ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿಯ ಕಠಿಣ ವಿಷಯಗಳಲ್ಲಿ ಒಂದಾದ ಕಳೆದ ವರ್ಷ ಗೊಂದಲದ ಗೂಡಾಗಿದ್ದ ವಿಜ್ಞಾನ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಈಗಾಗಲೇ ಕನ್ನಡ, ಗಣಿತ, ಇಂಗ್ಲೀಷ್ ಹಾಗೂ ಸಮಾಜ ವಿಜ್ಞಾನ ವಿಷಯಗಳು ಕೂಡ ಹೆಚ್ಚು ಗೊಂದಲವಿಲ್ಲದೆ ಮುಗಿದಿದೆ.
ಎಸ್ಎಸ್ಎಲ್ಸಿಯ ಕಠಿಣ ವಿಷಯಗಳಲ್ಲಿ ಒಂದಾದ ವಿಜ್ಞಾನ ಪರೀಕ್ಷೆಯಲ್ಲಿ 20,513 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಪರೀಕ್ಷೆಗೆ 8,48,696 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರ ಪೈಕಿ 8,28,183 ವಿದ್ಯಾರ್ಥಿಗಳು (ಶೇ.97.58) ಪರೀಕ್ಷೆಗೆ ಹಾಜರಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 1,962 ವಿದ್ಯಾರ್ಥಿಗಳು ಗೈರಾಗಿದ್ದು, ವಿಜಯಪುರ 1,377, ಬೀದರ್ 1,296, ರಾಯಚೂರಿನಲ್ಲಿ 1,273 ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ 1,264 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 77 ವಿದ್ಯಾರ್ಥಿಗಳು ಗೈರಾಗಿದ್ದು, ಶೇ.99.45 ರಷ್ಟು ಹಾಜರಾತಿ ದಾಖಲಾಗಿದೆ.
ಭೌತಶಾಸ್ತ್ರ ವಿಷಯದಲ್ಲಿ ಮಾತ್ರ ಎರಡು ಅಂಕದ ಎರಡು ಪ್ರಶ್ನೆಗಳು ಮಾತ್ರ ಮಕ್ಕಳಿಗೆ ಉತ್ತರಿಸಲು ಕಷ್ಟವಾಗಿದ್ದು, ಅದನ್ನು ಬಹುತೇಕರು ಉತ್ತರಿಸಿದ್ದಾರೆ. ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯದ ಪ್ರಶ್ನೆಗಳಲ್ಲಿ ಯಾವುದೇ ಗೊಂದಲ ಇರಲಿಲ್ಲ ಎಂದು ತಿಳಿದು ಬಂದಿದೆ.