ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿರುವ ವಿದ್ಯಾರ್ಥಿಸ್ನೇಹಿ ಉಪಕ್ರಮಗಳಾದ ಕಾಲೇಜು ಪೋರ್ಟಲ್, ಮೊಬೈಲ್ ಆ್ಯಪ್ ಮತ್ತು ಚಾಟ್ ಬಾಟ್ಗೆ ಚಾಲನೆ ನೀಡಲಾಗಿದೆ.
ಉನ್ನತ ಶಿಕ್ಷಣ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮೂರೂ ಉಪಕ್ರಮಗಳನ್ನು ಸಮರ್ಪಿಸಿ ಮಾತನಾಡಿದ ಸಚಿವ ಡಾ. ಎಂ.ಸಿ ಸುಧಾಕರ್ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಹಾಗೂ ಅಭ್ಯರ್ಥಿಸ್ನೇಹಿ ಆಗಿಸಲು ಕಾಲಕಾಲಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಪರೀಕ್ಷಾ ಪ್ರಾಧಿಕಾರ ಸದಾ ಮುಂದಿದೆ. ಉಪಕ್ರಮಗಳ ಪರಿಣಾಮ ನಿಖರವಾದ ಸಮಯದಲ್ಲಿ ಖಚಿತವಾದ ಮಾಹಿತಿ ಲಭ್ಯವಾಗುತ್ತದೆ. ಅನಗತ್ಯ ಗೊಂದಲಕ್ಕೆ ತೆರೆ ಬೀಳುತ್ತದೆ. ಮಧ್ಯವರ್ತಿಗಳ ಹಾವಳಿ ಕೂಡ ತಪ್ಪುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏನಿದು ಕಾಲೇಜು ಪೋರ್ಟಲ್?
ಅಭ್ಯರ್ಥಿಗಳು ಆಪ್ಷನ್ ದಾಖಲಿಸುವುದಕ್ಕೂ ಮುನ್ನ ಕಾಲೇಜು ಆಯ್ಕೆ ಪ್ರಮುಖ ಘಟ್ಟವಾಗಿದೆ. ಅಂತಹ ಸಂದರ್ಭದಲ್ಲಿ ಅಲ್ಲಿ- ಇಲ್ಲಿ ಕೇಳುವುದರ ಬದಲು ಕಾಲೇಜು ಪೋರ್ಟಲ್ನಲ್ಲೇ ಸಂಬಂಧಪಟ್ಟ ಕಾಲೇಜಿನ ಮಾಹಿತಿ ಲಭ್ಯವಾಗುವ ಹಾಗೆ ಮಾಡಲಾಗಿದೆ. ಇದನ್ನು ಕಾಲೇಜಿನವರೇ ಅಪ್ ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಕಾಲೇಜುಗಳಲ್ಲಿನ ಮೂಲಸೌಲಭ್ಯ, ಶೈಕ್ಷಣಿಕ ವಾತಾವರಣ, ಪ್ರಯೋಗಾಲಯ, ಗ್ರಂಥಾಲಯ, ಕೊಠಡಿ, ಹಾಸ್ಟೆಲ್, ಕೋರ್ಸ್ವಾರು ಶುಲ್ಕದ ವಿವರ, ಅತಿಥಿ ಉಪನ್ಯಾಸಕರು ಸೇರಿದಂತೆ ಖಾಯಂ ಸಿಬ್ಬಂದಿಗಳ ಮಾಹಿತಿ ಇತ್ಯಾದಿ ಪೂರ್ಣ ವಿವರಗಳು ಪೋರ್ಟಲ್ನಲ್ಲಿ ಲಭ್ಯ ಇರುತ್ತವೆ. ಎಷ್ಟೋ ಮಂದಿ ಕಾಲೇಜಿನ ಮಾಹಿತಿ ಇರುವುದಿಲ್ಲ. ಹೀಗಾಗಿ ಈ ರೀತಿಯ ಹೊಸ ಉಪಕ್ರಮ ಸೂಕ್ತ ಕಾಲೇಜುಗಳ ಆಯ್ಕೆಗೆ ನೆರವಾಗಲಿದೆ. ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರು ದಾಖಲಿಸುವುದಕ್ಕೂ ಇದೇ ಪೋರ್ಟಲ್ನಲ್ಲಿ ಲಿಂಕ್ ನೀಡುವ ಉದ್ದೇಶವೂ ಇದೆ. ನೇರವಾಗಿ ಶುಲ್ಕ ನಿಯಂತ್ರಣ ಸಮಿತಿಗೆ ದೂರು ಹೋಗುವ ಹಾಗೆ ಮಾಡಲಾಗುವುದು ಎಂದು ಹೇಳಿದರು.
ಕೆಇಎ ಮೊಬೈಲ್ ಆ್ಯಪ್ ಕೆಲಸವೇನು?
ಇದೇ ಮೊದಲ ಬಾರಿಗೆ ಮತ್ತಷ್ಟು ವಿದ್ಯಾರ್ಥಿ ಸ್ನೇಹಿಯಾಗುವ ಉಪಕ್ರಮದ ಭಾಗವಾಗಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾಮಾನ್ಯವಾಗಿ ಯುವಕರು ಆ್ಯಪ್ ಬಳಕೆ ಸ್ನೇಹಿಯಾಗಿರುತ್ತಾರೆ. ಹೀಗಾಗಿ ಇದನ್ನು ರೂಪಿಸಲಾಗಿದೆ. ವೆಬ್ ಸೈಟ್ ನಲ್ಲಿ ಲಭ್ಯವಾಗುವ ಎಲ್ಲ ಮಾಹಿತಿ ಈ ಆ್ಯಪ್ ನಲ್ಲಿ ಲಭ್ಯ ಇರುತ್ತದೆ. ಆ್ಯಪ್ ಮೂಲಕವೇ ಅರ್ಜಿ ಹಾಕುವುದು, ಆಪ್ಷನ್ ದಾಖಲಿಸುವುದು, ಛಾಯ್ಸ್ ಆಯ್ಕೆ, ಶುಲ್ಕ ಪಾವತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಮಾಡಬಹುದಾಗಿದೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡವರಿಗೆ ಕಾಲಕಾಲಕ್ಕೆ ಅಲರ್ಟ್ ಸಂದೇಶ ಕಳುಹಿಸುವ ವ್ಯವಸ್ಥೆ ಕೂಡ ಇರುತ್ತದೆ. ಗ್ರಾಮೀಣ ಭಾಗದ ಬಹುತೇಕ ಮಕ್ಕಳು ಸಿಇಟಿ ಅರ್ಜಿ ಭರ್ತಿ ಹಾಗೂ ಅನ್ ಲೈನ್ ಸೀಟು ಹಂಚಿಕೆ ಸಂಬಂಧದ ಪ್ರಕ್ರಿಯೆಗೆ ಸೈಬರ್ ಸೆಂಟರ್ ಗಳ ಮೇಲೆ ಹೆಚ್ವು ಅವಲಂಬನೆಯಾಗಿ ಅನೇಕ ತಪ್ಪುಗಳನ್ನು ಮಾಡಿಕೊಂಡು ಪರದಾಡುವ ಪರಿಸ್ಥಿತಿ ಇತ್ತು. ಹೀಗಾಗಿಯೇ ಇದಕ್ಕೊಂದು ಪರಿಹಾರವಾಗಿ ಮೊಬೈಲ್ ಆ್ಯಪ್ ರೂಪಿಸಿದ್ದು, ಬಹುತೇಕ ಎಲ್ಲ ಪ್ರಕ್ರಿಯೆಗಳನ್ನೂ ಅಭ್ಯರ್ಥಿಗಳೇ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
ಕೆಇಎ ಚಾಟ್ ಬಾಟ್ ವಿಶೇಷತೆ:
ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನ ಚಾಟ್ ಬಾಟ್ ವ್ಯವಸ್ಥೆ ಬಳಸಿ ಅಭ್ಯರ್ಥಿಗಳು ತಮ್ಮ ಪ್ರಶ್ನೆ/ಅನುಮಾನಗಳಿಗೆ ನೇರವಾಗಿ ಉತ್ತರ ಪಡೆಯಲು ಸಾಧ್ಯವಾಗುತ್ತದೆ. ಪ್ರಾಯೋಗಿಕವಾಗಿ ಆರಂಭಿಸಿದ ನಂತರ ಇದುವರೆಗೂ 1.35 ಲಕ್ಷ ಅಭ್ಯರ್ಥಿಗಳು ಇದರ ಮೂಲಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿರುವುದು ಇದು ಎಷ್ಟು ಉಪಯುಕ್ತ ಎನ್ನುವುದನ್ನು ತೋರಿಸುತ್ತದೆ. ಕೆಇಎ ಪ್ರಕಟಿಸುವ ಎಲ್ಲ ಮಾಹಿತಿಯನ್ನು ಚಾಟ್ ಬಾಟ್ ವ್ಯವಸ್ಥೆಗೆ ಅಪ್ ಲೋಡ್ ಮಾಡಲಾಗುತ್ತದೆ. ಅಭ್ಯರ್ಥಿಗಳು ತಾವು ಏನನ್ನು ಕೇಳಬೇಕೋ ಅದನ್ನು ಟೈಪ್ ಮಾಡಿದರೆ, ಅಪ್ ಲೋಡ್ ಮಾಡಲಾಗಿರುವ ಮಾಹಿತಿ ಆಧರಿಸಿ ಚಾಟ್ ಬಾಟ್ ಉತ್ತರ ಒದಗಿಸುತ್ತದೆ. ಇದರಿಂದ ಮಾಹಿತಿಗಾಗಿ ಕೆಇಎ ಕಚೇರಿಗೆ ಖುದ್ದು ಬರುವುದಾಗಲಿ ಅಥವಾ ಇತರ ಕಚೇರಿಗಳಿಗೆ ಅಲೆಯುವುದಾಗಲಿ ತಪ್ಪುತ್ತದೆ. ಕುಳಿತಲ್ಲೇ ಮಾಹಿತಿ ಪಡೆಯಲು ನೆರವಾಗುತ್ತದೆ ಎಂದು ವಿವರಿಸಿದರು.
ಕೌಶಲ ಶುಲ್ಕ ಪರಿಷ್ಕರಣೆ:
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ವಿವಿಧ ರೀತಿಯ ಕೌಶಲ ಆಧಾರಿತ ತರಬೇತಿಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಹಿಂದಿನ ಸರ್ಕಾರ ಅವಕಾಶ ನೀಡಿದ್ದು, ಅದನ್ನು ಮುಂದಿನ ವರ್ಷ ಪರಿಷ್ಕರಣೆ ಮಾಡಲಾಗುವುದು. ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಏನೆಲ್ಲ ತರಬೇತಿ ನೀಡಲಾಗುತ್ತಿದೆ ಎಂಬುದನ್ನು ಮುಂದಿನ ವರ್ಷದ ವೇಳೆಗೆ ಪರಿಶೀಲಿಸಿ, ಮತ್ತೊಮ್ಮೆ ಕೌಶಲ ಶುಲ್ಕ ನಿಗದಿಪಡಿಸಲಾಗುವುದು. ಕೆಲವು ಕಾಲೇಜುಗಳಲ್ಲಿ ಹೊಸ ಹೊಸ ತರಬೇತಿಗಳು ನೀಡುತ್ತಿದ್ದು, ಅದಕ್ಕೂ ಶುಲ್ಕ ಕೇಳುತ್ತಿದ್ದಾರೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕೆಇಎ ಬಳಿಕ ಕಾಮೆಡ್-ಕೆ ಸೀಟು ಹಂಚಿಕೆ:
ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ನಂತರವೇ ಕಾಮೆಡ್-ಕೆ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕು ಎನ್ನುವ ಸಲಹೆಗೆ ಕಾಮೆಡ್-ಕೆ ಒಪ್ಪಿಗೆ ಸೂಚಿಸಿದೆ. ಇದಲ್ಲದೆ, ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಭರ್ತಿಯಾಗದೆ ಉಳಿಯುವ ಅನೇಕ ವಿಭಾಗಗಳ ಎಂಜಿನಿಯರಿಂಗ್ ಸೀಟುಗಳ ಶುಲ್ಕವನ್ನು ಕಡಿಮೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಸಂಬಂಧ ಯಾವ ಕಾಲೇಜುಗಳಲ್ಲಿ, ಯಾವ ಕೋರ್ಸ್ಗೆ ಪ್ರವೇಶ ಕಡಿಮೆಯಾಗಿದೆ ಎಂಬುದನ್ನು ನೋಡಿಕೊಂಡು, ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಕಂಪ್ಯೂಟರ್ ಸೈನ್ಸ್ ಸೀಟು ಹೆಚ್ಚಳ ಪರೀಶೀಲನೆ:
ತೆಲಂಗಾಣ ರಾಜ್ಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಸೀಟುಗಳನ್ನು ಹೆಚ್ಚು ಮಾಡಲು ನಿರ್ಬಂಧ ವಿಧಿಸಿದ್ದು, ಆ ಬಗ್ಗೆ ಕೋರ್ಟ್ ಕೂಡ ಒಂದು ತೀರ್ಪು ನೀಡಿದೆ. ಇದನ್ನು ಪರಿಶೀಲಿಸಿ, ರಾಜ್ಯದಲ್ಲಿ ಆ ರೀತಿ ಮಾಡಿದರೆ ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆದಿದೆ. ಸೀಟ್ ಬ್ಲಾಕಿಂಗ್ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇ ಪೊಲೀಸ್ ಕಮಿಷನರ್ ಅವರನ್ನು ಕರೆಸಿ, ಹೆಚ್ಚುವರಿ ಮಾಹಿತಿ ಪಡೆಯಲಾಗುವುದು ಎಂದು ಹಲವು ಪ್ರಶ್ನೆಗಳಿಗೆ ಸಚಿವ ಸುಧಾಕರ್ ಉತ್ತರ ನೀಡಿದರು.
ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಮಾಹಿತಿ:
ಹೊಸ ವ್ಯವಸ್ಥೆ ಕೇವಲ ಇಂಗ್ಲಿಷ್ ನಲ್ಲಿ ಉತ್ತರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಮಾಹಿತಿ ಸಿಗುವ ಹಾಗೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ತಿಂಗಳೊಳಗೆ ಕನ್ನಡದ ಅವತರಣಿಕೆ ಕೂಡ ಆರಂಭಿಸಲಾಗುತ್ತದೆ. ಬಿಎಸ್ಎನ್ಎಲ್ ಇದರ ನಿರ್ವಹಣೆ ಮಾಡುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದರು.