ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ್ದ 11 ಮಂದಿ ಅಭಿಮಾನಿಗಳ ಕಾಲ್ತುಳಿತ ಪ್ರರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ರದ್ದುಗೊಳಿಸುವಂತೆ ಕೋರಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಗೆ ರಿಲೀಫ್ ಸಿಕ್ಕಿದೆ.
ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಮತ್ತು ಇತರ ಕೆಲ ಪದಾಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ಕುರಿತು ಶುಕ್ರವಾರದ ಹೈಕೋರ್ಟ್ ಅಭಿಪ್ರಾಯ ಅರ್ಜಿದಾರರಾದ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ. ಶಂಕರ್, ಖಜಾಂಚಿ ಇ.ಎಸ್. ಜೈರಾಮ್ ಅವರುಗಳಿಗೆ ಸಮಾಧಾನವನ್ನು ನೀಡಿದೆ.
ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ಪೀಠದ ವಿಚಾರಣೆಯ ವೇಳೆ ಕೆಎಸ್ಸಿಎ ಪರ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸುತ್ತಾ, ಈವರೆಗೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರ್ಸಿಬಿ, ಕಾರ್ಯಕ್ರಮ ಆಯೋಜಕ ಸಂಸ್ಥೆ ಡಿಎನ್ಎ ಎಂಟರ್ಟೈನ್ಮೆಂಟ್ ಪ್ರೈ.ಲಿ ಮತ್ತು ಕೆಎಸ್ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಸ್ಥೆಗಳ ಪ್ರತಿನಿಧಿಗಳ ಕಡೆಯಿಂದ ಕಾಲ್ತುಳಿತ ಘಟನೆ ಸಂಭವಿಸಿರುವುದು ಜವಾಬ್ದಾರಿ ಮತ್ತು ಅಜಾಗರೂಕತೆ ಕಂಡುಬಂದಿದೆ ಎಂದು ಸರ್ಕಾರ ಹೇಳಿದೆ, ಸಂಬಂಧಪಟ್ಟವರನ್ನು ಕೂಡಲೇ ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ, ಮ್ಯಾಜಿಸ್ಟ್ರಿಯಲ್ ತನಿಖೆಯಾಗುತ್ತಿದೆ. ಸಿಐಡಿಯಿಂದಲೂ ತನಿಖೆಯಾಗುತ್ತಿದೆ ಆದ್ದರಿಂದ ಎಫ್ಐಆರ್ ಗೆ ತಡೆ ನೀಡಬೇಕು ಎಂದು ಕೋರಿದರು.
ಇದಕ್ಕೆ ನ್ಯಾಯಮೂರ್ತಿಗಳು, ಸದ್ಯ ಪ್ರಕರಣದ ಯಾವುದೇ ತನಿಖೆಗೆ ತಡೆ ನೀಡುವುದಿಲ್ಲ. ಯಾವ ರಕ್ಷಣೆಯ ಅಗತ್ಯವೆಂದು ಮುಂದೆ ನೋಡೋಣ ಎಂದರು. ಇನ್ನೂ ಪ್ರಕರಣದಲ್ಲಿ ಆರೋಪಿಗಳು ವಿಚಾರಣೆಗೆ ಸಹಕರಿಸಬೇಕು ಹಾಗೂ ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗಬಾರದು ಎಂಬ ಷರತ್ತು ವಿಧಿಸಿ, ಕೆಎಸ್ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತದ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.