ಮಹಿಳಾ ನ್ಯಾಯವಾದಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಕೀಲೆ ಸುಶೀಲಾ ಪಾಟೀಲರು ನೀಡಿದ ದೂರಿನ ಮೇರೆಗೆ ಧಾರವಾಡದ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಮಂಜುನಾಥ ಕುಸುಗಲ್ ವಿರುದ್ಧ ಅಕ್ಟೋಬರ್ 31 ರಂದು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ದೂರಿನ ಸಾರಾಂಶ: ದೌರ್ಜನ್ಯಕ್ಕೆ ಸಿಲುಕಿದ ಮಹಿಳೆಯರಿಗೆ ನೆರವು ನೀಡುವ ಸಖಿ ಒನ್ ಸೆಂಟರ್ ಕಡೆಯಿಂದ 2022ರ ನವೆಂಬರ್ ನಲ್ಲಿ ನಡೆಯಲಿರುವ ಧಾರವಾಡ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನೆ ಸಭೆಗೆ ಅಂಕಿ ಅಂಶಗಳನ್ನು ಸಂಗ್ರಹಿಸುವ ಸಲುವಾಗಿ ವಕೀಲೆ ಅಕ್ಟೋಬರ್ 28 ರಂದು ಪೊಲೀಸ್ ಠಾಣೆಗೆ ತೆರಳಿದ್ದರು.
ತಮ್ಮ ಪರಿಚಯ ಹೇಳಿಕೊಂಡು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಿಂದ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪಹರಣ ಮತ್ತಿತರೆ ಪ್ರಕರಣಗಳ ಮಾಹಿತಿಗಳನ್ನು ನೀಡುವಂತೆ ಸಿಪಿಐ ಮಂಜುನಾಥ್ ಕುಸುಗಲ್ ಗೆ ತಿಳಿಸಿದ್ದರು. ಈ ವೇಳೆ ಮನವಿ ಪತ್ರ ಓದಿದ ಸಿಪಿಐ ಅನುಚಿತವಾಗಿ ವರ್ತಿಸಿದರು ಎಂದು ವಕೀಲೆ ಆರೋಪಿಸಿದ್ದಾರೆ.
ಅಲ್ಲದೇ, ಸಿಪಿಐ ಮಂಜುನಾಥ್ ನಗು ಸೂಸಿ, ಕಣ್ಣು ಹೊಡೆದು ಬಳಿಕ ಫ್ಲೈಯಿಂಗ್ ಕಿಸ್ ನೀಡಿ ಅನುಚಿತವಾಗಿ ವರ್ತಿಸಿದರು. ಈ ಅಸಭ್ಯ ವರ್ತನೆ ಪ್ರಶ್ನಿಸಿದ್ದಕ್ಕೆ ಇಷ್ಟವಿದ್ದರೆ ಒಪ್ಪಿಕೊಳ್ಳಿ. ಇಲ್ಲವೆಂದರೆ ಬಿಟ್ಟುಬಿಡಿ. ನೀವು ಚೆಂದ ಕಾಣುತ್ತಿದ್ದೀರಿ ಎಂದರು.
ಆಕ್ಷೇಪಿಸಿದ್ದಕ್ಕೆ ಸಣ್ಣ ವಿಷಯ ದೊಡ್ಡದೇಕೆ ಮಾಡುತ್ತೀರಿ. ಇಲ್ಲಿಗೆ ಬಿಟ್ಟು ಹೊರಗೆ ಹೋಗಿ. ಇಲ್ಲಾಂದ್ರೆ ನಾವು ಪೊಲೀಸರು ಗೊತ್ತಲ್ವಾ ಎಂದು ಜೀವ ಬೆದರಿಕೆ ಹಾಕಿದರು. ನಂತರ ತಮ್ಮ ಪತಿಯನ್ನು ಕಚೇರಿಗೆ ಕರೆಸಿ ಹೊರ ಹೋಗದಂತೆ ಅಕ್ರಮವಾಗಿ ಬಾಗಿಲು ಹಾಕಿಕೊಂಡು ತಡೆದರು.
ಮೊಬೈಲ್ ರೆಕಾರ್ಡ್ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಪರಿಶೀಲಿಸಿ ಅವುಗಳನ್ನು ತಮ್ಮ ಸಿಬ್ಬಂದಿ ಕೈಯಲ್ಲಿ ಕೊಟ್ಟು ತಾನು ಹೇಳುವವರೆಗೆ ಕೊಡಬೇಡಿ ಎಂದು ನಮಗೆ ಕಿರುಕುಳ ನೀಡಿದರು ಎಂದು ವಕೀಲೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ವಕೀಲೆಗೆ ಕಿರುಕುಳ ನೀಡಿದ ಘಟನೆ ಬಳಿಕ ಧಾರವಾಡದ ವಕೀಲರು ಆರೋಪಿತ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಅಂತಿಮವಾಗಿ ವಕೀಲರ ಆಗ್ರಹಕ್ಕೆ ಮಣಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಈ ಮೇರೆಗೆ ಧಾರವಾಡ ಉಪನಗರ ಠಾಣೆ ಪೊಲೀಸರು ಸಿಪಿಐ ಮಂಜುನಾಥ್ ವಿರುದ್ಧ ಐಪಿಸಿ ಸೆಕ್ಷನ್ 354 (ಎ), 342, 506, 509 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
(ಅಪರಾಧ ಸಂಖ್ಯೆ 0245/2022)