ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಯನ್ನು ಸೆ.22 ರಿಂದ ಅ.7ರ ವರೆಗೆ ನಡೆಸಲಿದ್ದು, ಈ ವೇಳೆಯಲ್ಲಿ ಲಿಂಗಾಯತ ಸಮುದಾಯವರು ಧರ್ಮದ ಕಲಂನಲ್ಲಿ ಲಿಂಗಾಯತ ಎಂದು ಉಪಜಾತಿಯ ಕಲಂ ನಲ್ಲಿ ತಮ್ಮ ತಮ್ಮ ಉಪಜಾತಿಯನ್ನು ಬರೆಸಬೇಕು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ಮನವಿ ಮಾಡಿದರು.
ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವಾಗಿದೆ, ಅದರೊಳಗೆ 97 ಬೇರೆ ಬೇರೆ ಹೆಸರಿನ ಜಾತಿ(ಒಳಪಂಗಡ)ಗಳಿವೆ. ಈವರೆಗೆ ನಡೆದ ಜನಗಣತಿಗಳಲ್ಲಿ ಬಹುತೇಕ ಲಿಂಗಾಯತರು ತಮ್ಮ ಧರ್ಮವನ್ನು ಹಿಂದೂ ಎಂದು ಬರೆಸಿದ್ದು ಕಂಡುಬರುತ್ತದೆ. ಅದು ತಮ್ಮ ಧರ್ಮದ ಬಗ್ಗೆ ಲಿಂಗಾಯತರಲಿದ್ದ ಅರಿವಿನ ಕೊರತೆಯ ಸಂಕೇತವಾಗಿದೆ ಎಂದರು.
ಲಿಂಗಾಯಿತದಲ್ಲಿರುವ 97 ಉಪಜಾತಿಗಳಲ್ಲಿ ವೀರಶೈವ ಒಂದು ಜಾತಿ ಮಾತ್ರ ಲಿಂಗಾಯತದಲ್ಲಿ ವೀರಶೈವವಿದೆ. ಆದರೆ ವೀರಶೈವದಲ್ಲಿ ಲಿಂಗಾಯತವಿಲ್ಲ. ಆದುದರಿಂದ ವೀರಶೈವ ಲಿಂಗಾಯತ ಎನ್ನುವುದು ಸಂಪೂರ್ಣವಾಗಿ ತಪ್ಪು. ಇದೇ ತಪ್ಪನ್ನು ಅಖಿಲ ಭಾರತ ವೀರಶೈವ ಮಹಾಸಭೆ ಮುಂದುವರೆಸುತ್ತಿದೆ. ಇದರಲ್ಲಿ ಆ ಸಂಘಟನೆಗಳ ಪದಾಧಿಕಾರಿಗಳ ರಾಜಕೀಯ ಹಿತಾಸಕ್ತಿ ಅಡಗಿದೆ. ಇಂತಹ ರಾಜಕಾರಣಿಗಳ ಮಾತನ್ನು ಲಿಂಗಾಯತರು ಕೇಳಬಾರದು ಎಂದು ಡಾ.ಬಸವಲಿಂಗ ಪಟ್ಟದೇವರು ಸೂಚನೆ ನೀಡಿದರು.
ಈ ವೇಳೆ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಗಳಾದ ತೋಂಟದ ಸಿದ್ಧರಾಮ ಸ್ವಾಮಿ, ಮಹಾಂತ ದೇವರು, ಬೆಳ್ಳಿ ಮಠ ಶಿವರುದ್ರ ಸ್ವಾಮಿ ಬೇಲಿ ಮಠ, ಸಿದ್ದಲಿಂಗ ಮಹಾಸ್ವಾಮಿ, ಅಲ್ಲಮಪ್ರಭು ಮಹಾಸ್ವಾಮಿ, ಗಂಗಾಮಾತಾಜಿ, ಬಸವಲಿಂಗ ಸ್ವಾಮಿ, ಚನ್ನಬಸವ ಸ್ವಾಮಿ, ನಂಜುಂಡಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.