ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುವ, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ 2003 ಅಡಿಯಲ್ಲಿ ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ಸುಮಾರು 1.82 ಲಕ್ಷ ಜನರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವರ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸಲಾಗಿದೆ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದರು.
ಮಂಗಳವಾರ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನದ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ/ಕಾಲೇಜುಗಳಲ್ಲಿ 100 ಮೀ. ವ್ಯಾಪ್ತಿಯಲ್ಲಿ 2470 ಜನರು ಧೂಮಪಾನ ನಿಷೇಧ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ದಂಡ ವಿಧಿಸಲಾಗಿದೆ. 21 ವರ್ಷದೊಳಗಿನ ಯುವಜನರನ್ನು ಧೂಮಪಾನ, ಮಧ್ಯಪಾನ, ತಂಬಾಕು ಸೇವನೆ, ಡ್ರಗ್ಸ್ ನಂತಹ ಮಾದಕ ವಸ್ತುಗಳ ಸೇವನೆಯಿಂದ ವ್ಯಸನ ಮುಕ್ತರನ್ನಾಗಿಸಲು ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರಗಳ ಮೂಲಕ ಈ ವರ್ಷ ಏಪ್ರಿಲ್ ನಿಂದ ಸೆಪ್ಟೆಂಬರ್-2025ರವರೆಗೆ ಸುಮಾರು 1 ಲಕ್ಷ ಯುವಜನರಿಗೆ ಸಮಾಲೋಚನೆಯನ್ನು ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಮತ್ತು ನಿಮಾನ್ಸ್ ಸಹಯೋಗದಲ್ಲಿ ಟೆಲಿಮಾನಸ್ 14416 ಸಹಾಯವಾಣಿಯನ್ನು ತೆರೆಯಲಾಗಿದೆ. ಈ ಸಹಾಯವಾಣಿಯ ಮೂಲಕ ಮಾದಕ ವ್ಯಸನ ಪೀಡಿತ ಮಕ್ಕಳ ಮುಂದಿನ ಭವಿಷ್ಯವನ್ನು ಸುಧಾರಿಸಲು ಅಗತ್ಯ ಸಹಾಯ ಮತ್ತು ಸಮಾಲೋಚನೆಯನ್ನು ಪಡೆಯಬಹುದಾಗಿದೆ ಎಂದರು.
ದೃಶ್ಯ ಮಾಧ್ಯಮಗಳು ಅತ್ಯಾಚಾರ, ಮಹಿಳಾ ದೌರ್ಜನ್ಯ ಆತ್ಮಹತ್ಯೆ ಮತ್ತು ಇತರ ಪ್ರಕರಣಗಳನ್ನು ವೈಭವೀಕರಿಸಿ ಭಯಗೊಳ್ಳುವಂತೆ ಪ್ರಸಾರ ಮಾಡುವುದನ್ನು ನಿಯಂತ್ರಿಸಬೇಕು. ಪ್ರೆಸ್ ಕೌನ್ಸಿಲ್ ಮಾರ್ಗಸೂಚಿಗಳನ್ನು ದೃಶ್ಯ ಮಾಧ್ಯಮಗಳು ಅಳವಡಿಸಿಕೊಳ್ಳಬೇಕು. ಯಾರು ಈ ರೀತಿಯ ಪ್ರಕರಣಳಿಗೆ ಪ್ರಚಾರ ನೀಡುತ್ತಾರೋ ಅವರ ಮೇಲೆ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ(ನಿಷೇಧ) ಕಾಯ್ದೆ-1986 ರಡಿಯಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮವನ್ನು ದೃಶ್ಯ ಮಾಧ್ಯಮಗಳು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕೇಬಲ್ ಆಕ್ಟ್ ಇದ್ದರೆ ಆ ಕಾಯಿದೆಯಡಿಯಲ್ಲಿ ಕ್ರಮವಹಿಸಲು, ಅಥವಾ ಫಿಲ್ಮ್ಸ್ ಆಕ್ಟ್ ಇದ್ದರೆ ಆ ಕಾಯಿದೆಯಡಿಯಲ್ಲಿ ಕ್ರಮ ವಹಿಸಲು, ಪತ್ರಿಕೋದ್ಯಮಕ್ಕೆ ಸಂಬಂಧಿಸಿದ್ದರೆ ಪತ್ರಿಕೋದ್ಯಮ ಕಾಯಿದೆಯಡಿ ಕ್ರಮವಹಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಹಾಗೂ ವಾರ್ತಾ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
