ರೈತರು ಬೆಳೆ ರಕ್ಷಣೆಗಾಗಿ ಜಮೀನಿಗೆ ವಿದ್ಯುತ್ ತಂತಿ ಅಳವಡಿಸಿದ್ದಾಗ ಅದರ ಸ್ಪರ್ಶದಿಂದ ವನ್ಯ ಜೀವಿ ಮೃತಪಟ್ಟರೆ, ಪ್ರಾಣಿಗಳನ್ನು ಬೇಟೆಯಾಡಿದ ಆರೋಪದಡಿ ಶಿಕ್ಷೆ ವಿಧಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಇದೇ ವೇಳೆ ಕಳ್ಳ ಬೇಟೆ ಆರೋಪದಡಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಶಿಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಇದರ ಹೊರತಾಗಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಪ್ರಾಣಿಯ ಸಾವಿಗೆ ಕಾರಣವಾದ ಆರೋಪದಡಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮೈಸೂರಿನ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದು ಕೋರಿ ಎಚ್.ಡಿ ಕೋಟೆಯ ದೊಡ್ಡಬರಗಿ ಗ್ರಾಮದ ವೆಂಕಟೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: 2008ರ ಜನವರಿ 1ರಂದು ದೊಡ್ಡಬರಗಿ ಗ್ರಾಮದ ಕಾಡಂಚಿನ ಪ್ರದೇಶದಲ್ಲಿ ವೆಂಕಟೇಶ್ ಅವರ ಕಬ್ಬಿನ ಗದ್ದೆಯಲ್ಲಿ ಆನೆಯೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು ಬೆಳಕಿಗೆ ಬಂದಿತ್ತು. ಆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ವೆಂಕಟೇಶ್ ವಿರುದ್ಧ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಆರೋಪದಡಿ ವಿದ್ಯುತ್ ಕಾಯ್ದೆ ಸೆಕ್ಷನ್ 138(1)a ಹಾಗೂ ಐಪಿಸಿ ಸೆಕ್ಷನ್ 429 ಮತ್ತು ವನ್ಯ ಜೀವಿ ಸಂರಕ್ಷಣೆ ಕಾಯ್ದೆ 51ರ ಅಡಿಯಲ್ಲಿ ವೆಂಕಟೇಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ನಂತರ ತನಿಖೆ ನಡೆಸಿ ಮೈಸೂರಿನ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ವೆಂಕಟೇಶ್ ಗೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ವೆಂಕಟೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಪ್ರಾಣಿ ಬೇಟೆಯಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅಧಿಕಾರಿಗಳು ರೈತನನ್ನು ಪ್ರಕರಣದಲ್ಲಿ ಸಿಲುಕಿಸಲು ಮನಸ್ಸಿಗೆ ತೋಚಿದಂತೆ ಕೇಸು ದಾಖಲಿಸಿದ್ದಾರೆ ಎಂದಿದ್ದರು.
ವಾದ ಆಲಿಸಿದ ಹೈಕೋರ್ಟ್, ಜಮೀನಿನಲ್ಲಿ ಬೆಳೆ ರಕ್ಷಣೆಗೆ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿ ಆನೆ ಸಾವಿಗೆ ಕಾರಣವಾಗಿದ್ದನ್ನು ಅಭಯಾರಣ್ಯದಲ್ಲಿ ವನ್ಯ ಜೀವಿ ಬೇಟೆಯಾಡಿದ್ದಾರೆ ಎಂದು ಪರಿಗಣಿಸಲಾಗದು. ಅದೇ ರೀತಿ ಪ್ರಾಣಿಯನ್ನು ಕೊಲ್ಲುವುದಕ್ಕಾಗಿಯೇ ಜಮೀನಿಗೆ ಬೇಲಿ ಹಾಕಿದ್ದಾರೆಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ವನ್ಯ ಜೀವಿ ಸಂರಕ್ಷಣೆ ಕಾಯ್ದೆ ಅಡಿ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದೆ.
ಆದರೆ, ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿದ್ದರಿಂದ ಅದನ್ನು ಸ್ಪರ್ಶಿಸಿ ವನ್ಯ ಜೀವಿಯೊಂದು ಮೃತಪಟ್ಟಿದೆ. ಈ ರೀತಿಯ ಘಟನೆಯೊಂದು ನಡೆಯಬಹುದು ಎಂಬುದು ತಿಳಿದೂ ಅವರು ಅಳವಡಿಸಿದ್ದಾರೆ. ಹೀಗಾಗಿ ಪ್ರಾಣಿಯ ಸಾವಿಗೆ ಆರೋಪಿ ಹೊಣೆಗಾರರಾಗಿದ್ದು ವಿದ್ಯುತ್ ಕಾಯ್ದೆ ಮತ್ತು ಐಪಿಸಿ ಅಡಿ ವಿಧಿಸಿರುವ ಶಿಕ್ಷೆ ಸಮಂಜಸವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
(CRIMINAL APPEAL NO. 726 OF 2011)