ಬೆಂಗಳೂರು: ಬಿಎಂಟಿಸಿ 2500 ನಿರ್ವಾಹಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ಕೂಡಲೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ನೇಮಕಾತಿ ಆದೇಶ ಪತ್ರ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಾಂತ್ ಕುಮಾರ್, ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ 2500 ನಿರ್ವಾಹಕರ ಹುದ್ದೆಗಳಿಗೆ ಕಳೆದ ಡಿಸೆಂಬರ್ ನಲ್ಲಿ ನೇಮಕಾತಿ ಆದೇಶ ನೀಡಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಉಳಿಕೆ ಮೂಲ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮಾತ್ರ ಪ್ರಕಟಿಸಿದ್ದು, 4 ತಿಂಗಳು ಕಳೆದರೂ ಇದುವರೆಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ ಎಂದು ದೂರಿದರು.
ಬಿಎಂಟಿಸಿ ಸ್ಪಷ್ಟನೆ:
ಬೆಂ.ಮ.ಸಾ. ಸಂಸ್ಥೆಯಲ್ಲಿ 2286 ನಿರ್ವಾಹಕ ಹುದ್ದೆಗಳಿಗೆ ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಯನ್ನು ಮುಕ್ತಾಯಗೊಳಿಸಿ, ಅರ್ಹ ಅಭ್ಯರ್ಥಿಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಜ.21 ರಂದು ಪ್ರಕಟಿಸಲಾಗಿದ್ದು, 30ರ ಒಳಗಾಗಿ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿತ್ತು, ಆಕ್ಷೇಪಣೆ ಕುರಿತು ಸರ್ಕಾರದ ಮಾರ್ಗದರ್ಶನ ಕೋರಿ ಫೆ. 12 ರಂದು ಪತ್ರ ಬರೆಯಲಾಗಿತ್ತು. ಸರ್ಕಾರದಿಂದ ಮಾರ್ಗದರ್ಶನ ದೊರೆತ ಕೂಡಲೇ ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಿ, ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಯಾವುದೇ ರೀತಿಯ ಗೊಂದಲ ಮತ್ತು ದುರುದ್ದೇಶಪೂರಿತ ಸಂದೇಶಗಳಿಗೆ ಕಿವಿಗೊಡದೇ, ಸಹಕರಿಸಬೇಕು ಎಂದು ಬಿಬಿಎಂಟಿಸಿ ಸಾರ್ವಜನಿಕ ಸಂಪರ್ಕಧಿಕಾರಿ ಹೇಳಿದ್ದಾರೆ.