ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್ ಮಸೂದೆಯಲ್ಲಿ ವಕ್ಫ್ ಮಂಡಳಿಗೆ ನೀಡಲಾದ ಅಪರಿಮಿತ ಅಧಿಕಾರಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿದ್ದರೂ, ಮಸೂದೆಯು ಹಿಂದೂ ಸಮುದಾಯದ ಭೂಮಿಯ ರಕ್ಷಣೆಯನ್ನು ಸಂಪೂರ್ಣವಾಗಿ ಖಾತರಿಪಡಿಸುವುದಿಲ್ಲ. ಪ್ರಸ್ತುತ ವಕ್ಫ್ ಮಸೂದೆ ಅಪೂರ್ಣವಾಗಿದೆ ಮತ್ತು ಹಿಂದೂ ಸಮುದಾಯದ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಲು ಅಸಮರ್ಥವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಹಿಂದೂಗಳ ಹಕ್ಕಿನ ಭೂಮಿಯ ಮೇಲಿನ ಅನ್ಯಾಯ ದೂರಗೊಳಿಸಲು ಹಿಂದೂ ಪಕ್ಷವು ಜಂಟಿ ಸಂಸದೀಯ ಸಮಿತಿಯ ಮುಂದೆ ಮಂಡಿಸಿದ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಹಿಂದೂ ಸಮಾಜದ ಹಕ್ಕುಗಳ ಮೇಲಾಗುತ್ತಿರುವ ಅನ್ಯಾಯ ದೂರಗೊಳಿಸಬೇಕು ಎಂದು ಒತ್ತಾಯಿಸಿದೆ.
ಪ್ರಸ್ತಾವಿತ ಮಸೂದೆಯ ಕೆಲವು ವಿಭಾಗಗಳಾದ ಸೆಕ್ಷನ್ 40, 104, 107 ಮತ್ತು 108 ಕಲಂಗಳ ರದ್ದತಿಯನ್ನು ಹಿಂದೂ ಜನಜಾಗೃತಿ ಸಮಿತಿ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಸೆಕ್ಷನ್ 3(ಸಿ) ಪ್ರಕಾರ, ಸರ್ಕಾರಿ ಭೂಮಿಯನ್ನು ಮಾತ್ರ ತನಿಖೆ ಮಾಡಲಾಗುತ್ತದೆ ಮತ್ತು ಹಿಂದೆ ವಕ್ಫ್ ಆಸ್ತಿಗಳೆಂದು ಘೋಷಿಸಲಾದ ಭೂಮಿಗಳ ಬಗ್ಗೆ ಮಾಹಿತಿಯನ್ನು ಕೋರಲಾಗಿದೆ. ಆದರೆ, ಹಿಂದೂ ದೇವಾಲಯ, ಸಮುದಾಯಗಳ ಜಮೀನುಗಳು, ಟ್ರಸ್ಟ್ ಗಳ ಹಾಗೂ ಇತರ ಸಮುದಾಯಗಳ ಒಡೆತನದ ಜಮೀನುಗಳು ಮತ್ತು ಭಾರತೀಯ ಪುರಾತತ್ವ ಸಮೀಕ್ಷೆಯ ವ್ಯಾಪ್ತಿಯಲ್ಲಿರುವ ಜಮೀನುಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಿದ್ದರೆ, ಅವುಗಳ ಮೇಲೆ ಯಾವುದೇ ಪೂರ್ವಾನ್ವಯ ತಿದ್ದುಪಡಿ ಪರಿಣಾಮ ಬೀರುವುದಿಲ್ಲ. ಆದ್ದರಿಂದ, ಈ ಭೂಮಿಯನ್ನು ಹಿಂದೂ ಸಮುದಾಯಕ್ಕೆ ಹಿಂತಿರುಗಿಸಲಾಗುವುದು ಎಂಬುದಕ್ಕೆ ಈ ಮಸೂದೆಯಲ್ಲಿ ಯಾವುದೇ ಗ್ಯಾರಂಟಿ ಇಲ್ಲ ಎಂದು ಸಮಿತಿಯ ರಾಜ್ಯ ವಕ್ತಾರರಾದ ಮೋಹನ್ ಗೌಡ ಹೇಳಿದ್ದಾರೆ.
ಹಿಂದೂ ಸಮುದಾಯದ ಹಕ್ಕುಗಳ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಈ ಮಸೂದೆಗೆ ಮತ್ತಷ್ಟು ತಿದ್ದುಪಡಿಗಳ ಅವಶ್ಯಕವಾಗಿದೆ. ಈ ಹಿಂದೆ ವಕ್ಫ್ ಆಸ್ತಿಗಳೆಂದು ಘೋಷಿಸಲಾದ ಎಲ್ಲಾ ಭೂಮಿಯನ್ನು ತನಿಖೆ ಮಾಡಬೇಕು, ಹಿಂದೂ ದೇವಾಲಯಗಳು, ಟ್ರಸ್ಟ್ಗಳು, ಇತರ ಸಂಘಗಳು ಮತ್ತು ಭಾರತೀಯ ಪುರಾತತ್ವ ಸಮೀಕ್ಷೆಯ ಭೂಮಿಗಳ ಮೇಲೆ ಮಾಡಲಾದ ಅನ್ಯಾಯದ ವಕ್ಫ್ ಹಕ್ಕುಗಳನ್ನು ತಕ್ಷಣವೇ ರದ್ದುಗೊಳಿಸಿ, ವಕ್ಫ್ ಮಂಡಳಿಗೆ ನೀಡಲಾದ ವಿಶೇಷ ಅಧಿಕಾರಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಹಿಂದೂ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯುತ್ತದೆ. ಹಿಂದೂ ಸಮುದಾಯವು ಒಗ್ಗೂಡಿ ತಮ್ಮ ಭೂಮಿಯನ್ನು ರಕ್ಷಿಸಲು ಧ್ವನಿ ಎತ್ತುವ ಅಗತ್ಯವಿದೆ ಎಂದು ಮೋಹನ್ ಗೌಡ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.