Law

ಸಹಕಾರ ಸಂಘಗಳಲ್ಲಿ ಅವ್ಯವಹಾರ; ಓರ್ವ ಸದಸ್ಯ ದೂರು ಕೊಟ್ಟರೂ ವಿಚಾರಣೆ ನಡೆಸಬಹುದು: ಹೈಕೋರ್ಟ್

Share It

ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಹಕಾರ ಸಂಘದ ಒಬ್ಬನೇ ಸದಸ್ಯ ದೂರು ನೀಡಿದರೂ ಅದನ್ನು ಸಹಕಾರ ಸಂಘಗಳ ನಿಬಂಧಕರು ಪರಿಗಣಿಸಿ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿಚಾರಣೆ ನಡೆಸುವ ಸಂಬಂಧವಾಗಿ ಸಹಕಾರ ನಿಬಂಧಕರು ಜಾರಿ ಮಾಡಿದ್ದ ನೋಟಿಸ್ ರದ್ದು ಕೋರಿ ಮೈಸೂರಿನ ಕೋ-ಆಪರೇಟಿವ್ ಸೊಸೈಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ಆದೇಶದಲ್ಲಿ ಸಹಕಾರ ನಿಬಂಧಕರು ನಡೆಸುವ ವಿಚಾರಣೆಯಲ್ಲಿ ತನ್ನ ವಾದ ಮಂಡಿಸಲು ಸೊಸೈಟಿಗೆ ಮುಕ್ತ ಅವಕಾಶವಿದೆ. ಇನ್ನು, ಓರ್ವ ಸದಸ್ಯ ದೂರು ನೀಡಿದರೂ ವಿಚಾರಣೆ ನಡೆಸುವ ಮತ್ತು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವ ಅಧಿಕಾರವನ್ನು ಸಹಕಾರ ನಿಬಂಧಕರು ಹೊಂದಿದ್ದಾರೆ ಎಂದು 2001ರಲ್ಲಿಯೇ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಆದ್ದರಿಂದ, ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ. ಅಲ್ಲದೆ, ಸೊಸೈಟಿ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿ 2015ರ ಅಕ್ಟೋಬರ್ 5ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ತೆರವು ಮಾಡಿದೆ.

ಹಿನ್ನೆಲೆ: ಮೈಸೂರು ಅರ್ಥ್ ಮೂವರ್ಸ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ವಿರುದ್ದ ಸದಸ್ಯರೊಬ್ಬರು ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಹಕಾರ ಇಲಾಖೆಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಮೈಸೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರು ಅರ್ಜಿದಾರ ಸೊಸೈಟಿಯ ಲೆಕ್ಕ ಪುಸ್ತಕಗಳ ಪರಿಶೀಲನೆ ನಡೆಸಲು 2015ರ ಜನವರಿ 2ರಂದು ಆದೇಶಿಸಿದ್ದರು. ಹಾಗೆಯೇ, ಫೆಬ್ರವರಿ 2ರಂದು ಸೊಸೈಟಿ ವಿರುದ್ಧ ವಿಚಾರಣೆ ನಡೆಸಲು ಅಧಿಕಾರಿಯೊಬ್ಬರನ್ನು ನೇಮಿಸಿದ್ದರು. ವಿಚಾರಣೆ ಹಿನ್ನೆಲೆಯಲ್ಲಿ ಸೊಸೈಟಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಈ ನೋಟಿಸ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಸೊಸೈಟಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959ರ ಸೆಕ್ಷನ್ 64(2)ರ ಪ್ರಕಾರ ಸಹಕಾರ ಸಂಘಗಳ ಒಟ್ಟು ಸದಸ್ಯರ ಮೂರನೇ ಒಂದು ಭಾಗದಷ್ಟು ಸದಸ್ಯರು ಮನವಿ ಸಲ್ಲಿಸಿದಾಗ ಮಾತ್ರ ವಿಚಾರಣೆಗೆ ಆದೇಶಿಸಬಹುದು. ಈ ಪ್ರಕರಣದಲ್ಲಿ ಕೇವಲ ಒಬ್ಬ ಸದಸ್ಯನ ದೂರು ಆಧರಿಸಿ ವಿಚಾರಣೆಗೆ ಆದೇಶಿಸಿರುವುದು ಕಾನೂನು ಬಾಹಿರವಾಗಿದ್ದು, ನೋಟಿಸ್ ರದ್ದುಪಡಿಸಬೇಕು ಎಂದು ಕೋರಿದ್ದರು.
(WP 37198/2015)


Share It

You cannot copy content of this page