Column

ತಿರಂಗ ಯಾತ್ರೆ- ವೀರ ಸೈನಿಕನಿಗೆ ನಿಜವಾದ ನಮನ

Share It

ಲೇಖನ: ರೇಣುಕಾ ದೇಸಾಯಿ, ಭಾರತೀಯ ಸ್ಟೇಟ್ ಬ್ಯಾಂಕ್, ನಿವೃತ್ತ ಅಧಿಕಾರಿ, 9535147455

“ವೀರ ಸೈನಿಕರ ಪರಾಕ್ರಮ ನಮ್ಮ ಸೋದರಿಯರ ಸಿಂಧೂರಕ್ಕೆ ಸಮರ್ಪಣೆ” ಎಂದರು ಮೋದಿಜಿ, “ಭಾರತದ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು” ಎಂದು ತ್ರಿವರ್ಣ ಧ್ವಜ ಹಿಡಿದು ರಸ್ತೆಯುದ್ದಕ್ಕೂ ನಡೆದಿದ್ದಾರೆ, ಮಹಾನಗರ ಬೆಂಗಳೂರಿನ ಸಹಸ್ರ ಸಹಸ್ರ ನಾಗರಿಕರು.

ಗುರುವಾರ ಬೆಳಗ್ಗೆ ಸರಿಸುಮಾರು 11 ಘಂಟೆಗೆ, ಬೆಂಗಳೂರಿನ, ಮಲ್ಲೇಶ್ವರದ, ಶಿರೂರು ಪಾರ್ಕ್ ಪ್ಲೇ ಗ್ರೌಂಡ್ ನಿಂದ ಹೊರಟ ತಿರಂಗಾ ಯಾತ್ರೆ ಮುಟ್ಟಬೇಕಾಗಿದ್ದು ಇದೆ ಮಲ್ಲೇಶ್ವರದ 18 ನೇ ಕ್ರಾಸ್ ನಲ್ಲಿರುವ ಆಟದ ಮೈದಾನಕ್ಕೆ. ಇವೆರಡರ ಅಂತರ ಸರಿಸುಮಾರು 2 ಕಿಲೋಮೀಟರ್ ಇದ್ದು, ಕೊನೆಯ ನಾಗರಿಕ ಇನ್ನೂ ಶಿರೂರ ಪಾರ್ಕ್ ನಲ್ಲಿದ್ದರೆ ಮೊದಲನೆಯವ ಆಗಲೇ 18 ನೇ ಕ್ರಾಸ್ ನಲ್ಲಿರುವ ಆಟದ ಮೈದಾನ ತಲುಪಿದ್ದ. ಹಾಗೇನೇ ತಿರಂಗದ ಕೊನೆಯ ಅಂಚು 12 ನೇ ಕ್ರಾಸ್ ನಲ್ಲಿದ್ದರೆ, ಮೊದಲ ತುದಿ, 18 ನೇ ಕ್ರಾಸ್ ನಲ್ಲಿರುವ ಆಟದ ಮೈದಾನದಲ್ಲಿತ್ತು.

ಅಂತಹ ಉದ್ದನೆಯ ತಿರಂಗ ಹಿಡಿದು ಮಕ್ಕಳು, ಮಹಿಳೆಯರೇ ಜಾಸ್ತಿ ಇದ್ದ ಬೃಹತ್ ಮೆರವಣಿಗೆ ಸಡಗರದಿಂದ ಸಂಭ್ರಮದಿಂದ ಹೊರಟ ಸಹಸ್ರ ಕೈ ಗಳಲ್ಲಿ ತ್ರಿವರ್ಣ ಧ್ವಜ, ಮನಸ್ಸಿನಲ್ಲಿ ಅಧ್ಯಮ ಉತ್ಸಾಹ, ದೊಡ್ಡ ಸ್ವರದಲ್ಲಿ ಜೈ ಭಾರತ ಮಾತೆ. . . . . ., ಜೈ ಜೈ ವೀರ ಸೈನಿಕ ಎನ್ನುವ ಘೋಷಣೆ ಮುಗಿಲು ಮುಟ್ಟಿತ್ತು, ಹರ್ಷೋದ್ಗಾರ ಎಲ್ಲೆಡೆ ತುಂಬಿತ್ತು.

ಇದರ ಮುಂದಾಳತ್ವ ಹಲವು ಸಂಘ ಸಂಸ್ಥೆಗಳು ವಹಿಸಿಕೊಂಡಿದ್ದವು. ಯಾತ್ರೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. 103 ವರ್ಷದ ವೃದ್ಧೆ ಶಿವಮ್ಮ ನಮ್ಮೊಂದಿಗೆ ಸೈನಕರಿಗೆ ಜಯಕಾರ ಹಾಕಿದ್ದು ವಿಶೇಷವಾಗಿತ್ತು. ಶಾಲಾ ಕಾಲೇಜ್ ವಿಧ್ಯಾರ್ತಿಗಳಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಎಲ್ಲೆಲ್ಲೂ ಉತ್ಸಾಹ ತುಂಬಿತ್ತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿ. ಟಿ. ರವಿ, ಮುನಿರತ್ನ ಇನ್ನಿತರರು ತಿರಂಗ ಯಾತ್ರೆಯಲ್ಲಿದ್ದರು. ಜೊತೆಗೆ ಮಾಜಿ ಸೈನಿಕರು, ಬಂದಿದ್ದು, ಆಪರೇಷನ್ ಸಿಂದೂರನಲ್ಲಿ ಭಾಗವಹಿಸಿ ತಾಯ್ನಾಡಿಗೆ ವಿಜಯ ತಂದುಕೊಟ್ಟ ವೀರಯೋಧರಿಗೆ ನಮನ ಸಲ್ಲಿಸಿದ್ದು ಮೈನವಿರೇಳಿಸುವಂತಿತ್ತು.

ಔಪಚಾರಿಕವಾಗಿ ಮಾಜಿ ಸೈನಿಕ ಮುರಳಿಯವರ ಮಾತನಾಡಿ ಆಪರೇಷನ್ ಸಿಂದೂರನ ಬಗೆಗೆ ಕ್ಲುಪ್ತವಾಗಿ ವಿವರ ನೀಡಿದರು. “ಆಪರೇಷನ್ ಸಿಂದೂರನ ನಲ್ಲಿ ಮಹಿಳೆಯರದೆ ಮುಂದಾಳತ್ವ ಇತ್ತು, ಈ ಸಲ ಪಾಕಿಸ್ತಾನಕ್ಕೆ ಮಹಿಳೆಯರೇ ಪಾಠ ಕಲಿಸಿದ್ದಾರೆ, ಇವರಿಗೆಲ್ಲ ವಂದನೆ ಸಲ್ಲಿಸೋಣ ಎಂದರು, ಪಹಲ್ಗಾಮ ದಾಳಿಯು ಅಮಾಯಕರ ಮೇಲಿನ ಕಗ್ಗೊಲೆ, ಧರ್ಮ ಕೇಳಿ ನಡೆಸಿದ ಕಗ್ಗೊಲೆ ಇದಕ್ಕೆ ತಕ್ಕ ಉತ್ತರ ನಮ್ಮ ಸೈನಿಕರು ನೀಡಿದ್ದಾರೆ, ಅವರಿಗೆ ನಮನ ಸಲ್ಲಿಸಲು ಈ ತಿರಂಗಾ ಯಾತ್ರೆ ಪ್ರಾರಂಭವಾಗುತ್ತದೆ ಎಂದು ಹೇಳಿದರು. ಅವರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ವೀರ ಸೇನಾನಿ ಕೂಡ ಆಗಿರುವುದು ಈಗ ಸೈನ್ಯದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವದು ಗಮನಾರ್ಹ ಸಂಗಾತಿಯಾಗಿ ಕಂಡು ಬಂದಿತು.

ಯಾತ್ರೆ ಜಯಘೋಷದಿಂದ ಹೊರಟಿರುವುದನ್ನು ರಸ್ತೆಯ ಇಕ್ಕೆಲಗಳಲ್ಲಿ ಜಸ್ತೋಮ ಹರ್ಷದಿಂದ ವೀಕ್ಷಿಸಿತು, ಅಲ್ಲಲ್ಲಿ ಯಾತ್ರಿಕರಿಗೆ ನೀರು ಇಟ್ಟಿದ್ದರು, ನೀರಿನ ಬಾಟಲಿ, ಮಜ್ಜಿಗೆ ಪ್ಯಾಕೇಟು ತಂದು ತಂದು ಕೊಟ್ಟು ದೇಶ ರಕ್ಷಣೆ ಮಾಡಿದ ಯೋಧರೊಂದಿಗೆ ನಾವು ಇದ್ದೇವೆ, ನಮ್ಮ ಪಾಲಿನ ಅಲ್ಪ ಭಾಗವಹಿಸುವಿಕೆ ಇದು ಎನ್ನುವ ಸಂದೇಶ ಹೆಮ್ಮೆ ಮೂಡಿಸಿತು.


Share It

You cannot copy content of this page