ನವದೆಹಲಿ/ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ವಿಮಾನ ನಿಲ್ದಾಣಗಳಲ್ಲಿ ಇಂದಿನಿಂದ ಕಾರ್ಯಾಚರಣೆ ಪುನರಾಂಭಗೊಂಡಿದೆ.
ಪಾಕಿಸ್ತಾನದೊಂದಿಗೆ ಸಂಘರ್ಷದ ಹಿನ್ನೆಲೆಯಲ್ಲಿ ಮೇ. 9 ರಂದು ನಾಗರಿಕ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಶ್ರೀನಗರ ಮತ್ತು ಅಮೃತಸರ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಪರಿಣಾಮ ಬೀರಿತ್ತು. ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆಯ ನಂತರ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಮತ್ತು ಮೇ 15ರವರೆಗೆ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸೂಚಿಸಿತ್ತು.
ಅಂಬಾಲಾ (ಹರಿಯಾಣ), ಹಿಂಡನ್ (ಉತ್ತರ ಪ್ರದೇಶ), ನಲಿಯಾ (ಗುಜರಾತ್), ಸರ್ಸಾವಾ (ಉತ್ತರ ಪ್ರದೇಶ), ಉತ್ತರಲೈ (ರಾಜಸ್ಥಾನ), ಶ್ರೀನಗರ, ಆವಂತಿಪುರ ಮತ್ತು ಜಮ್ಮು (ಜಮ್ಮು ಮತ್ತು ಕಾಶ್ಮೀರ), ಅಮೃತಸರ, ಚಂಡೀಗಢ, ಲೂಧಿಯಾನ, ಪಟಿಯಾಲ, ಭಟಿಂಡಾ, ಆದಂಪುರ ಹಲ್ವಾರ ಮತ್ತು ಪಠಾಣ್ಕೋಟ್ (ಪಂಜಾಬ್), ಭುಂತರ್, ಶಿಮ್ಲಾ ಮತ್ತು ಕಂಗ್ರಾ-ಗಗ್ಗಲ್ (ಹಿಮಾಚಲ ಪ್ರದೇಶ), ಕಿಶನ್ಗಢ (ರಾಜಸ್ಥಾನ), ಥೋಯಿಸ್ ಮತ್ತು ಲೇಹ್ (ಲಡಾಖ್), ಮುಂದ್ರಾ, ಜಾಮ್ನಗರ, ಹಿರಾಸರ್, ಪೋರಬಂದರ್, ಕೇಶೋದ್, ಕಾಂಡ್ಲಾ ಮತ್ತು ಭುಜ್ (ಗುಜರಾತ್) ಮತ್ತು ಜೈಸಲ್ಮೇರ್, ಜೋಧ್ಪುರ ಮತ್ತು ಬಿಕಾನೇರ್ (ರಾಜಸ್ಥಾನ) ವಿಮಾನ ನಿಲ್ದಾಣಗಳಲ್ಲಿ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಈ ಕುರಿತು ಮಾತನಾಡಿರುವ ಎಎಐ ವಕ್ತಾರ, ಪ್ರಯಾಣಿಕರು ಮತ್ತು ಕಾರ್ಯಚರಣಾ ಸಿಬ್ಬಂದಿಯ ಸುರಕ್ಷತೆಯಯ ನಮ್ಮ ಪ್ರಮುಖ ಆದ್ಯತೆಯಾಗಿದೆ. ನಿಯಮಿತ ಕಾರ್ಯಾಚರಣೆಗಳಿಗೆ ಮರಳಲು ಅಗತ್ಯವಿರುವ ಎಲ್ಲ ಶಿಫಾರಸ್ಸುಗಳನ್ನು ಅನುಸರಿಸಲಾಗುತ್ತಿದ್ದು, ರದ್ದಾದ ಟಿಕೆಟ್ ಮರುಪಾವತಿ ಮೇ 22ರವರೆಗೆ ಅನ್ವಯಿಸುತ್ತದೆ ಎಂದಿದ್ದಾರೆ.