತದೆ.

ಹೊಸತಾಗಿ ಬೆಳಕಿಗೆ ಬಂದ ಶಾಸನವನ್ನು ಫಾಲ್ಕಾನ್ ಕಾಯಿನ್ಸ್ ಗ್ಯಾಲರಿಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಂ.ಪರೇಖ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಗಮನಕ್ಕೆ ತಂದಿದ್ದು, ಕರ್ನಾಟಕ ರಾಜ್ಯದ ಇತಿಹಾಸಕ್ಕೆ ಹೊಸ ಬೆಳಕು ಚೆಲ್ಲುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.