Health News

ವೈದ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಹಾಜರಿರಬೇಕು: ಗಮನಸೆಳೆಯುತ್ತಿದೆ ಆರೋಗ್ಯ ಇಲಾಖೆ ಸುತ್ತೋಲೆ

Share It

ಬೆಂಗಳೂರು: ವೈದ್ಯರು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಜನವರಿಯಲ್ಲಿ ಆರೋಗ್ಯ ಇಲಾಖೆಯ ಹೊರಡಿಸಿರುವ ಸುತ್ತೋಲೆ ಸದ್ಯ ಎಲ್ಲರ ಗಮನಸೆಳೆಯುತ್ತಿದೆ.

ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಹಾವಳಿ ಕೂಡ ಎಲ್ಲೆಡೆ ಜಾಸ್ತಿಯಾಗಿದೆ. ಆದರೆ ರಾಜ್ಯ ಸರ್ಕಾರ ತನ್ನ ಆರೋಗ್ಯ ನೀತಿಯ ಪ್ರಕಾರ ವಿವಿಧ ಹಂತದ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು/ಜಿಲ್ಲಾ ಆಸ್ಪತ್ರೆಗಳ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದು, ಅಲ್ಲೆಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಆರೋಗ್ಯ ಸೇವೆಗಳ ಕನಿಷ್ಠ ಅವಶ್ಯಕ ಕಾರ್ಯಕ್ರಮಗಳಾದ ರೋಗನಿರೋಧಕ ಸೇವೆಗಳು, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳ ನಿವಾರಣೆ ಮತ್ತು ನಿರ್ಮೂಲನ ಕಾರ್ಯಕ್ರಮಗಳು, ಪರಿಸರ ಸ್ವಚ್ಚತೆ, ಪೌಷ್ಠಿಕ ಆಹಾರ ಸೇವನೆ, ಆರೋಗ್ಯ ಶಿಕ್ಷಣ ಮತ್ತು ಶಾಲಾ ಆರೋಗ್ಯ ಸೇವೆಗಳು, ಪ್ರಯೋಗಾಲಯ ಸೇವೆಗಳು ಹಾಗೂ ಇನ್ನೂ ಅನೇಕ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಒದಗಿಸಲಾಗುತ್ತಿದೆ.

ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಾಗೂ ತುರ್ತು ಸೇವೆಗಳನ್ನು ಸಕಾಲದಲ್ಲಿ ಒದಗಿಸುವ ಸಲುವಾಗಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ಸಹ ಕಲ್ಪಿಸಲಾಗಿದೆ. ವಸತಿ ಗೃಹ ಲಭ್ಯವಿಲ್ಲದ ಕಡೆ ಕೇಂದ್ರ ಸ್ಥಾನದಲ್ಲಿ ವಾಸಿಸಲು ಸೌಲಭ್ಯವನ್ನು ನೀಡಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ಸರ್ಕಾರ ಒದಗಿಸಿದ ನಿಯೋಜಿತ ವಸತಿ ಗೃಹಗಳಲ್ಲಿ ವಾಸ್ತವ್ಯವಿರದೇ ಕಟ್ಟಡಗಳು ಶಿಥಿಲಗೊಂಡು ದುರಸ್ತಿ ಮಾಡದಷ್ಟು ಹಾಳಾಗುತ್ತಿದ್ದು, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ವಿದ್ಯುಚ್ಛಕ್ತಿ ಬಿಲ್‌ಗಳನ್ನು ನಿಯಮಿತವಾಗಿ ಭರಿಸದೇ ಹೆಚ್ಚಿನ ಬಾಕಿ ಉಳಿಸಿಕೊಳ್ಳಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತುರ್ತು ಸೇವೆ ವ್ಯಾಪ್ತಿಗೆ ಒಳಪಡುತ್ತಿದ್ದು, ವೈದ್ಯರು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರದೇ ಇರುವುದರಿಂದ ಸಾರ್ವಜನಿಕರು ಸಕಾಲದಲ್ಲಿ ವೈದ್ಯಕೀಯ ತುರ್ತು ಸೇವೆ ಪಡೆಯಲು ವಂಚಿತರಾಗುತ್ತಿದ್ದಾರೆ, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಂದ ಪದೇ ಪದೇ ಅನೇಕ ಮನವಿ/ದೂರುಗಳು ಸ್ವೀಕೃತವಾಗುತ್ತಿದೆ ಹಾಗೂ ಇದರೊಂದಿಗೆ ವಸತಿ ಗೃಹ ಒದಗಿಸಿರುವ ಉದ್ದೇಶ ವಿಫಲವಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರಿಗೆ ಚಿಕಿತ್ಸೆಯನ್ನು ಸಕಾಲದಲ್ಲಿ ನೀಡದೇ ಹಲವಾರು ಸಾವು, ನೋವುಗಳು ಸಂಭವಿಸುತ್ತಿದ್ದು, ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಋಣಾತ್ಮಕ ಭಾವನೆ ಉಂಟಾಗುತ್ತಿದೆ.

ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ 1966 ನಿಯಮ 19ರ ಪ್ರಕಾರ ಪ್ರತಿ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಣೆಗಾಗಿ ಸರ್ಕಾರ ನೀಡಿರುವ ಸವಲತ್ತುಗಳನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಹಾಗೂ ಅದೇ ನಿಯಮಾವಳಿಗಳ ನಿಯಮ 3ರ ಪ್ರಕಾರ ಸರ್ಕಾರಿ ನೌಕರನು ಯಾವಾಗಲೂ ಸರ್ಕಾರಿ ನೌಕರನಿಗೆ ತಕ್ಕದಲ್ಲದಂತಹ ಯಾವುದೇ ಕಾರ್ಯವನ್ನು ಮಾಡುವಂತಿಲ್ಲ.

ನಿಯಮಗಳನ್ನು ಸಂಬಂಧಪಟ್ಟ ವೈದ್ಯರು/ಸಿಬ್ಬಂದಿಗಳ ಗಮನಕ್ಕೆ ತರುತ್ತಾ, ಸರ್ಕಾರವು ಕಲ್ಪಿಸಿರುವ ಸರ್ಕಾರಿ ಸೌಕರ್ಯವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಕಡ್ಡಾಯವಾಗಿ ವಸತಿ ಗೃಹ/ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡುವುದು ಹಾಗೂ ಸಾರ್ವಜನಿಕರ ತುರ್ತು ಸೇವೆಯಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೇಂದು ಈ ಮೂಲಕ ತಿಳಿಸಲಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟ ವೈದ್ಯರು/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ತಿಳಿಸಿದ್ದಾರೆ.


Share It

You cannot copy content of this page