ವಿವಾಹ ವಿಚ್ಛೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣದಲ್ಲಿ ಪತ್ನಿಯು ವಕೀಲರನ್ನು ನಿಯೋಜಿಸಿಕೊಂಡು ಕೇಸ್ ನಡೆಸಲು 25 ಸಾವಿರ ರೂಪಾಯಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಪತಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ವಿಚಾರಣೆಗೆ ಹಾಜರಾಗಲು ಹಣಕಾಸಿನ ಸಮಸ್ಯೆ ಇದೆ. ಆದ್ದರಿಂದ ಪತಿಯಿಂದ ವ್ಯಾಜ್ಯದ ವೆಚ್ಚವನ್ನು ಕೊಡಿಸುವಂತೆ ಕೋರಿ ಮೈಸೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಮಹಿಳೆಯು ಆರ್ಥಿಕ ಸಂಕಷ್ಟದಲ್ಲಿದ್ದು, ಆದಾಯದ ಮೂಲಗಳಿಲ್ಲ ಹಾಗೂ ಇಬ್ಬರು ಮಕ್ಕಳ ಜವಾಬ್ದಾರಿ ಇದೆ ಎಂದಿದ್ದಾರೆ. ಪತಿ ದಾಖಲಿಸಿರುವ ಪ್ರಕರಣದಲ್ಲಿ ವಕೀಲರನ್ನು ನೇಮಿಸಿಕೊಳ್ಳಲು ಹಾಗೂ ವ್ಯಾಜ್ಯ ಮುಂದುವರೆಸಲು 75 ಸಾವಿರ ವೆಚ್ಚ ಕೊಡಿಸುವಂತೆ ಕೋರಿದ್ದಾರೆ.
ಆದ್ದರಿಂದ 25 ಸಾವಿರವನ್ನು ಪತಿ ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಅದನ್ನು ಪತ್ನಿ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಇದೇ ವೇಳೆ ಪತಿಯ ಕೋರಿಕೆಯಂತೆ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸಿರುವ ಪೀಠ, ಇದಕ್ಕೆ ವಾದಿ ಪ್ರತಿವಾದಿಗಳಿಬ್ಬರೂ ಅಗತ್ಯ ಸಹಕಾರ ನೀಡಬೇಕು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2011ರಲ್ಲಿ ವಿವಾಹವಾಗಿರುವ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಾಂಪತ್ಯದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಪತಿ ವಿಚ್ಛೇದನ ಕೋರಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(ಐ) ಅಡಿಯಲ್ಲಿ ಮೈಸೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪತ್ನಿ ತಾನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಕೇಸ್ ಸಂಬಂಧ ವಕೀಲರನ್ನು ನೇಮಿಸಿಕೊಳ್ಳಲು 75 ಸಾವಿರ ರೂಪಾಯಿ ಖರ್ಚು ಕೊಡಿಸುವಂತೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿ ಇದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಪತಿಗೆ ಈ ರೀತಿ ವೆಚ್ಚ ಭರಿಸುವಂತೆ ನಿರ್ದೇಶಿಸಲು ಅವಕಾಶವಿಲ್ಲ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ನೆರವು ಪಡೆದುಕೊಳ್ಳಿ ಎಂದಿತ್ತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಪತ್ನಿ, ತನ್ನ ಪತಿಗೆ ತಿಂಗಳಿಗೆ 80 ಸಾವಿರ ರೂಪಾಯಿ ಸಂಬಳವಿದೆ. ಆದರೆ, ನನಗೆ ಯಾವುದೇ ಆದಾಯದ ಮೂಲವಿಲ್ಲ. ಜತೆಗೆ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಇದೆ, ಆದ್ದರಿಂದ ತನಗೆ ವ್ಯಾಜ್ಯದ ವೆಚ್ಚವಾಗಿ 75 ಸಾವಿರ ಪಾವತಿಸಲು ಪತಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
(WP 3451/2020)