News

ಅಪರಾಧ ತನಿಖೆ ಮತ್ತು ಆರೋಪಿ ಬಂಧನ ಪ್ರಕ್ರಿಯೆ ಹೇಗಿರಬೇಕು

Share It

ಲೇಖಕರು: ಎಸ್.ಎಚ್ ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು
ಆರೋಪಿಯ ಬಂಧನ ಒಂದು ಕಾನೂನು ಪ್ರಕ್ರಿಯೆ. ಎಲ್ಲ ಪ್ರಕರಣಗಳಲ್ಲಿ ಆರೋಪಿ ಬಂಧನ ಮಾಡಲೇ ಬೇಕು ಅಂತ ಇಲ್ಲ. ಆದರೆ ಗಂಭೀರ ಪ್ರಕರಣಗಳಲ್ಲಿ ಬಂಧನ ಅಗತ್ಯವಾಗಬಹುದು.

ದೂರು ಕೊಟ್ಟ ಕೂಡಲೇ ಆರೋಪಿ ಬಂಧಿಸಬೇಕು ಎಂದು ದೊರು ಕೊಟ್ಟವರು ಒತ್ತಾಯಿಸುವುದು ಸಹಜ. ಆರೋಪಿ ಬಂಧನವಾಗಿ ಬಿಟ್ಟರೆ ದೂರು ಕೊಟ್ಟವರಿಗೆ ಸಮಾಧಾನ.

ಮುಂದೆ ಆರೋಪಿಗೆ ಶಿಕ್ಷೆ ಆಗಲಿ ಬಿಡಲಿ ಅವರಿಗೆ ಬೇಕಾಗಿಲ್ಲ. ಆದರೆ ನಿಜವಾಗಿಯೂ ಕಾನೂನು ನ್ಯಾಯ ವ್ಯವಸ್ಥೆ ಪರಿಣಾಮಕಾರಿ ಆಗಬೇಕಾದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ಅಪರಾಧ ತನಿಖೆಯಲ್ಲಿ ಬಂಧನ ಕೇವಲ ಸಾಕ್ಷಿ ಸಂಗ್ರಹಣೆ ಮತ್ತು ಮುಂದಿನ ನ್ಯಾಯಾಲಯದಲ್ಲಿ ನಡೆಯುವ ಕಲಾಪಗಳಿಗೆ ಪೂರಕ ಕ್ರಮ ಮಾತ್ರ. ಅದು ಶಿಕ್ಷೆಯಲ್ಲ ಎನ್ನುವದು ಗಮನಾರ್ಹ.

ಶಿಕ್ಷೆಯಲ್ಲದ ಬಂಧನ ಮಾಡುವಾಗ ಅಗತ್ಯತೆ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಅಗತ್ಯತೆ ಗಮನಿಸಿ ಬಂಧಿಸುವದು ಅಥವಾ ಬಂಧಿಸದೇ ಇರುವದು ಪ್ರಾಮಾಣಿಕ ತನಿಖಾಧಿಕಾರಿಗಳಿಗೆ ಬಿಟ್ಟ ವಿಷಯ.

ಇಲ್ಲಿ ಪ್ರಾಮಾಣಿಕ ತನಿಖಾಧಿಕಾರಿ ಎಂದರೆ ಯಾರು ಎನ್ನುವದು ಪ್ರಶ್ನೆ. ಯಾರು ಒತ್ತಡ ಇಲ್ಲದೇ ಕಾನೂನು ಪ್ರಕಾರ ತನಿಖೆ ಮಾಡುವಾಗ ಬಂಧನದ ನೈಜ ಅವಶ್ಯಕತೆಯನ್ನು ಪ್ರಾಮಾಣಿಕವಾಗಿ ಪರಾಮರ್ಶೆ ಮಾಡಿ ಬಂಧನ ಮಾಡುವರೋ ಅವರೇ ಪ್ರಾಮಾಣಿಕ ತನಿಖಾಧಿಕಾರಿ.

ಆದರೆ ಇಂದು ಪ್ರಾಮಾಣಿಕ ಪೊಲೀಸರು ಇಲ್ಲವೆಂದಲ್ಲ. ಆದರೆ ಅವರು ಅತೀ ಕಡಿಮೆ ಪ್ರಮಾಣದಲ್ಲಿದ್ದಾರೆ. ಇನ್ನೂ ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಾಮಾಣಿಕರು ಅಪಾಯದ ಅಂಚಿನಲ್ಲಿರುವ ಮನುಜ ಸಂಕುಲದಂತೆ ನಶಿಸಿಹೋಗುವ ಅಪಾಯ ದಿನೇ ದಿನೇ ಹೆಚ್ಚಾಗುತ್ತಿದೆ.

ಸಮಾಜಕ್ಕೆ ಸುರಕ್ಷತೆ ಭರವಸೆ ನೀಡಿ, ಸಮಾಜವನ್ನು ಕಾಯುವ ಪೊಲೀಸ್ ವ್ಯವಸ್ಥೆ ಇಂದು ಜನರ ವಿಶ್ವಾಸ ಎಷ್ಟರ ಮಟ್ಟಿಗೆ ಉಳಿಸಿಕೊಂಡಿದೆ ಎನ್ನುವದು ಚರ್ಚಾರ್ಹ ವಿಷಯ.

ಕಾನೂನು ಪ್ರಕಾರ ಬಂಧನ ಅಗತ್ಯವಾದರೆ ಅದನ್ನು ವಿರೋಧಿಸುವುದು ಶುದ್ಧ ತಪ್ಪು. ಇನ್ನೂ, ವಿನಾ ಕಾರಣ ಬಂಧಿಸಿದರೆ ಅದನ್ನು ಸಮರ್ಥಿಸುವುದು ಕೂಡಾ ಅಷ್ಟೇ ತಪ್ಪು.

ಈ ಹಿನ್ನೆಲೆಯಲ್ಲಿ ನಾವು ಇಂದಿನ ವಿದ್ಯಮಾನಗಳನ್ನು ನೋಡಿದರೆ, ಬಂಧನದ ವಿಷಯದಲ್ಲಿ ನಡೆಯುವ ಪರ- ವಿರೋಧ ಪ್ರತಿಭಟನೆ ನೋಡಿದರೆ ಬಂಧನಗಳು ಕಾನೂನು ಚೌಕಟ್ಟಿನಲ್ಲಿ ನಡೆಯದೇ ಬೇರೆ ರೀತಿ ನಡೆಯುತ್ತವೆ ಎಂಬ ಭಾವನೆ ಸೃಷ್ಟಿ ಮಾಡುತ್ತವೆ.

ಜೋಗಿಂದರ ಕುಮಾರ್ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಬಂಧನದ ಅಧಿಕಾರ ಮತ್ತು ಅಗತ್ಯತೆ ಬಗ್ಗೆ ತುಂಬಾ ಮಾರ್ಮಿಕವಾಗಿ ಅವಲೋಕನ ಮಾಡಿದೆ. ಪೊಲೀಸರಿಗೆ ತನಿಖೆಯಲ್ಲಿ ಆರೋಪಿ ಬಂಧಿಸುವ ಅಧಿಕಾರ ಇದೆ. ಆದರೆ ಎಲ್ಲ ಪ್ರಕರಣಗಳಲ್ಲಿ ಬಂಧಿಸುವ ಅಗತ್ಯ ಇಲ್ಲ. ಅಗತ್ಯ ಇರುವಾಗ ಬಂಧಿಸಿದರೆ ಅದು ಕಾನೂನು ಪ್ರಕಾರ ಬಂಧನವಾಗುತ್ತದೆ. ಆದರೆ ಅಗತ್ಯ ಇಲ್ಲದೇ ಬಂಧನ ಮಾಡಿದರೆ ಅದು ಕಾನೂನು ಹೆಸರಲ್ಲಿ ಬಂಧನವಾಗುತ್ತದೆ.

ಹಾಗಾದರೆ ಕಾನೂನು ಮತ್ತು ನೈತಿಕತೆಗೆ ಏನಾದರೂ ಸಂಬಂಧ ಇದೆಯೇ ಎನ್ನುವುದನ್ನು ನೋಡೋಣ. ಕಾನೂನು ಪ್ರಕಾರ ಕೆಲಸ ಮಾಡುವವರು ನೈತಿಕತೆ ಪಾಲಿಸುತ್ತಾರೆ. ಆದರೆ ಕಾನೂನು ಹೆಸರಲ್ಲಿ ಮಾಡುವವರು ನೈತಿಕತೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಇಂದು ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ವ್ಯವಸ್ಥೆಯಲ್ಲಿ, ನೈತಿಕತೆ ಬಗ್ಗೆ ಮಾತಾಡುವುದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ.

ಇಂದು ಯಾವುದೇ ಬಂಧನವಾದರೂ ಅದಕ್ಕೆ ರಾಜಕೀಯ ಸೋಂಕು ತಗುಲಿ ಪ್ರತಿಭಟನೆಗೆ ಪ್ರಚೋದನೆ ನೀಡುತ್ತದೆ. ಇದರಿಂದ ಇಡೀ ಕಾನೂನು ನ್ಯಾಯ ಮತ್ತು ಆಡಳಿತ ಎನ್ನುವ ಪರಿಕಲ್ಪನೆಗೆ ದಕ್ಕೆ ತಗಲುತ್ತದೆ.

ಕಾನೂನು ರೈಲು ನೈತಿಕತೆ ಕಂಬಿ ಮೇಲೆ ಓಡಿದರೆ ಅದು ಸುರಕ್ಷಿತವಾಗಿ ನಿರ್ಧಿಷ್ಟ ಗುರಿ ತಲುಪುತ್ತದೆ. ಇದು ಪ್ರಜಾಪ್ರಭುತ್ವದ ಯಶಸ್ಸಿಗೆ ಭದ್ರ ಬುನಾದಿ.


Share It

You cannot copy content of this page