ರಾಜ್ಯ ಹೈಕೋರ್ಟ್ಗೆ ನ್ಯಾಯಮೂರ್ತಿಗಳನ್ನು ಶೀಘ್ರವೇ ನೇಮಕ ಮಾಡುವಂತೆ ಬೆಂಗಳೂರು ವಕೀಲರ ಸಂಘ (ಎಎಬಿ) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೆ ಪತ್ರ ಬರೆದಿದೆ.
ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡದೇ ಇರುವುದರಿಂದ ಹಾಲಿ ನ್ಯಾಯಮೂರ್ತಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಹೈಕೋರ್ಟ್ನಲ್ಲಿ ನ್ಯಾಯಾಧೀಶರ ಸಂಖ್ಯೆ ಕಡಿಮೆಯಾಗುತ್ತಿದೆ. ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂರು ಪೀಠಗಳಲ್ಲಿನ ಹಾಲಿ ನ್ಯಾಯಮೂರ್ತಿಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡುವಂತಾಗಿದೆ. ಸಾವಿರಾರು ಸಿವಿಲ್ ಪ್ರಕರಣಗಳು ಹಲವು ವರ್ಷಗಳಿಂದ ಬಾಕಿ ಉಳಿದಿವೆ ಎಂದು ಎಎಬಿ ಪತ್ರದಲ್ಲಿ ವಿವರಿಸಿದೆ.
ನ್ಯಾಯಮೂರ್ತಿಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡಿದರೂ ಕಾರ್ಯಭಾರದ ಒತ್ತಡದಿಂದಾಗಿ ರಿಟ್ ವಿಭಾಗದಲ್ಲಿ ಬಿ ಗುಂಪಿನ ಪ್ರಕರಣಗಳನ್ನು ಪಟ್ಟಿ ಮಾಡದೇ ಇರುವುದರಿಂದ ದಾವೆದಾರರು ಅನಿರ್ದಿಷ್ಟಾವಧಿಗೆ ಕಾಯುವಂತಾಗಿದೆ. ಹೀಗಾಗಿ, ತುರ್ತಾಗಿ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಅಲ್ಲದೇ ಹೈಕೋರ್ಟ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಮಾಜದ ವಿವಿಧ ಸಮುದಾಯಗಳಿಗೆ ಅವಕಾಶ ಕಲ್ಪಿಸಿ, ಅಂಥ ಹೆಸರುಗಳನ್ನು ಶಿಫಾರಸ್ಸು ಮಾಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಕೊಲಿಜಿಯಂನ ಇತರೆ ಸದಸ್ಯರಿಗೆ ನಿರ್ದೇಶಿಸಬೇಕು. ಜತೆಗೆ ನೇಮಕಾತಿಯನ್ನು ತುರ್ತಾಗಿ ನಡೆಸಬೇಕು ಎಂದು ಸಿಜೆಐಗೆ ಎಎಬಿ ಮನವಿ ಮಾಡಿದೆ.