ಬೆಂಗಳೂರು: ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಬಗ್ಗೆ ಕೇಳಿದರೆ ದಾರಿ ತಪ್ಪಿಸುವ ಉತ್ತರಗಳನ್ನು ಕೊಡುತ್ತ ಬೇರೆ ಬೇರೆ ವಿಚಾರಗಳನ್ನು ಮಾತನಾಡುತ್ತಾರೆ. ರಸ್ತೆ ಗುಂಡಿ ಮುಚ್ಚಲು ಇವರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ನಾಯಕರ ಮಕ್ಕಳಲ್ಲಿ ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಯತೀಂದ್ರ, ಮತ್ತೊಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸುಪುತ್ರ ಇಬ್ಬರೂ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಗುಂಡಿ ತೋಡುತ್ತಿದ್ದಾರೆ. ಕಾಂಗ್ರೆಸ್ಗೇ ಗುಂಡಿ ತೋಡಿ ಈಗ ತಂದೆಯವರನ್ನೇ ಅಪಮಾನಗೊಳಿಸುವ ಮತ್ತು ಅವರನ್ನೇ ಜನರು ಈಗ ಅನುಮಾನದಿಂದ ನೋಡುವ ಪರಿಸ್ಥಿತಿಯನ್ನು ಉದ್ಭವ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಪೂರ್ಣ ಹದಗೆಟ್ಟ ಕಾನೂನು- ಸುವ್ಯವಸ್ಥೆ:
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದನ್ನು ನೂರಾರು ಬಾರಿ ಹೇಳಿದರೂ, ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಒಂದು ಹೆಣ್ಣುಮಗಳ ಮನೆಗೆ ನುಗ್ಗಿ 7 ಜನರು ಅತ್ಯಾಚಾರ ಮಾಡಿದ ದುರ್ಘಟನೆ ಬೆಂಗಳೂರಿನಲ್ಲಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಕೊಲೆಗಳೂ ನಡೆಯುತ್ತಿವೆ. ಮೈಸೂರಿನಲ್ಲಿ ದಲಿತರ ಹಸುಳೆಯನ್ನು ಅತ್ಯಾಚಾರ ಮಾಡಿ ಸಾಯಿಸಿ ಬಿಸಾಡಿದ್ದಾರೆ. ಕಲಬುರ್ಗಿಯ ಅಲೆಮಾರಿ ಸಮುದಾಯವನ್ನು ಕೇಳುವವರಿಲ್ಲ. ಬಿಜಾಪುರದಲ್ಲಿ 11 ವರ್ಷದ ಹೆಣ್ಣುಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇದರ ಕುರಿತು ಕೇಳಿದರೆ ಆರ್. ಎಸ್.ಎಸ್ ಕುರಿತು ಮತ್ತು ಬೇರೆಬೇರೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಹೊಣೆಗೇಡಿ ಸರ್ಕಾರ:
ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಮಾರಕವಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ದಾರಿ ತಪ್ಪಿಸುವ ಮಾತನಾಡುವುದು ಮತ್ತು ಹೊಣೆಗೇಡಿಯಾಗಿ ವರ್ತಿಸುತ್ತಿದೆ. ಗೊಂದಲಗಳನ್ನು ಸೃಷ್ಟಿಸುವುದರಲ್ಲಿ ಕಾಂಗ್ರೆಸ್ ನಾಯಕರೇ ಮುಂಚೂಣಿಯಲ್ಲಿದ್ದಾರೆ. ಯತೀಂದ್ರ ಅವರ ಹೇಳಿಕೆ ನೋಡಿದ್ದೇನೆ. ನನ್ನ ತಂದೆಗೆ ವಯಸ್ಸಾಗಿದೆ. ಅವರ ರಾಜಕೀಯ ಹೆಚ್ಚು ಕಮ್ಮಿ ಮುಗಿದಂತಾಗಿದೆ. ಅವರ ನಾಯಕತ್ವದ ಅಂತ್ಯದ ದಿನಗಳಾಗಿವೆ. ಅದರಿಂದ ಅವರ ಜೊತೆ ಕೆಲಸ ಮಾಡಿದ ಜಾರಕಿಹೊಳಿಯವರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ತಮ್ಮ ಪಕ್ಷದ ತೀರ್ಮಾನದ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
